- ಡಾ| ಎಂ ಚಿದಾನಂದ ಮೂರ್ತಿ
ಸ್ವಾಭಿಮಾನ
ಕನ್ನಡ ಸಂಸ್ಕೃತಿಯ ತಿರುಳನ್ನು ಒಂದೆರಡು ಮಾತುಗಳಲ್ಲಿ ವಿವರಿಸಿ ಎಂದು ಯಾರಾದರೂ ಕೇಳಿದರೆ ಅವರಿಗೆ ನಾನು ಕೊಡುವ ಉತ್ತರ: ``ಸ್ವಾಭಿಮಾನ ಮತ್ತು ಸಮನ್ವಯ". ಸ್ವಾಭಿಮಾನವೆಂದರೆ ತನ್ನ ಬಗ್ಗೆ ಮತ್ತು ತನ್ನತನದ ಬಗ್ಗೆ ಇರುವ ಪೂರ್ಣ ಅರಿವು ಮತ್ತು ವಿಶ್ವಾಸ. ಸ್ವಾಭಿಮಾನವೆಂದರೆ ಅಹಂಕಾರವಲ್ಲ. ಅಹಂಕಾರವು ಬಹುತೇಕ ಸ್ವಾರ್ಥಪರವೂ ಇತರ ಯಾರನ್ನೇ ಗುರುತಿಸದೆ ತನ್ನನ್ನು ಮಾತ್ರ ಎತ್ತಿ ಹಿಡಿದುಕೊಳ್ಳುವ ಸ್ವಪ್ರೇಮವೂ ಆಗಿದ್ದು ಟೊಳ್ಳುತನವನ್ನು ಬೆಳೆಸಿಕೊಂಡಿರುವ ಸ್ವಪ್ರತಿಷ್ಠೆಯ ಪ್ರತೀಕ. ಸ್ವಾಭಿಮಾನಿಯು ಬೆಳೆದ ಮತ್ತು ಬೆಳೆಯುವ ವ್ಯಕ್ತಿಯಾದುದರಿಂದ ಅವನು ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ದೊಡ್ಡತನವನ್ನು ಗುರುತಿಸಲು ಸಿದ್ಧನಿರುತ್ತಾನೆ. ಸ್ವಾಭಿಮಾನವೆನ್ನುವುದು ಎರಡು ಮುಖಗಳ ನಾಣ್ಯವಿದ್ದಂತೆ - ನಾನು ಇನ್ನೊಬ್ಬನಿಗಿಂತ ಕಡಿಮೆ ಅಲ್ಲವೆಂಬ ನಂಬಿಕೆ ಇರುವಂತೆಯೇ ಇತರರೂ ತನಗಿಂತ ಕಡಮೆ ಇರಲಾರರು ಎಂಬ ನಂಬಿಕೆಯು ಅವನಿಗಿರುತ್ತದೆ. ಅವನು ಎಂದೂ ಇನ್ನೊಬ್ಬರ ನೆರಳಾಗಿರಲು ಬಯಸದೆ ತನ್ನ ವಿಶಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಾನೆ. ಯಾವುದೇ ಕ್ಷೇತ್ರದಲ್ಲಾಗಲಿ ಅಂತಹ ಸ್ವಾಭಿಮಾನಿಗಳಿಂದ ಮಾತ್ರವೇ ಮೌಲಿಕ ಕಾರ್ಯಗಳು ನಡೆಯುತ್ತವೆ.
