<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಲೇಖನ | Vishva Kannada</title>
	<atom:link href="https://vishvakannada.com/category/article/feed/" rel="self" type="application/rss+xml" />
	<link>https://vishvakannada.com</link>
	<description></description>
	<lastBuildDate>Thu, 26 Dec 2024 06:17:23 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>
	<item>
		<title>ಪರೀಕ್ಷೆಯಲ್ಲಿ ವಂಚನೆಗೂ ತಂತ್ರಜ್ಞಾನದ ಬಳಕೆ</title>
		<link>https://vishvakannada.com/%e0%b2%b2%e0%b3%87%e0%b2%96%e0%b2%a8/tech-for-cheating-in-exams/</link>
					<comments>https://vishvakannada.com/%e0%b2%b2%e0%b3%87%e0%b2%96%e0%b2%a8/tech-for-cheating-in-exams/#respond</comments>
		
		<dc:creator><![CDATA[Prajna Devadiga]]></dc:creator>
		<pubDate>Thu, 26 Dec 2024 05:29:59 +0000</pubDate>
				<category><![CDATA[ಲೇಖನ]]></category>
		<category><![CDATA[Tech for cheating in exams]]></category>
		<category><![CDATA[cheating]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[technology]]></category>
		<category><![CDATA[ಅಂತರಜಾಲ]]></category>
		<category><![CDATA[ತಂತ್ರಜ್ಞಾನ]]></category>
		<category><![CDATA[ದುರುಪಯೋಗ]]></category>
		<category><![CDATA[ಪರೀಕ್ಷೆಯಲ್ಲಿ ವಂಚನೆಗೂ ತಂತ್ರಜ್ಞಾನದ ಬಳಕೆ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ವಂಚನೆ]]></category>
		<guid isPermaLink="false">https://vishvakannada.com/?p=2439</guid>

					<description><![CDATA[<p>ಕರ್ನಾಟಕದಲ್ಲಿ ಕೆ.ಪಿ.ಎಸ್.ಸಿ. ಪ್ರವೇಶ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ವಂಚನೆ ಮಾಡಿದ ಸುದ್ದಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು ಬಹುಮಟ್ಟಿಗೆ ಮುನ್ನಾಬಾಯಿ ಎಂಬಿಬಿಎಸ್ ಸಿನಿಮಾದ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಆ ಸಿನಿಮಾದಲ್ಲಿ ನಾಯಕ ಹೊರಗಿನಿಂದ ಯಾರೋ&#8230;</p>
<p>The post <a href="https://vishvakannada.com/%e0%b2%b2%e0%b3%87%e0%b2%96%e0%b2%a8/tech-for-cheating-in-exams/">ಪರೀಕ್ಷೆಯಲ್ಲಿ ವಂಚನೆಗೂ ತಂತ್ರಜ್ಞಾನದ ಬಳಕೆ</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<p class="wp-block-paragraph">ಕರ್ನಾಟಕದಲ್ಲಿ ಕೆ.ಪಿ.ಎಸ್.ಸಿ. ಪ್ರವೇಶ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ವಂಚನೆ ಮಾಡಿದ ಸುದ್ದಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು ಬಹುಮಟ್ಟಿಗೆ ಮುನ್ನಾಬಾಯಿ ಎಂಬಿಬಿಎಸ್ ಸಿನಿಮಾದ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಆ ಸಿನಿಮಾದಲ್ಲಿ ನಾಯಕ ಹೊರಗಿನಿಂದ ಯಾರೋ ಉತ್ತರವನ್ನು ಹೇಳಿದುದನ್ನು ಮೊಬೈಲ್ ಫೋನ್ ಮತ್ತು ಇಯರ್‌ಫೋನ್ ಬಳಸಿ ಬರೆದು ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ. ಆ ಸಿನಿಮಾ ಬಂದ ಕಾಲದಲ್ಲಿ ಬ್ಲೂಟೂತ್ ತಂತ್ರಜ್ಞಾನ ಇಷ್ಟು ಬಳಕೆಗೆ ಬಂದಿರಲಿಲ್ಲ. ಬಂದಿದ್ದರೆ ಅಲ್ಲಿ ಬಳಸಿದ ಮಾಮೂಲಿ ಇಯರ್‌ಫೋನ್ ಬದಲು ಅತ್ಯಾಧುನಿಕ, ಸುಲಭದಲ್ಲಿ ಕಾಣಿಸದ, ಬ್ಲೂಟೂತ್ ಇಯರ್‌ಫೋನ್ ಇರುತ್ತಿತ್ತು. ಯಾವುದೇ ಹೊಸ ಸೌಲಭ್ಯ, ತಂತ್ರಜ್ಞಾನ ಬಂದಾಗ ಎರಡು ರೀತಿಯ ಸಂಗತಿಗಳು ಆಗುತ್ತವೆ. ಅವು ಉಪಯೋಗ ಮತ್ತು ದುರುಪಯೋಗ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ಹೇಗೆ ದುರುಪಯೋಗ ಮಾಡಬಹುದು, ಅದರಲ್ಲೂ ಪರೀಕ್ಷೆಯಲ್ಲಿ ವಂಚನೆಗೆ ಹೇಗೆಲ್ಲ ಬಳಸಬಹುದು ಎಂಬುದನ್ನು ನೋಡೋಣ.</p>



