Press "Enter" to skip to content

Posts published in “ಬ್ಲಾಗ್”

Blogs by Dr Pavanaja U B, editor of Vishva Kannada

ನಾನು ಪ್ರತಿಭಾನ್ವಿತನಲ್ಲ !

ಕನ್ನಡಪ್ರಭ ಪತ್ರಿಕೆಯಲ್ಲಿ ಖ್ಯಾತ ವಿಜ್ಞಾನ ಲೇಖಕರು ಹಾಗೂ ಅತ್ಮೀಯರೂ ಆದ ಹಾಲ್ದೊಡ್ಡೇರಿ ಸುಧೀಂದ್ರ ಅವರ ಅಂಕಣ ಪ್ರತಿ ಭಾನುವಾರ ಇದೆ. ಇಂದಿನ ಅಂಕಣದಲ್ಲಿ ಆವರು ಬರೆಯುತ್ತಾರೆ -"ಭಾರತದ ಎಲ್ಲ ಪ್ರತಿಭಾನ್ವಿತರಂತೆ ಉನ್ನತ ವ್ಯಾಸಂಗಕ್ಕೆಂದು ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ಉಳಿದು ಮತ್ತಷ್ಟು ಕೀರ್ತಿ ಸಂಪಾದಿಸಿದವ". ಇಲ್ಲಿ ಅವರು ಹೇಳುತ್ತಿರುವುದು ಅಮೇರಿಕಾದಲ್ಲಿರುವ ಒಬ್ಬ ಭಾರತೀಯ ಸಂಜಾತ ವಿಜ್ಞಾನಿಯ ಬಗ್ಗೆ. ಸುಧೀಂದ್ರರ ಪ್ರಕಾರ ಅಮೇರಿಕಾಕ್ಕೆ ತೆರಳದೆ ಇಲ್ಲೇ ಉಳಿದಿರುವ ನಾವು ಯಾರೂ ಪ್ರತಿಭಾನ್ವಿತರಲ್ಲ.

ಕಾಮತರ ಹೋಟೆಲಿನಲ್ಲಿ ಕನ್ನಡವಿಲ್ಲ!

ಮುಂಬಯಿಯ ದೇಶೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಹೋಟೆಲ್ ಆರ್ಕಿಡ್ ಇದೆ. ಇದು ಪಂಚತಾರಾ ಹೋಟೆಲ್. ತುಂಬ ಚೆನ್ನಾಗಿದೆ. ನಾನು ನಿನ್ನೆಯಷ್ಟೆ ಅಲ್ಲಿದ್ದೆ. ಈ ಸಲದ ಪ್ರವಾಸದಲ್ಲಿ ನಾನಲ್ಲಿ ಮೂರು ದಿನ ಉಳಕೊಂಡಿದ್ದೆ (ಕಂಪೆನಿ ದುಡ್ಡಲ್ಲಿ ಸ್ವಾಮಿ). ಕಾಮತ ಯಾತ್ರಿನಿವಾಸ ಹೋಟೆಲ್ ನಿಮಗೆ ಗೊತ್ತಿರಬಹುದು. ಇವರ ಹೋಟೆಲುಗಳು ಬೆಂಗಳೂರು-ತುಮಕೂರು ಮಧ್ಯೆ, ಹಾಸನಕ್ಕೆ ಸಮೀಪ, ರಾಮನಗರದಲ್ಲಿ, ಹೀಗೆ ಹಲವಾರು ಕಡೆ ಇವೆ. ಅವರ ಎಲ್ಲ ಹೋಟೆಲುಗಳು ತುಂಬ ಚೆನ್ನಾಗಿವೆ. ಅದೇ ರೀತಿ ಆರ್ಕಿಡ್ ಕೂಡ ತುಂಬ ಚೆನ್ನಾಗಿದೆ. ಏಷ್ಯದ ಪ್ರಥಮ ಪರಿಸರ ಸ್ನೇಹಿ ಹೋಟೆಲ್ ಎಂಬ ಬಿರುದು ಬೇರೆ.

