Press "Enter" to skip to content

Vishva Kannada

ನಾಗೇಶ ಹೆಗಡೆಯವರಿಗೆ ಅಭಿನಂದನೆಗಳು

ಈ ದಿನ ಬೆಳಗ್ಗೆ ಪ್ರಜಾವಾಣಿ ಓದುತ್ತಿದ್ದಂತೆ ಒಂದು ಒಳ್ಳೆಯ ಸುದ್ದಿ ಕಣ್ಣಿಗೆ ಬಿತ್ತು. ನಮ್ಮ ನೆಚ್ಚಿನ ಹಾಗೂ ಜನಪ್ರಿಯ ಕನ್ನಡ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರಿಗೆ ಕರ್ನಾಟಕ ಸರಕಾರವು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು.

ಏಡಿಯಾ ಸೊಲ್ಯೂಶನ್ಸ್ ಕಂಪೆನಿಯಲ್ಲಿ ರಾಜ್ಯೋತ್ಸವ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಏಡಿಯ ಸೊಲೂಶನ್ಸ್ ಎಂಬ ಹೆಸರಿನ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ನವಂಬರ್ ೨೨, ೨೦೦೫ ರಂದು ರಾಜ್ಯೋತ್ಸವವನ್ನು ಆಚರಿಸಲಾಯಿತು. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಕನ್ನಡಕ್ಕೆ ಕೊಡುಗೆ ಏನಿಲ್ಲ ಎಂಬ ಕೂಗು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ರೀತಿಯ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕೆಲಸ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಗ್ಗದ ಭಟ್ಟರೆಂದೇ ಖ್ಯಾತಿ ಪಡೆದ ಡಾ. ಲಕ್ಷ್ಮೀನಾರಾಯಣ ಭಟ್ಟರು, ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕಾರದ ಶ್ರೀ ದು. ಗು. ಲಕ್ಷ್ಮಣ ಮತ್ತು ಕನ್ನಡದ ಪ್ರಪ್ರಥಮ ಅಂತರಜಾಲ ಪತ್ರಿಕೆ ವಿಶ್ವ ಕನ್ನಡದ ಸಂಪಾದಕರಾದ ಡಾ. ಯು. ಬಿ. ಪವನಜರು ಭಾಗವಹಿಸಿದ್ದರು.

ವಿಶ್ವ ಕನ್ನಡ ಸಂಪಾದಕರಿಗೆ ಸನ್ಮಾನ

ಕನ್ನಡದ ಪ್ರಪ್ರಥಮ ಕಾಗದರಹಿತ ಪತ್ರಿಕೆ "ವಿಶ್ವ ಕನ್ನಡ"ದ ಸಂಪಾದಕರಾದ ಡಾ. ಯು. ಬಿ. ಪವನಜ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. ನವಂಬರ್ ೨೧, ೨೦೦೫ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಾಜಿನಗರ ಹಬ್ಬದಲ್ಲಿ ಶಾಸಕ ನೆ. ಲ. ನರೇಂದ್ರಬಾಬು ಅವರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ ನಿಡುಮಾಮಿಡಿ ಸ್ವಾಮೀಜಿಯವರು ಪವನಜರಿಗೆ ಸನ್ಮಾನಿಸಿದರು.

ರಾಜಾಜಿನಗರ ಹಬ್ಬ – ೨೦೦೫

ರಾಜಾಜಿನಗರದಲ್ಲಿ ಕಳೆದ ಬಾರಿ ಜನಮನ್ನಣೆಗೆ ಪಾತ್ರವಾದ ‘ರಾಜಾಜಿನಗರ ಹಬ್ಬ’ ಬರಿ ಕನ್ನಡ ರಾಜೋತ್ಸವವೆಂಬ ಒಣ ಆಚರಣೆಗೆ ಮಾತ್ರ ಮೀಸಲಾಗಿರದೆ ಸಾಂಸ್ಕೃತಿಕವಾಗಿ, ಗ್ರಾಮೀಣ ಸೊಗಡನ್ನು ಜನಮನಗಳಿಗೆ ತಲುಪಿಸುವ ಸಲುವಾಗಿ ಈ ವಾರದಲ್ಲಿ ಅಂದರೆ ದಿನಾಂಕ ೧೯-೧೧-೨೦೦೫ ರಿಂದ ೨೫-೧೧-೨೦೦೫ರ ವರೆಗೆ ಜಾನಪದ ಲೋಕದ ದಿಗ್ಗಜ ಶ್ರೀ ಎಚ್ .ಎಲ್ . ನಾಗೇಗೌಡ ರ ಸ್ಮರಣಾರ್ಥ ‘ಜಾನಪದ ಜಾತ್ರೆ’ಯನ್ನು ಶಾಸಕರಾದ ಅದಕ್ಕಿಂತ ಹೆಚ್ಚಾಗಿ ರಾಜಾಜಿನಗರದ ಹೆಮ್ಮೆಯ ಮಗನಾದ ನೆ.ಲ. ನರೇಂದ್ರಬಾಬು ರವರ ನೇತೃತ್ವದಲ್ಲಿ ಹಮ್ಮಿಕೋಳ್ಳಲಾಗಿದೆ.