<p class="wp-block-paragraph">ಎಲ್ಲ ವಂಚನೆಗಳ ಮೂಲ ವಿಧಾನ ಬಹುತೇಕ ಒಂದೇ. ಬ್ಲೂಟೂತ್ ಇಯರ್‌ಫೋನ್ ಅನ್ನು ಬಳಸಿ ಆಲಿಸುವುದು. ಹೊರಗಿನಿಂದ ಒಬ್ಬ ಪ್ರಶ್ನೆಗಳಿಗೆ ಸರಿಯದ ಉತ್ತರವನ್ನು ಓದಿ ಹೇಳುತ್ತಾನೆ. ಅದನ್ನು ಕೇಳಿಸಿಕೊಂಡ ಈತ ಉತ್ತರ ಬರೆಯುತ್ತಾನೆ. ಹೀಗೆ ಮಾಡುವಾಗ ಇಯರ್‌ಫೋನ್ ಕಾಣಿಸುವುದಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಇಲ್ಲಿ ಬರುವುದು ಆಧುನಿಕ ತಂತ್ರಜ್ಞಾನ. ಇಂತಹ ಸಂದರ್ಭಗಳಿಗೆಂದೇ ಅತ್ಯಂತ ಚಿಕ್ಕ ಬ್ಲೂಟೂತ್ ಇಯರ್‌ಫೋನ್‌ಗಳು ಲಭ್ಯವಿವೆ. ಅವು ಎಷ್ಟು ಚಿಕ್ಕವಿವೆ ಎಂದರೆ ಕಿವಿಯ ಕಾಲುವೆಯೊಳಗೆ ಅವು ಹೋಗಿ ಕುಳಿತುಕೊಳ್ಳುತ್ತವೆ. ಯಾರಿಗೂ ಗೊತ್ತೇ ಆಗಲಾರದು. ಅದು ಬರಿಯ ಇಯರ್‌ಫೋನ್ ಆಯಿತು. ಅದು ತನ್ನಷ್ಟಕ್ಕೆ ಅತಿ ದೂರದಲ್ಲಿರುವ ವ್ಯಕ್ತಿಗೆ ಸಂಪರ್ಕ ಹೊಂದಲಾರದು. ಬ್ಲೂಟೂತ್ ಹೆಚ್ಚೆಂದರೆ 10 ಮೀ. ವ್ಯಾಪ್ತಿಯದ್ದು. ಈ ಬ್ಲೂಟೂತ್ ಇಯರ್‌ಫೋನ್ ಒಂದು ಚಿಕ್ಕ ಗ್ಯಾಜೆಟ್‌ಗೆ ಸಂಪರ್ಕ ಹೊಂದಿರುತ್ತದೆ. ಅದು ಒಂದು ಚಿಕ್ಕ ಮೊಬೈಲ್ ಫೋನ್ ಎನ್ನಬಹುದು. ಯಾಕೆಂದರೆ ಅದರಲ್ಲಿ ಸಿಮ್ ಕಾರ್ಡ್ ಇರುತ್ತದೆ. ಈ ಸಾಧನ ಒಂದು ಪೆನ್ಸಿಲ್ ರಬ್ಬರ್‌ನಷ್ಟು ಚಿಕ್ಕದೂ ಇರಬಹುದು. ನೋಡಲೂ ರಬ್ಬರ್‌ನಂತೆಯೇ ಕಾಣಿಸುತ್ತದೆ. ಆದರೆ ಅದರಲ್ಲಿ ಸಿಮ್‌ ಕಾರ್ಡ್, ಅದನ್ನು ನಡೆಸಲು ಬೇಕಾದ ಪುಟಾಣಿ ಬ್ಯಾಟರಿ ಎಲ್ಲ ಇರುತ್ತದೆ. ಇದು ಇನ್ನೂ ಹಲವು ರೂಪಗಳಲ್ಲಿ ಲಭ್ಯವಿದೆ. ಬ್ಯಾಂಕಿನ ಎಟಿಎಂ ಕಾರ್ಡ್ ರೂಪದಲ್ಲಿಯೂ ದೊರೆಯುತ್ತದೆ. ನೋಡಿದವರಿಗೆ ಸುಲಭದಲ್ಲಿ ಗೊತ್ತಾಗಲಾರದು.</p>



<figure class="wp-block-image size-full is-resized"><a href="https://vishvakannada.com/wp-content/uploads/2024/12/Tech-for-cheating-in-exams-chatgpt.webp"><img fetchpriority="high" decoding="async" width="1024" height="1024" src="https://vishvakannada.com/wp-content/uploads/2024/12/Tech-for-cheating-in-exams-chatgpt.webp" alt="" class="wp-image-2440" style="aspect-ratio:1;width:503px;height:auto" srcset="https://vishvakannada.com/wp-content/uploads/2024/12/Tech-for-cheating-in-exams-chatgpt.webp 1024w, https://vishvakannada.com/wp-content/uploads/2024/12/Tech-for-cheating-in-exams-chatgpt-300x300.webp 300w, https://vishvakannada.com/wp-content/uploads/2024/12/Tech-for-cheating-in-exams-chatgpt-150x150.webp 150w, https://vishvakannada.com/wp-content/uploads/2024/12/Tech-for-cheating-in-exams-chatgpt-768x768.webp 768w" sizes="(max-width: 1024px) 100vw, 1024px" /></a><figcaption class="wp-element-caption">ಕಾಲ್ಪನಿಕ ಚಿತ್ರ</figcaption></figure>



<p class="wp-block-paragraph">ಉತ್ತರ ಪ್ರದೇಶದಲ್ಲಿ ಪೋಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬಂದವರನ್ನು ಕೋಣೆಯೊಳಗಡೆ ಕಳುಹಿಸುವ ಮೊದಲು ಪ್ರತಿಯೊಬ್ಬರನ್ನೂ ಲೋಹ ಪತ್ತೆ ಹಚ್ಚುವ ಸಾಧನ ಮೂಲಕ ಪರೀಕ್ಷೆ ಮಾಡಿ ಒಳಗೆ ಕಳುಹಿಸಲಾಗುತ್ತಿತ್ತು. ಒಬ್ಬಾತನ ತಲೆಯ ಮೇಲೆ ಅದನ್ನು ಹಿಡಿದಾಗ ಅದು ಸದ್ದು ಮಾಡಿತು. ಅವನ ತಲೆಯ ಕೂದಲನ್ನು ಪರೀಕ್ಷಿಸಿದಾಗ ಅಲ್ಲಿ ಯಾವ ಲೋಹದ ಸಾಧನವೂ ಕಂಡುಬರಲಿಲ್ಲ. ಪುನಃ ಪರೀಕ್ಷೆ ಮಾಡಿದರು. ಆಗಲೂ ಬೀಪ್ ಬೀಪ್ ಬರತೊಡಗಿತು. ಒಬ್ಬರಿಗೆ ಸ್ವಲ್ಪ ಅನುಮಾನ ಬಂದು ಆತನ ತಲೆಗೂದಲನ್ನು ಸ್ವಲ್ಪ ಎಳೆದು ನೊಡಿದರು. ಆಗ ಗೊತ್ತಾಯಿತು ನೋಡಿ ನಿಜ ಬಣ್ಣ. ಆತನ ತಲೆಗೂದಲು ಕೃತಕವಾಗಿತ್ತು. ಅಂದರೆ ಆತ ವಿಗ್ ಧರಿಸಿದ್ದ. ವಿಗ್‌ನ ಅಡಿಯಲ್ಲಿ ಬ್ಲೂಟೂತ್ ಸಾಧನವಿತ್ತು. ಕಿವಿಯೊಳಗೆ ಅತಿ ಚಿಕ್ಕ ಬ್ಲೂಟೂತ್ ಇಯರ್‌ಫೋನ್ ಇತ್ತು. ಕೆಲವರು ಅಂಗಿಯ ಹೊಲಿಗೆಯ ಒಳಗೆ ಬ್ಲೂಟೂತ್ ಸಾಧನವನ್ನು ಹೊಲಿಸಿಕೊಂಡದ್ದೂ ಪತ್ತೆಯಾಗಿದೆ. ಇನ್ನೊಬ್ಬರು ಬ್ಲೂಟೂತ್ ಚಪ್ಪಲಿ ಧರಿಸಿ ಪರೀಕ್ಷೆಗೆ ಬಂದಿದ್ದರು.</p>