ವೆಂಕಟಸುಬ್ಬಯ್ಯನವರಿಗೆ ಅಭಿನಂದನೆಗಳು

"ಇಗೋ ಕನ್ನಡ" ಖ್ಯಾತಿಯ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಹಂಪೆ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಘೋಷಿಸಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಪ್ರಜಾವಾಣಿ ಪತ್ರಿಕೆಯಲ್ಲಿ ಜಿ.ವಿ. ಅವರು ಬರೆಯುತ್ತಿರುವ ಇಗೋ ಕನ್ನಡ ಅಂಕಣ ನನಗೆ ತುಂಬ ಅಚ್ಚುಮೆಚ್ಚು. ಈ ಅಂಕಣದ ಲೇಖನಗಳು ಪುಸ್ತಕರೂಪದಲ್ಲಿ ಈಗಾಗಲೇ ಎರಡು ಆವೃತ್ತಿಗಳಲ್ಲಿ ಬಂದಿವೆ. ಅವೆರಡೂ ನನ್ನಲ್ಲಿ ಇವೆ. ಲೇಖನ ಬರೆಯುವಾಗ ಯಾವುದಾದರೊಂದು ಪದದದ ಬಗೆಗೆ ಅನುಮಾನ ಬಂದಾಗ ನಾನು ಈ ಪುಸ್ತಕಗಳ ಮೊರೆಹೋಗುತ್ತೇನೆ. ಕನ್ನಡಕ್ಕೆ ಜಿ.ವಿ.ಯವರ ಕೊಡುಗೆ ಅಪಾರ. ನಿಘಂಟು ರಚನೆಯಲ್ಲಿ ಅವರ ಕೆಲಸ ಮಾಡಿದ್ದಾರೆ.

ಮುಂಬಯಿ ಪೋಲೀಸರ ಕಾರ್ಯವೈಖರಿ

ಒಮ್ಮೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ ಬದಲಿಸಿ “ಕುಳಿತುಕೊಳ್ಳಿ, ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ನನಗೆ ಬೇಕಾದಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಇಳಿದಾಗ ಪುನ ನೂರು ರೂಪಾಯಿ ಕೊಡಲು ಒತ್ತಾಯಿಸಿದ. ಮೀಟರಿನಲ್ಲಿ ಎಪ್ಪತ್ತು ರೂ ಆಗಿತ್ತು. ನಾನು ನೂರು ರೂ ಕೊಡಲು ಒಪ್ಪಲಿಲ್ಲ. ಎಪ್ಪತ್ತು ರೂ ಮಾತ್ರ ಕೊಡುತ್ತೇನೆ ಎಂದು ಹೇಳಿ, ನನ್ನಲ್ಲಿ ಚಿಲ್ಲರೆ ಇಲ್ಲದಿದ್ದ ಪ್ರಯುಕ್ತ ನೂರು ರೂಪಾಯಿನ ನೋಟು ನೀಡಿದೆ. ಆತ ಟ್ಯಾಕ್ಸಿ ಹೊರಡಿಸಲು ಅನುವಾದ. ಬಾಕಿ ಮೂವತ್ತು ರೂ ಕೇಳಿದರೆ “ಬೇಕಿದ್ದರೆ ಪೋಲೀಸ್ ಸ್ಟೇಶನ್ನಿಗೆ ಹೋಗಿ ಕೇಳು” ಎಂದು ದಬಾಯಿಸಿ ಟ್ಯಾಕ್ಸಿಯನ್ನು ಓಡಿಸಿಕೊಂಡು ಹೋದ. ಅಲ್ಲಿ ನಾನು ಹೋಗಬೇಕಾಗಿದ್ದ ಕಂಪೆನಿಯಲ್ಲಿ ನನ್ನ ಕೆಲಸ ಆದ ಬಳಿಕ ಸಮೀಪದಲ್ಲೇ ಇದ್ದ ಪೋಲೀಸ್ ಠಾಣೆಗೆ ಹೋಗಿ ಕಥೆ ಪೂರ್ತಿ ಹೇಳಿ ಟ್ಯಾಕ್ಸಿಯ ನಂಬರ್ ಬರೆದುಕೊಂಡಿದ್ದ ಕಾಗದದ ಚೂರನ್ನು ನೀಡಿದೆ. ಆತ ಆ ಕಾಗದವನ್ನು ಕಿಸೆಗೆ ಹಾಕಿಕೊಂಡು “ಈಗ ನಿಮಗೆ ಮೂವತ್ತು ರೂ ಬರಬೇಕು, ಅಷ್ಟೆ ತಾನೆ” ಎಂದು ಹೇಳಿ ಕಿಸೆಯಿಂದ ಮೂವತ್ತು ರೂ ತೆಗೆದು ನೀಡಿದ. ನನಗೆ ಆಶ್ಚರ್ಯವಾಯಿತು. “ನೀವು ಯಾಕೆ ಕೊಡುತ್ತಿದ್ದೀರಾ?” ಎಂದು ಪ್ರಶ್ನಿಸಿದೆ. ಆತ “ಈ ಟ್ಯಾಕ್ಸಿ ಡ್ರೈವರ್ ಇಲ್ಲೇ ಸುತ್ತಾಡುತ್ತಿರುತ್ತಾನೆ. ನಮಗೆ ಸಿಕ್ಕೇ ಸಿಗುತ್ತಾನೆ. ಆತನ ಕೈಯಿಂದ ನಾವು ವಸೂಲು ಮಾಡಿಕೊಳ್ಳುತ್ತೇವೆ. ಈಗ ನೀವು ಇಲ್ಲಿಂದ ಹೋಗಬಹುದು” ಎಂದ! ಬೆಂಗಳೂರಿನಲ್ಲಿ ರಿಕ್ಷಾ ಡ್ರೈವರುಗಳ ವಿರುದ್ಧ ಪೋಲೀಸರಿಗೆ ದೂರು ನೀಡಲು ಪ್ರಯತ್ನಿಸಿದ್ದೀರಾ?