ದೀಪ ಬೆಳಗಿ ಉದ್ಘಾಟಿಸುವುದು

ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಉದ್ಘಾಟನೆ ದೀಪ ಬೆಳಗುವ ಮೂಲಕ ಆಗುತ್ತದೆ. ಪೂಜೆ ಮಾಡಲು ನಿರಾಕರಿಸುವ ವಿಚಾರವಾದಗಳೂ ದೀಪ ಬೆಳಗುವುದನ್ನು ವಿರೋಧಿಸುವುದಿಲ್ಲ. ಅವರ ಪ್ರಕಾರ ದೀಪ ಎಂದರೆ ಬೆಳಕು ಎಂದರೆ ಜ್ಞಾನದ ಸಂಕೇತ. ಖಂಡಿತ ಹೌದು. ಅದನ್ನು ಎಲ್ಲರಿಗಿಂತ ಮೊದಲು ಹೇಳಿದ್ದು ಉಪನಿಷತ್ತಿನಲ್ಲಿ ."ತಮಸೋಮಾ ಜ್ಯೋತಿರ್ಗಮಯ" ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ. ಅರೆಬೆಂದ ವಿಚಾರವಾದಿಗಳ ಮಾತು ಹಾಗಿರಲಿ. ಈಗ ಕಾರ್ಯಕ್ರಮಗಳಲ್ಲಿ ದೀಪ ಬೆಳಗುವ ಬಗ್ಗೆ ಬರೋಣ. ಮೊದಲನೆಯದಾಗಿ ದೀಪ ಬೆಳಗಲು ಅವರು ಬಳಸುವುದು ಕ್ಯಾಂಡಲನ್ನು. ಅದೇಕೋ ನನಗೆ ಸರಿ ಕಾಣುವುದಿಲ್ಲ. ಅದರ ಬದಲು ಒಂದು ಚಿಕ್ಕ ಹಣತೆ ತಂದರೆ ಚೆನ್ನಾಗಿರುತ್ತದಲ್ಲವೇ? ದೀಪ ಬೆಳಗುವುದು ಭಾರತೀಯ ಪದ್ಧತಿಯಾಗಿರುವಾಗ ಅದನ್ನೂ ಭಾರತೀಯವಾಗಿಯೇ ಮಾಡಿದರೆ ಚೆನ್ನಾಗಿರುತ್ತದಲ್ಲವೇ?