<p class="wp-block-paragraph">ಸ್ಮಾರ್ಟ್‌ವಾಚ್ ಎಲ್ಲರಿಗೂ ಗೊತ್ತಿದೆ. ಪರೀಕ್ಷೆಯಲ್ಲಿ ವಂಚಿಸುವವರಿಗೆಂದೇ ವಿಶೇಷ ಸ್ಮಾರ್ಟ್‌ವಾಚ್ ಲಭ್ಯವಿದೆ. ಇದು ವೃತ್ತಾಕಾರದ ಡಯಲ್ ಹೊಂದಿದ್ದು ಸಾಮಾನ್ಯ ವಾಚಿನಂತೆಯೇ ಕಾಣುತ್ತದೆ. ಅದನ್ನು ಕಟ್ಟಿಕೊಂಡ ಕೈಯನ್ನು ಒಮ್ಮೆ ಕುಲುಕಿಸಿದರೆ ಅದರ ಪರದೆಯ ಮೇಲೆ ಸಂದೇಶದ ಮಾದರಿಯಲ್ಲಿ ಪಠ್ಯವು ಮೂಡಿಬರುತ್ತದೆ. ಅದು ಕೆಳಗಿನಿಂದ ಮೇಲಕ್ಕೆ ಸರಿಯುತ್ತದೆ. ಯಾರಾದರೂ ಪಕ್ಕ ಬಂದರೆ ಕೈಯನ್ನು ಇನ್ನೊಮ್ಮೆ ಕುಲುಕಿದರೆ ಆಯಿತು. ಆಗ ವಾಚ್ ಮಾಮೂಲಿ ವಾಚಿನಂತಾಗಿ ಅದರಲ್ಲಿ ಮುಳ್ಳುಗಳು ಕಾಣಿಸುತ್ತವೆ.</p>



<p class="wp-block-paragraph">ಈ ರೀತಿ ಮಾಡುವಾಗ ಒಂದು &nbsp;ವಿಷಯ ಗಮನಿಸಿರಬಹುದು. ಅದೇನೆಂದರೆ ಹೊರಗಿನಿಂದ ಉತ್ತರ ಓದಿ ಹೇಳುವವರಿಗೆ ಕೋಣೆಯ ಒಳಗೆ ಕುಳಿತು ಬರೆಯುತ್ತಿರುವವನ ಜೊತೆ ಮಾತನಾಡಲು ಆಗುವುದಿಲ್ಲ. ಆತನಿಗೆ ಉತ್ತರ ಸರಿಯಾಗಿ ಕೇಳಿತೇ ಇಲ್ಲವೇ ಎಂದು ಗೊತ್ತಾಗುವುದು ಹೇಗೆ? ಇದಕ್ಕೂ ಖದೀಮರು ಉಪಾಯ ಮಾಡಿಕೊಂಡಿದ್ದಾರೆ. ಉತ್ತರ ಬರೆಯುವಾತ ಕೆಮ್ಮಿನ ಮೂಲಕ ಹೊರಗಿನವನಿಗೆ ಸಂಕೇತ ಕಳುಹಿಸುತ್ತಾನೆ. ಒಮ್ಮೆ ಕೆಮ್ಮಿದರೆ ಉತ್ತರ ಕೇಳಿಸಿಕೊಂಡಿದ್ದೇನೆ, ಮುಂದಿನ ಪ್ರಶ್ನೆಗೆ ಹೋಗಬಹುದು ಎಂದು ಅರ್ಥ. ಎರಡು ಸಲ ಕೆಮ್ಮಿದರೆ ಉತ್ತರ ಇನ್ನೊಮ್ಮೆ ಓದಿ ಹೇಳು ಎಂದು.</p>



<p class="wp-block-paragraph">ಈ ಎಲ್ಲ ವಿಧಾನಗಳಲ್ಲಿ ಹೊರಗಿನಿಂದ ಉತ್ತರ ಓದಿ ಹೇಳುವವನ ಕೈಯಲ್ಲಿ ಪ್ರಶ್ನೆ ಪತ್ರಿಕೆ ಇರಬೇಕು. ಅದು ಲಭ್ಯವಿಲ್ಲದಿದ್ದಾಗ ಏನು ಉಪಾಯ? ಅದಕ್ಕೂ ಆದುನಿಕ ತಂತ್ರಜ್ಞಾನಾಧಾರಿತ ವಂಚಕರು ಪರಿಹಾರ ಕಂಡುಕೊಂಡಿದ್ದಾರೆ. ಕ್ಯಾಮೆರ ಅಳವಡಿಸಿರುವ ಕನ್ನಡಕಗಳು ಲಭ್ಯವಿವೆ. ಇವುಗಳಲ್ಲಿ ಸಿಮ್ ಕಾರ್ಡ್ ಹಾಕಬಹುದು. ಕಿವಿಗೆ ಇಯರ್‌ಫೋನ್ ಕೂಡ ಇವುಗಳಲ್ಲಿ ಅಡಕವಾಗಿರುತ್ತವೆ. ನೋಡಲು ಮಾಮೂಲಿ ಗಾಗಲ್ ತರಹ ಕಾಣಿಸುತ್ತದೆ. ಅದನ್ನು ಹಾಕಿಕೊಂಡು ಪ್ರಶ್ನೆಪತ್ರಿಕೆಯನ್ನು ನೋಡಿದರೆ ಅದು ಕ್ಯಾಮೆರಾ ಮೂಲಕ ಹೊರಗೆ ಸಂಪರ್ಕದಲ್ಲಿರುವವನಿಗೆ ತಲುಪುತ್ತದೆ. ಆತ ಅಲ್ಲಿಂದ ಪ್ರಶ್ನೆಗೆ ಉತ್ತರವನ್ನು ಓದಿ ಹೇಳಿದರೆ ಅದು ಈತನಿಗೆ ಇಯರ್‌ಫೋನ್ ಮೂಲಕ ತಲುಪುತ್ತದೆ.</p>