ನಾಗೇಶ ಹೆಗಡೆಯವರಿಗೆ ಅಭಿನಂದನೆಗಳು

ಈ ದಿನ ಬೆಳಗ್ಗೆ ಪ್ರಜಾವಾಣಿ ಓದುತ್ತಿದ್ದಂತೆ ಒಂದು ಒಳ್ಳೆಯ ಸುದ್ದಿ ಕಣ್ಣಿಗೆ ಬಿತ್ತು. ನಮ್ಮ ನೆಚ್ಚಿನ ಹಾಗೂ ಜನಪ್ರಿಯ ಕನ್ನಡ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರಿಗೆ ಕರ್ನಾಟಕ ಸರಕಾರವು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು.

ದೀಪ ಬೆಳಗಿ ಉದ್ಘಾಟಿಸುವುದು

ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಉದ್ಘಾಟನೆ ದೀಪ ಬೆಳಗುವ ಮೂಲಕ ಆಗುತ್ತದೆ. ಪೂಜೆ ಮಾಡಲು ನಿರಾಕರಿಸುವ ವಿಚಾರವಾದಗಳೂ ದೀಪ ಬೆಳಗುವುದನ್ನು ವಿರೋಧಿಸುವುದಿಲ್ಲ. ಅವರ ಪ್ರಕಾರ ದೀಪ ಎಂದರೆ ಬೆಳಕು ಎಂದರೆ ಜ್ಞಾನದ ಸಂಕೇತ. ಖಂಡಿತ ಹೌದು. ಅದನ್ನು ಎಲ್ಲರಿಗಿಂತ ಮೊದಲು ಹೇಳಿದ್ದು ಉಪನಿಷತ್ತಿನಲ್ಲಿ ."ತಮಸೋಮಾ ಜ್ಯೋತಿರ್ಗಮಯ" ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ. ಅರೆಬೆಂದ ವಿಚಾರವಾದಿಗಳ ಮಾತು ಹಾಗಿರಲಿ. ಈಗ ಕಾರ್ಯಕ್ರಮಗಳಲ್ಲಿ ದೀಪ ಬೆಳಗುವ ಬಗ್ಗೆ ಬರೋಣ. ಮೊದಲನೆಯದಾಗಿ ದೀಪ ಬೆಳಗಲು ಅವರು ಬಳಸುವುದು ಕ್ಯಾಂಡಲನ್ನು. ಅದೇಕೋ ನನಗೆ ಸರಿ ಕಾಣುವುದಿಲ್ಲ. ಅದರ ಬದಲು ಒಂದು ಚಿಕ್ಕ ಹಣತೆ ತಂದರೆ ಚೆನ್ನಾಗಿರುತ್ತದಲ್ಲವೇ? ದೀಪ ಬೆಳಗುವುದು ಭಾರತೀಯ ಪದ್ಧತಿಯಾಗಿರುವಾಗ ಅದನ್ನೂ ಭಾರತೀಯವಾಗಿಯೇ ಮಾಡಿದರೆ ಚೆನ್ನಾಗಿರುತ್ತದಲ್ಲವೇ?