ಅನನ್ಯ ದಿನದರ್ಶಿಕೆ ಲೋಕಾರ್ಪಣೆ

ಬೆಂಗಳೂರು, ನವಂಬರ್ ೨೦, ೨೦೦೫: [http://www.ananyaculture.org/|ಅನನ್ಯ ಸಾಂಸ್ಕೃತಿಕ] ಸಂಸ್ಥೆಯವರು ಹೊರತಂದಿರುವ [http://vishvakannada.com/node/59|ಹನ್ನೆರಡನೆಯ ದಿನದರ್ಶಿಕೆ] ಅನನ್ಯ ಕ್ಯಾಲೆಂಡರ್ ೨೦೦೬ನ್ನು ಎಸ್. ರಾಜಾರಾಂ ಅವರು ಲೋಕಾರ್ಪಣೆ ಮಾಡಿದರು. ಅವರು ಮಾತನಾಡುತ್ತಾ 'ಭಗವಾನ್ ಶ್ರೀಕೃಷ್ಣನು ಅಕ್ಷರಾಣಾಂ ಅಕರೋಸ್ಮಿ ಎಂದಿದ್ದಾನೆ. ಅನನ್ಯದಲ್ಲಿ "ಅ" ಅಕ್ಷರವಿದೆ, ಅಥವಾ "ಅ" ಅಕ್ಷರದಿಂದ ಅದು ಪ್ರಾರಂಭವಾಗುತ್ತದೆ. ಆದುದರಿಂದ ಅದು ಭಗವಂತನಿಗೆ ಪ್ರಿಯ. ಹಾಗೆಯೆ ನಮಗೂ ನಿಮಗೂ ಪ್ರಿಯ' ಎಂದರು. ಡಾ. ಟಿ. ಎಸ್. ಸತ್ಯವತಿಯವರ ನಿರ್ದೇಶನದಲ್ಲಿ ಕೊಳಲುವಾದನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ರಾಘವೇಂದ್ರ ಅವರು ಎಲ್ಲರನ್ನು ಸ್ವಾಗತಿಸಿದರು. 'ವಿಜ್ಞಾನದ ಹಲವು ವಿಭಾಗಗಳು ಒಂದಕ್ಕೊಂದು ಜೊತೆ ಸೇರುತ್ತಿವೆ. ಜೊತೆ ಸೇರಿ ಕೆಲಸ ಮಾಡುತ್ತಿವೆ. ಇದರಿಂದ ವಿಜ್ಞಾನ ಮುಂದುವರಿಯುತ್ತಿದೆ. ಆದರೆ ಕಲೆಯಲ್ಲಿರುವ ಹಲವು ಪ್ರಕಾರಗಳು ಯಾವಾಗ ಜೊತೆ ಸೇರಿ ಮುಂದುವರಿಯುವುದು?' ಎಂಬ ಪ್ರಶ್ನೆಯನ್ನು ಸಭಿಕರ ಮುಂದಿಟ್ಟರು. ಈ ಸಲದ ಕ್ಯಾಲೆಂಡರ್‌ಗೆ ಬಳಸಿದ ಛಾಯಾಚಿತ್ರಗಳನ್ನು ತೆಗೆದ ರಾಘವೇಂದ್ರ ರಾವ್ ಅವರು ತಮ್ಮ ಅನುಭವಗಳನ್ನು ಹೇಳಿದರು. ಬಿ. ಭಾನುಮತಿಯವರ ನಿರ್ದೇಶನದ ಭರತಾಂಜಲಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಗೋಕಾಕ ಚಳುವಳಿ

ಗೋಕಾಕ ಆಯೋಗ ರಚನೆಯ ಹಿನ್ನಲೆ

ಗೋಕಾಕ ಆಯೋಗವು ರಚನೆಯಾಗುವ ಹಿಂದೆ ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕಲಿಸುತ್ತಿದ್ದ ವಿವಿಧ ಭಾಷೆಗಳ ವಿಷಯದಲ್ಲಿ ಒಂದು ವಿವಾದವೆದ್ದಿತ್ತು. ವಿವಿಧ ಮಾಧ್ಯಮದ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮರಾಠಿ ಮುಂತಾದ ಆಡುಮಾತುಗಳ ಜೊತೆಗೆ ಸಂಸ್ಕೃತವೂ ಪ್ರಥಮ ಭಾಷೆಯಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯುವ ವ್ಯವಸ್ಥೆ ಇರದಿದ್ದರೂ, ಪ್ರೌಢಶಾಲೆಗಳಲ್ಲಿ ಆ ಭಾಷೆಯನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡಿದ್ದರೆ ತುಂಬ ಸುಲಭವಾದ ಪಾಠಗಳನ್ನು ಕಲಿತು, ಸಾಕಷ್ಟು ಹೆಚ್ಚು ಕಲಿತ ಇತರ ಭಾಷೆಗಳ ವಿದ್ಯಾರ್ಥಿಗಳಿಗಿಂತ ತುಂಬ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದ. ಅಲ್ಲದೆ, ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಸಂಸ್ಕೃತ ಅಧ್ಯಾಪಕರು ತುಂಬ ಧಾರಾಳವಾಗಿ ಅಂಕಗಳನ್ನು ಕೊಡುವ ರೀತಿಯಿತ್ತು. ಈಗಲೂ ಇದೆ.

ಕನ್ನಡ ಚಳುವಳಿ : ಇತಿಹಾಸ ಮತ್ತು ವ್ಯಾಪ್ತಿ

(ಸಂಗ್ರಹ)

ಎರಡು ಸಾವಿರ ವರ್ಷಗಳಿಂದ ಕೋಟ್ಯಂತರ ಜನರಿಗೆ ಬದುಕಿನ ಎಲ್ಲಾ ರಂಗಗಳಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿರುವ ನಮ್ಮ ಕನ್ನಡ ಭಾಷೆಯ ಈಗಿರುವ ಕರ್ನಾಟಕ ವ್ಯಾಪ್ತಿಗೂ ಮೀರಿ ಹರಡಿದ್ದ ಕಾಲವೊಂದಿತ್ತು. ನಮ್ಮ ಜನ ಕನ್ನಡವನ್ನು ಹೆಮ್ಮೆಯಿಂದ ಎದೆಗೆ ಅಪ್ಪಿಕೊಂಡಿದ್ದರು. ಈಗ ಅದರ ತೀವ್ರತೆ ಇಳಿದಿದೆ. ನಮ್ಮ ನುಡಿಯ ಬಗ್ಗೆ ಅಭಿಮಾನವನ್ನು ಬಡಿದೆಬ್ಬಿಸುವ ಸಾಮೂಹಿಕ ಪ್ರಯತ್ನವನ್ನೇ ನಾವು `ಕನ್ನಡ ಚಳುವಳಿ' ಎಂದು ಕರೆಯುವುದು.