<p class="wp-block-paragraph">ಇನ್ನೂ ಹಲವು ನಮೂನೆಯ ಸಾಧನಗಳು ಲಭ್ಯವಿವೆ. ಕೆಲವು ಉದಾಹರಣೆಗಳು: ಬ್ಲೂಟೂತ್ ಅಳವಡಿಸಿರುವ ಮುಖಗವಸು (ಮಾಸ್ಕ್), ಕೈಗೆ ಬ್ರೇಸ್‌ಲೆಟ್ ಮಾದರಿಯ ಸಾಧನ, ಕುತ್ತಿಗೆಗೆ ಸರದ ಮಾದರಿಯ ಸಾಧನ, ಫೇಸ್ ಮಾಸ್ಕ್, ಬ್ರಾ, ಚಡ್ಡಿ, ಇತ್ಯಾದಿ. ಇಂತಹ ಸಾಧನಗಳನ್ನು ಮಾರಲೆಂದೇ ಜಾಲತಾಣಗಳಿವೆ. ಅವುಗಳ ವಿಳಾಸವನ್ನು ಇಲ್ಲಿ ನೀಡುತ್ತಿಲ್ಲ. &nbsp;&nbsp;&nbsp;</p>



<p class="wp-block-paragraph">ಯಾವ ಯಾವ ರೀತಿಯಲ್ಲಿ ವಂಚಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ ಕೇವಲ ಮಾಹಿತಿಗೋಸ್ಕರ ನೀಡಿದ್ದೇನೆ. ನಾನೂ ಆ ರೀತಿಯಲ್ಲಿ ವಂಚಿಸಿ ಪರೀಕ್ಷೆಯಲ್ಲಿ ಪಾಸಾಗುತ್ತೇನೆ ಎಂದು ಹೊರಡಬೇಡಿ ಮತ್ತೆ! ಎಲ್ಲಾ ನಮೂನೆಯ ವಂಚನೆಗಳನ್ನೂ ಪತ್ತೆಹಚ್ಚಬಹುದು. ಅದು ಹೇಗೆ ಎಂದು ಮಾತ್ರ ನಾನು ಹೇಳುತ್ತಿಲ್ಲ!</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/%e0%b2%b2%e0%b3%87%e0%b2%96%e0%b2%a8/tech-for-cheating-in-exams/">ಪರೀಕ್ಷೆಯಲ್ಲಿ ವಂಚನೆಗೂ ತಂತ್ರಜ್ಞಾನದ ಬಳಕೆ</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/%e0%b2%b2%e0%b3%87%e0%b2%96%e0%b2%a8/tech-for-cheating-in-exams/feed/</wfw:commentRss>
			<slash:comments>0</slash:comments>
		
		
			</item>
		<item>
		<title>ರಷ್ಯಾ ಯುಕ್ರೇನ್ ಜಾಲಸಮರ</title>
		<link>https://vishvakannada.com/article/russia-ukrain-war-on-cyberspace-2/</link>
					<comments>https://vishvakannada.com/article/russia-ukrain-war-on-cyberspace-2/#respond</comments>
		
		<dc:creator><![CDATA[pavanaja]]></dc:creator>
		<pubDate>Fri, 20 Dec 2024 10:07:23 +0000</pubDate>
				<category><![CDATA[ಲೇಖನ]]></category>
		<category><![CDATA[cyberwar]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[internet]]></category>
		<category><![CDATA[rassia-ukrain]]></category>
		<category><![CDATA[technology]]></category>
		<category><![CDATA[war]]></category>
		<category><![CDATA[ಅಂತರಜಾಲ]]></category>
		<category><![CDATA[ಅಂತರಜಾಲದಲ್ಲಿ ಸೈಬರ್ ಯುದ್ಧ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ರಷ್ಯಾ ಯುಕ್ರೇನ್ ಜಾಲಸಮರ]]></category>
		<category><![CDATA[ರಷ್ಯಾ-ಯುಕ್ರೇನ್]]></category>
		<category><![CDATA[ಸೈಬರ್ ಯುದ್ಧ]]></category>
		<category><![CDATA[ಸೈಬರ್‌ವಾರ್]]></category>
		<guid isPermaLink="false">https://gadgetloka.net/?p=1077</guid>

					<description><![CDATA[<p>ಅಂತರಜಾಲದಲ್ಲಿ ಸೈಬರ್ ಯುದ್ಧ ದೇಶ ದೇಶಗಳ ನಡುವೆ ಯುದ್ಧ ನಡೆಯುವಾಗ ಅವುಗಳ ನಡುವಿನ ಯುದ್ಧ ಕೇವಲ ಮಿಲಿಟರಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಈಗಿನ ಕಾಲದಲ್ಲಿ ಯುದ್ಧ ಹಲವು ಮಜಲುಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಆರ್ಥಿಕ, ನೀರು, ಜೈವಿಕ&#8230;</p>
<p>The post <a href="https://vishvakannada.com/article/russia-ukrain-war-on-cyberspace-2/">ರಷ್ಯಾ ಯುಕ್ರೇನ್ ಜಾಲಸಮರ</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ಅಂತರಜಾಲದಲ್ಲಿ ಸೈಬರ್ ಯುದ್ಧ</strong><strong></strong></h2>