ನಿಜ ಹೇಳಬೇಕೆಂದರೆ!

ನಿಜ ಹೇಳಬೇಕೆಂದರೆ, ನನಗೆ ಈ "ನಿಜ ಹೇಳಬೇಕೆಂದರೆ" ಎಂಬ ಮಾತಿನ ದುರುಪಯೋಗ ಕೇಳಿ ಕೇಳಿ ಸುಸ್ತಾಗಿದೆ. ನಿಜ ಹೇಳಬೇಕೆಂದರೆ, ಒಮ್ಮೆ ಕನ್ನಡದ ಖ್ಯಾತ ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ಜೊತೆ ಕನ್ನಡ ಭವನದಲ್ಲಿ "ಮನೆಯಂಗಳದಲ್ಲಿ ಮಾತುಕತೆ" ಕಾರ್ಯಕ್ರಮವಿತ್ತು. ನಿಜ ಹೇಳಬೇಕೆಂದರೆ, ನಾನು ಅಲ್ಲಿ ವೀಕ್ಷಕನಾಗಿ ಕುಳಿತು ಕೇಳುತ್ತಿದ್ದೆ. ಪ್ರತಿ ಪ್ರಶ್ನೆಗೂ ಅವರ ಉತ್ತರ "ನಿಜ ಹೇಳಬೇಕೆಂದರೆ" ಎಂದು ಪ್ರಾರಂಭವಾಗುತ್ತಿತ್ತು. ನಿಜ ಹೇಳಬೇಕೆಂದರೆ, ನನಗೆ ಒಂದು ಅನುಮಾನ -ಅದುವರೆಗೆ ನಿಸಾರ್ ಅಹಮದ್ ಅವರು ಬರೆದ ಕವನ, ಲೇಖನ, ಮಾಡಿದ ಭಾಷಣಗಳೆಲ್ಲ ಸುಳ್ಳೆ? ನಿಜ ಹೇಳಬೇಕೆಂದರೆ, ನಿಸಾರ್ ಅಹಮದ್ ಅವರೊಬ್ಬರೇ ಅಲ್ಲ, ಈ "ನಿಜ ಹೇಳಬೇಕೆಂದರೆ" ಎಂಬ ಮಾತನ್ನು ಬಹಳಷ್ಟು ಮಂದಿ ಬಹುತೇಕ ಭಾಷಣಗಳಲ್ಲಿ ಬಳಸುವುದನ್ನು ಕೇಳಿ ಕೇಳಿ ಬೇಸತ್ತಿದ್ದೇನೆ.

ಪುಸ್ತಕ ಮೇಳ

ಬೆಂಗಳೂರು ಪುಸ್ತಕೋತ್ಸವ ಮತ್ತೊಮ್ಮೆ ಬಂದಿದೆ. ಕಳೆದ ವರ್ಷದಂತೆ ಈ ಸಲವೂ ಬಹಳ ಆಸಕ್ತಿಯಿಂದ ಹೋದೆ. ದುಃಖದ ಸಂಗತಿಯೆಂದರೆ ಹೋದ ವರ್ಷದಂತೆ ಈ ವರ್ಷವೂ ನಿರಾಸೆಯಿಂದ ವಾಪಾಸು ಬಂದೆ ಎಂದೇ ಹೇಳಬಹುದು.