ಸಿ ಆರ್ ಚಂದ್ರಶೇಖರ್ ಜೊತೆ ಮನೆಯಂಗಳದಲ್ಲಿ ಮಾತುಕತೆ

ಬೆಂಗಳೂರು,ನವಂಬರ್ ೧೯, ೨೦೦೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪ್ರತಿ ತಿಂಗಳು ನಡೆಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯ ಮತ್ತು ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಭಾಗವಹಿಸಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಆಸಕ್ತಿಯಿಂದ ಉತ್ತರಿಸಿದರು. ಅವರು ಇದು ತನಕ ಹಲವು ಕಡೆ ಹೇಳಿದ ಮತ್ತು ತಮ್ಮ ಲೇಖನಗಳಲ್ಲಿ ಬರೆದ ವಿಷಯಗಳನ್ನೇ ಮತ್ತೊಮ್ಮೆ ವಿಶದೀಕರಿಸಿದರು. ಅವರ ಎಲ್ಲ ಲೇಖನಗಳನ್ನು ಓದಿದವರಿಗೆ ಹೊಸದೇನೂ ಸಿಕ್ಕಿರಲಿಕ್ಕಿಲ್ಲ. ಆದರೆ ಆಸಕ್ತಿಯಿಂದ ಭಾಗವಹಿಸಿದ ಜನರಿಗೆ ತಮ್ಮ ಹಲವು ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗಿರಬಹುದು. ಕೆಲವು ಮಾತುಗಳು-

ನಿಜ ಹೇಳಬೇಕೆಂದರೆ!

ನಿಜ ಹೇಳಬೇಕೆಂದರೆ, ನನಗೆ ಈ "ನಿಜ ಹೇಳಬೇಕೆಂದರೆ" ಎಂಬ ಮಾತಿನ ದುರುಪಯೋಗ ಕೇಳಿ ಕೇಳಿ ಸುಸ್ತಾಗಿದೆ. ನಿಜ ಹೇಳಬೇಕೆಂದರೆ, ಒಮ್ಮೆ ಕನ್ನಡದ ಖ್ಯಾತ ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ಜೊತೆ ಕನ್ನಡ ಭವನದಲ್ಲಿ "ಮನೆಯಂಗಳದಲ್ಲಿ ಮಾತುಕತೆ" ಕಾರ್ಯಕ್ರಮವಿತ್ತು. ನಿಜ ಹೇಳಬೇಕೆಂದರೆ, ನಾನು ಅಲ್ಲಿ ವೀಕ್ಷಕನಾಗಿ ಕುಳಿತು ಕೇಳುತ್ತಿದ್ದೆ. ಪ್ರತಿ ಪ್ರಶ್ನೆಗೂ ಅವರ ಉತ್ತರ "ನಿಜ ಹೇಳಬೇಕೆಂದರೆ" ಎಂದು ಪ್ರಾರಂಭವಾಗುತ್ತಿತ್ತು. ನಿಜ ಹೇಳಬೇಕೆಂದರೆ, ನನಗೆ ಒಂದು ಅನುಮಾನ -ಅದುವರೆಗೆ ನಿಸಾರ್ ಅಹಮದ್ ಅವರು ಬರೆದ ಕವನ, ಲೇಖನ, ಮಾಡಿದ ಭಾಷಣಗಳೆಲ್ಲ ಸುಳ್ಳೆ? ನಿಜ ಹೇಳಬೇಕೆಂದರೆ, ನಿಸಾರ್ ಅಹಮದ್ ಅವರೊಬ್ಬರೇ ಅಲ್ಲ, ಈ "ನಿಜ ಹೇಳಬೇಕೆಂದರೆ" ಎಂಬ ಮಾತನ್ನು ಬಹಳಷ್ಟು ಮಂದಿ ಬಹುತೇಕ ಭಾಷಣಗಳಲ್ಲಿ ಬಳಸುವುದನ್ನು ಕೇಳಿ ಕೇಳಿ ಬೇಸತ್ತಿದ್ದೇನೆ.