<p class="wp-block-paragraph">ದೇಶ ದೇಶಗಳ ನಡುವೆ ಯುದ್ಧ ನಡೆಯುವಾಗ ಅವುಗಳ ನಡುವಿನ ಯುದ್ಧ ಕೇವಲ ಮಿಲಿಟರಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಈಗಿನ ಕಾಲದಲ್ಲಿ ಯುದ್ಧ ಹಲವು ಮಜಲುಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಆರ್ಥಿಕ, ನೀರು, ಜೈವಿಕ ಇತ್ಯಾದಿಗಳ ಜೊತೆ ಅಂತರಜಾಲವೂ ಸೇರಿದೆ. <a href="https://vishvakannada.com/article/russia-ukrain-war-on-cyberspace/" target="_blank" rel="noopener" title="">ರಷ್ಯಾದ ಸೈನ್ಯವು ಹೇಗೆ ಯು(ಉ)ಕ್ರೇನ್‌ನ ಪೂರ್ವಭಾಗದಲ್ಲಿ ಅಂತರಜಾಲ ಸಂಪರ್ಕವನ್ನು ಹೇಗೆ ಹಾಳುಗೆಡವಿತು</a> ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಈಗ ನಾವು ಜೀವಿಸುತ್ತಿರುವುದು ಡಿಜಿಟಲ್ ಅರ್ಥಾತ್ ತಂತ್ರಜ್ಞಾನ ಯುಗದಲ್ಲಿ. ಅಂದ ಮೇಲೆ ಯುದ್ಧವು ಈ ಕ್ಷೇತ್ರದಲ್ಲೂ ನಡೆಯಬೇಕಲ್ಲವೇ? ಹೌದು. ಅದು ನಡೆಯುತ್ತಿದೆ. ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ವಲ್ಪ ತಿಳಿಯೋಣ.   </p>



<p class="wp-block-paragraph">ಡಿಜಿಟಲ್ ಪ್ರಪಂಚದಲ್ಲಿ ನಡೆಯುವ ಯುದ್ಧಕ್ಕೆ ಸೈಬರ್‌ವಾರ್ ಎಂಬ ಹೆಸರಿದೆ. ಇದರಲ್ಲಿ ಮುಖ್ಯವಾಗಿ ಜಾಲಗಳಿಗೆ ಜೋಡಿಸಲ್ಪಟ್ಟ ಗಣಕಗಳಿಗೆ ದಾಳಿ ಮಾಡಿ ಅವುಗಳನ್ನು ಕೆಡಿಸಲಾಗುತ್ತದೆ. ಗಣಕಗಳಿಗೆ ಮತ್ತು ಗಣಕಜಾಲಗಳಿಗೆ ದಾಳಿ ಮಾಡಿ ಅವುಗಳನ್ನು ಕೆಡಿಸುವದಕ್ಕೆ ಹಲವು ಹೆಸರುಗಳಿವೆ. ಸರಳವಾಗಿ ಇದಕ್ಕೆ ಹ್ಯಾಕಿಂಗ್ ಎಂದೂ ಹೇಳುತ್ತಾರೆ. ಹಾಗಿದ್ದರೆ ಹ್ಯಾಕಿಂಗ್‌ಗೂ ಸೈಬರ್ ಯುದ್ಧಕ್ಕೂ ಏನು ವ್ಯತ್ಯಾಸ? ಈ ಬಗ್ಗೆ ತಜ್ಞರಲ್ಲಿ ಒಮ್ಮತವಿಲ್ಲ. ಆದರೂ ಬಹುತೇಕ ಜನರು ಒಪ್ಪಿಕೊಂಡುದು ಏನೆಂದರೆ ಯಾವುದಾದರೂ ಓರ್ವ ವ್ಯಕ್ತಿ ಅಥವಾ ಕಿಡಿಗೇಡಿಗಳ ತಂಡ ಗಣಕದೊಳಗೆ ನುಗ್ಗಿದರೆ ಅದು ಹ್ಯಾಕಿಂಗ್. ಇದರಲ್ಲಿ ಎಲ್ಲ ಸಲ ದಾಳಿಯಾದ ಗಣಕಕ್ಕೆ ಹಾನಿಯಾಗಲೇ ಬೇಕಿಲ್ಲ. ಕೆಲವೊಮ್ಮೆ ಮಾಹಿತಿಯ ಕಳ್ಳತನ ಮಾತ್ರ ಆಗುತ್ತದೆ. ಆದರೆ ಒಂದು ದೇಶವೇ ತನ್ನ ತಜ್ಞರನ್ನು ಬಳಸಿ ಇನ್ನೊಂದು ದೇಶದ ಗಣಕಜಾಲಕ್ಕೆ ದಾಳಿ ಇಟ್ಟು ಅದನ್ನು ಕೆಡಿಸಿದರೆ ಅದನ್ನು ಸೈಬರ್‌ಯುದ್ಧ ಎನ್ನಬಹುದು. ಕೆಲವು ಸಲ ದೇಶವು ಅಧಿಕೃತವಾಗಿ ಈ ಯುದ್ಧ ಮಾಡುವುದಿಲ್ಲ. ಬದಲಿಗೆ ತನ್ನ ದೇಶದ ಕೆಲವು ಸಂಘಟಣೆಗಳ ಮೂಲಕ ಮಾಡಿಸಬಹುದು. ಅಮೆರಿಕ, ರಷ್ಯ, ಕೊರಿಯ, ಚೈನಾ ಸೇರಿ ಬಹುತೇಕ ದೇಶಗಳು ಈ ರೀತಿಯ ದಾಳಿ ನಡೆಸಲು ಹಾಗೂ ಇಂತಹ ದಾಳಿಗಳನ್ನು ಎದುರಿಸಲು ಬೇಕಾದ ಪರಿಣತಿಯನ್ನು ಬೆಳೆಸಿಕೊಂಡಿವೆ. ಆದರೂ ಈ ರೀತಿಯ ಯುದ್ಧಗಳು ಹಾಗೂ ಅದರ ದುಷ್ಪರಿಣಾಮಗಳು ನಡೆಯುತ್ತಲೇ ಇವೆ.</p>



<p class="wp-block-paragraph">ಫೆಬ್ರವರಿ 24, 2022 ರಂದು ರಷ್ಯಾ ದೇಶವು ಯುಕ್ರೇನ್ ದೇಶದ ಮೇಲೆ ದಾಳಿ ಪ್ರಾರಂಭಿಸಿತು. ಫೆಬ್ರವರಿ ಕೊನೆಯ ವಾರದಲ್ಲಿ ರಷ್ಯಾ ದೇಶದ ಹಲವು ಜಾಲತಾಣಗಳನ್ನು ಹ್ಯಾಕರ್‌ಗಳು ಧಾಳಿ ಮಾಡಿ ಕೆಡಿಸಿದರು. ಈ ಧಾಳಿಯು ರಷ್ಯಾ ದೇಶದ ಸರಕಾರಿ ಜಾಲತಾಣಗಳ ಮೇಲೆ ನಡೆದಿತ್ತು. ರಷ್ಯಾದ ಸರಕಾರಿ ಟೆಲಿವಿಶನ್ ಜಾಲ, ಸರಕಾರದ ಅಧಿಕೃತ ಜಾಲತಾಣ, ಸರಕಾರದ ಒಡೆತನದಲ್ಲಿರುವ ಎಣ್ಣೆ ಕಂಪೆನಿಯ ಜಾಲತಾಣಗಳೆಲ್ಲ ಈ ಧಾಳಿಯಿಂದ ಹಾನಿಗೊಳಗಾದವು. &nbsp;</p>



<p class="wp-block-paragraph">ಇದಕ್ಕೂ ಮೊದಲು ಇದೇ ನಮೂನೆಯ ಧಾಳಿಗಳು ಯುಕ್ರೇನ್ ದೇಶದ ಜಾಲತಾಣಗಳ ಮೇಲೆ ನಡೆದಿದ್ದವು. ಸರಕಾರದ ಜಾಲತಾಣಗಳು, ಸರಕಾರದ ಒಡೆತನದಲ್ಲಿರುವ ಕಂಪೆನಿಗಳ ಜಾಲತಾಣಗಳು ಈ ಧಾಳಿಗಳ ಗುರಿಯಾಗಿದ್ದವು. ರಷ್ಯಾದ ಜಾಲತಾಣಗಳ ಮೇಲೆ ನಡೆದ ಧಾಳಿಯನ್ನು ತಾನು ನಡೆಸಿದ್ದು ಎಂದು ಯುಕ್ರೇನ್ ಹೇಳಿಕೊಂಡಿಲ್ಲ. ಅಂತೆಯೇ ಯುಕ್ರೇನ್‌ನ ಜಾಲತಾಣಗಳ ಮೇಲೆ ನಡೆದ ಧಾಳಿಯನ್ನು ನಾನು ನಡೆಸಿದ್ದು ಎಂದು ರಷ್ಯಾ ಹೇಳಿಕೊಂಡಿಲ್ಲ.</p>



<p class="wp-block-paragraph">ರಷ್ಯಾ ದೇಶವು ಯುಕ್ರೇನ್ ಮೇಲೆ ಧಾಳಿ ನಡೆಸಿದ್ದಕ್ಕೆ ಪ್ರತಿಭಟನೆಯಾಗಿ ಹಲವು ಬಹುರಾಷ್ಟ್ರೀಯ ಕಂಪೆನಿಗಳು ರಷ್ಯಾದ ದೇಶದಿಂದ ಹೊರಗೆ ಬರುತ್ತಿವೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳೂ ಇವೆ. ಈ ಕ್ಷೇತ್ರದ ಕೆಲವು ದಿಗ್ಗಜಗಳಾದ ಆಪಲ್, ಅಡೋಬಿ, ಇಂಟೆಲ್, ಇತ್ಯಾದಿಗಳೆಲ್ಲ ಈ ಪಟ್ಟಿಯಲ್ಲಿವೆ. ಇದು ಇನ್ನೊಂದು ನಮೂನೆಯ ಡಿಜಿಟಲ್ ಯುದ್ಧವೆನ್ನಬಹುದು.</p>



<p class="wp-block-paragraph">ಅಮೆರಿಕ ದೇಶವು ವಿಯೆಟ್ನಾಂ, ಕುವೈತ್, ಇರಾಕ್, ಅಫಘಾನಿಸ್ತಾನಗಳಲ್ಲಿ ಯುದ್ಧ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಅವುಗಳನ್ನು ಅನ್ಯಾಯದ ಆಕ್ರಮಣ ಎಂದು ಬಹುತೇಕ ಪಾಶ್ಚಿಮಾತ್ಯ ಮಾಧ್ಯಮಗಳು ಬಿಂಬಿಸಲಿಲ್ಲ. ಆದರೆ ಯುಕ್ರೇನ್ ಮೇಲೆ ರಷ್ಯಾ ಮಾಡಿದ ಧಾಳಿಯಲ್ಲಿ ರಷ್ಯಾವನ್ನು ಕೆಟ್ಟದಾಗಿ ವಿಲನ್ ಆಗಿ ಇದೇ ಮಾಧ್ಯಮಗಳು ರೂಪಿಸಿವೆ. ಇವುಗಳು ರಷ್ಯಾವನ್ನು ತುಂಬ ಕೆಟ್ಟದಾಗಿ ತಮ್ಮ ಮಾಧ್ಯಮಗಳಲ್ಲಿ ಬಿಂಬಿಸಿವೆ. ಇವುಗಳು ತಯಾರಿಸಿದ ಈ ರೂಪಕಗಳನ್ನು ಅವು ತಮ್ಮ ತಮ್ಮ ಮಾಧ್ಯಮಗಳಲ್ಲಿ ಪ್ರಕಾಶಪಡಿಸಿವೆ. ಈ ಹೇಳಿಕೆಗಳು ವಿಕಿಪೀಡಿಯಕ್ಕೂ ಕಾಲಿಟ್ಟಿವೆ. ವಿಕಿಪೀಡಿಯ ಎಂದರೆ ಜನರಿಂದ ಜನರಿಗಾಗಿ ಜನರೇ ನಡೆಸುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶ. ಇದಕ್ಕೆ ಯಾರೂ ಲೇಖನ ಸೇರಿಸಬಹುದು ಹಾಗೂ ಇರುವ ಲೇಖನಗಳನ್ನು ತಿದ್ದಬಹುದು. ಆದರೆ ಇದನ್ನು ನಿಯಂತ್ರಿಸಲು ಕೆಲವು ನಿರ್ವಾಹಕರು ಇದ್ದಾರೆ. ಇವರೂ ಸ್ವಯಂಸೇವಕರೇ. ಇವರು ಇಂತಹ ಸಂದರ್ಭಗಳಲ್ಲಿ ರಷ್ಯಾ ಪರ-ವಿರೋಧದ ಲೇಖನಗಳನ್ನು ನಿಯಂತ್ರಿಸುತ್ತಾರೆ. ವಿಕಿಪೀಡಿಯದಲ್ಲಿ ಈ ರಷ್ಯಾ-ಯುಕ್ರೇನ್ ತಿಕ್ಕಾಟದ ವಿಷಯದಲ್ಲಿ ತಟಸ್ಥವಾಗಿರಬೇಕಾಗಿದ್ದ ವಿಕಿಪೀಡಿಯದ ಲೇಖನಗಳು ಕೆಲಮಟ್ಟಿಗೆ ರಷ್ಯಾ ವಿರೋಧಿಯಾಗಿವೆ ಎನ್ನಬಹುದು. ಈ ಲೇಖನಗಳನ್ನು ಎಲ್ಲರೂ ಸಂಪಾದಿಸಿ ಬದಲಿಸದಂತೆ ಸಂರಕ್ಷಿಸಲಾಗಿದೆ. ಕೆಲವೇ ನಿರ್ವಾಹಕರು ಮಾತ್ರ ಈ ಲೇಖನಗಳನ್ನು ಸಂಪಾದಿಸಬಹದಾಗಿದೆ.</p>



<p class="wp-block-paragraph">ವಿಕಿಪೀಡಿಯವು ಪ್ರಪಂಚದ 300ಕ್ಕೂ ಹೆಚ್ಚಿನ ಭಾಷೆಗಳಲ್ಲಿವೆ. ರಷ್ಯಾ ಭಾಷೆಯಲ್ಲೂ ಇದೆ. ಇಂಗ್ಲಿಷ್ ವಿಕಿಪೀಡಿಯದಲ್ಲಿ ರಷ್ಯಾ-ಯುಕ್ರೇನ್ ಬಿಕ್ಕಟ್ಟಿನ ಬಗೆಗಿನ ಲೇಖನವನ್ನು ಜಗತ್ತಿನ ಹಲವು ಭಾಷೆಗಳ ವಿಕಿಪೀಡಿಯಗಳಲ್ಲಿ ಅನುವಾದಿಸಿ ಹಾಕಲಾಗಿದೆ. ಹಾಗೆಯೇ ರಷ್ಯನ್ ಭಾಷೆಯ ವಿಕಿಪೀಡಿಯದಲ್ಲೂ ಸೇರಿಸಲಾಗಿದೆ. ತನ್ನ ವಿರೋಧಿಯಾದ ಈ ಲೇಖನವನ್ನು ತೆಗೆಯಬೇಕು ಎಂದು ಸ್ವಾಭಾವಿಕವಾಗಿಯೇ ರಷ್ಯಾ ದೇಶವು ವಿಕಿಪೀಡಿಯವನ್ನು ಕೇಳಿಕೊಂಡಿತು. ಆದರೆ ತಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ಎಂದು ಹೇಳಿಕೊಂಡ ವಿಕಿಪೀಡಿಯವು ಅದನ್ನು ತೆಗೆಯಲು ಒಪ್ಪಲಿಲ್ಲ. ರಷ್ಯಾವು ಸದ್ಯ ತನ್ನ ದೇಶದಲ್ಲಿ ವಿಕಿಪೀಡಿಯವನ್ನು ನಿರ್ಬಂಧಿಸಿದೆ. ಹಿಂದೊಮ್ಮೆ ಇದೇ ಮಾದರಿಯಲ್ಲಿ ಟರ್ಕಿ ದೇಶವು ವಿಕಿಪೀಡಿಯವನ್ನು ಸರಿಸುಮಾರು ಒಂದು ವರ್ಷಗಳ ಕಾಲ ನಿರ್ಬಂಧಿಸಿತ್ತು.</p>



<p class="wp-block-paragraph">ಪ್ರಪಂಚದ ಎಲ್ಲ ಜಾಲತಾಣಗಳ ಉಸ್ತುವಾರಿಯನ್ನು ನೋಡಿಕೊಳ್ಳುವುದು ಐಕಾನ್ (ICANN) ಎಂಬ ಸಂಸ್ಥೆ. ಈ ಬಗ್ಗೆ ಇದೇ ಅಂಕಣದಲ್ಲಿ ಹಿಂದೊಮ್ಮೆ <a href="https://vishvakannada.com/article/internationalized-domain-name-idn/" target="_blank" rel="noopener" title="">ಬರೆಯಲಾಗಿತ್ತು</a>. ಐಕಾನ್‌ಗೆ ಒಂದು ವಿಚಿತ್ರ ಬೇಡಿಕೆ ಬಂದಿತ್ತು. ಬೇರೆ ಬೇರೆ ದೇಶಗಳ ಜಾಲತಾಣಗಳಿಗೆಂದೇ ಬೇರೆ ಬೇರೆ ಡೊಮೈನ್ ಹೆಸರುಗಳು ಚಾಲ್ತಿಯಲ್ಲಿವೆ. ಉದಾಹರಣೆಗೆ &#8211; .in – ಭಾರತ, .uk – ಇಂಗ್ಲೆಂಡ್, .fr – ಫ್ರಾನ್ಸ್, .ru – ರಷ್ಯಾ, ಇತ್ಯಾದಿ. <a data-type="link" data-id="http://karnataka.gov.in/" href="http://karnataka.gov.in/" target="_blank" rel="noreferrer noopener">karnataka.gov.in</a> ಎನ್ನುವುದು ಕರ್ನಾಟಕ ಸರಕಾರದ ಅಧಿಕೃತ ಜಾಲತಾಣದ ವಿಳಾಸ. ಹಾಗೆಯೇ .ru ಎಂಬುದು ರಷ್ಯಾದ್ದು. ರಷ್ಯಾ ದೇಶದ ಸರಕಾರದ ಎಲ್ಲ ಅಧಿಕೃತ ಜಾಲತಾಣಗಳ ವಿಳಾಸದ ಕೊನೆಯಲ್ಲಿ .ru ಎಂದಿರುತ್ತದೆ. ಐಕಾನ್‌ಗೆ ಬಂದ ವಿಚಿತ್ರ ಬೇಡಿಕೆಯಲ್ಲಿ .ru ಡೊಮೈನ್ ಅನ್ನು ನಿರ್ಬಂಧಿಸಬೇಕು ಎಂದಿತ್ತು. ಆದರೆ ಐಕಾನ್‌ ಈ ಬೇಡಿಕೆಗೆ ಬೆಲೆ ಕೊಡಲಿಲ್ಲ.       </p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/russia-ukrain-war-on-cyberspace-2/">ರಷ್ಯಾ ಯುಕ್ರೇನ್ ಜಾಲಸಮರ</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/russia-ukrain-war-on-cyberspace-2/feed/</wfw:commentRss>
			<slash:comments>0</slash:comments>
		
		
			</item>
		<item>
		<title>ರಷ್ಯಾ – ಉಕ್ರೇನ್ ಯುದ್ಧ</title>
		<link>https://vishvakannada.com/article/russia-ukrain-war-on-cyberspace/</link>
					<comments>https://vishvakannada.com/article/russia-ukrain-war-on-cyberspace/#respond</comments>
		
		<dc:creator><![CDATA[pavanaja]]></dc:creator>
		<pubDate>Fri, 20 Dec 2024 09:54:16 +0000</pubDate>
				<category><![CDATA[ಲೇಖನ]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[internet]]></category>
		<category><![CDATA[network]]></category>
		<category><![CDATA[rassia-ukrain]]></category>
		<category><![CDATA[war]]></category>
		<category><![CDATA[ಅಂತರಜಾಲ]]></category>
		<category><![CDATA[ಅಂತರಜಾಲ ಸಂಪರ್ಕ]]></category>
		<category><![CDATA[ಅಂತರಜಾಲದ ಬಲಿ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ರಷ್ಯಾ – ಉಕ್ರೇನ್ ಯುದ್ಧ]]></category>
		<category><![CDATA[ಸ್ಟಾರ್‌ಲಿಂಕ್]]></category>
		<guid isPermaLink="false">https://gadgetloka.net/?p=1073</guid>

					<description><![CDATA[<p>ಅಂತರಜಾಲದ ಬಲಿ ರಷ್ಯಾ ದೇಶವು ಉಕ್ರೇನ್ (ಯುಕ್ರೇನ್) ದೇಶದ ಮೇಲೆ ಯುದ್ಧ ಘೋಷಣೆ ಮಾಡಿ ಧಾಳಿ ಪ್ರಾರಂಭ ಮಾಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಉಕ್ರೇನ್‌ನ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಇವುಗಳನ್ನು ರಷ್ಯಾವು ಹಲವು&#8230;</p>
<p>The post <a href="https://vishvakannada.com/article/russia-ukrain-war-on-cyberspace/">ರಷ್ಯಾ – ಉಕ್ರೇನ್ ಯುದ್ಧ</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ಅಂತರಜಾಲದ ಬಲಿ</strong></h2>



<p class="wp-block-paragraph">ರಷ್ಯಾ ದೇಶವು ಉಕ್ರೇನ್ (ಯುಕ್ರೇನ್) ದೇಶದ ಮೇಲೆ ಯುದ್ಧ ಘೋಷಣೆ ಮಾಡಿ ಧಾಳಿ ಪ್ರಾರಂಭ ಮಾಡಿರುವುದು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಉಕ್ರೇನ್‌ನ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಇವುಗಳನ್ನು ರಷ್ಯಾವು ಹಲವು ಕಡೆ ಕತ್ತರಿಸಿದೆ. ಇವುಗಳ ಜೊತೆಗೆ ಅಲ್ಲಿಯ ಅಂತರಜಾಲ ಸಂಪರ್ಕಕ್ಕೂ ಅದು ಕತ್ತರಿ ಪ್ರಯೋಗ ಮಾಡಿದೆ. ವಿದ್ಯುತ್ ಸಂಪರ್ಕ ಮತ್ತು ರಸ್ತೆಗಳನ್ನು ಬಾಂಬ್ ದಾಳಿಯ ಮೂಲಕ ಕೆಡಿಸಬಹುದು. ಆದರೆ ಅಂತರಜಾಲ ಸಂಪರ್ಕವನ್ನು ಹೇಗೆ ಕೆಡಿಸುವುದು? ಕೇಬಲ್ ಜಾಲ ಮತ್ತು ಕಟ್ಟಡವನ್ನು ಹಾಳು ಮಾಡಿದರೆ ಉಪಗ್ರಹದ ಮೂಲಕ ಸಂಪರ್ಕ ಪಡೆಯಬಹುದಲ್ಲ ಎಂದು ನಿಮಗೆ ಪ್ರಶ್ನೆ ಮೂಡಿರಬಹುದಲ್ಲ? ಇದನ್ನು ತಿಳಿಯಬೇಕಾದರೆ ಮೊದಲಿಗೆ ದೇಶದಿಂದ ದೇಶಕ್ಕೆ ಮತ್ತು ದೇಶದ ಒಳಗೆ ಅಂತರಜಾಲ ಸಂಪರ್ಕ ಹೇಗೆ ದೊರೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.</p>



<p class="wp-block-paragraph">ಅಂತರಜಾಲ ಎಂದರೆ ಗಣಕಗಳ ಜಾಲ ಎಂದು ಸರಳವಾಗಿ ಹೇಳಬಹುದು. ಆದರೆ ಅದು ಅಷ್ಟು ಸರಳವಲ್ಲ. ಇದರಲ್ಲಿ ಗಣಕಗಳು, ಮೊಬೈಲ್, ಇತ್ಯಾದಿ ಸಾಧನಗಳು ಮೋಡೆಮ್ ಮೂಲಕ ಹತ್ತಿರದ ಅಂತರಜಾಲ ಹೆಬ್ಬಾಗಿಲಿಗೆ, ಅಲ್ಲಿಂದ ಕೇಬಲ್ ಅಥವಾ ಉಪಗ್ರಹ ಮೂಲಕ ಜಗತ್ತಿಗೆ ಸಂಪರ್ಕ ಹೊಂದುತ್ತವೆ. ನಿಮ್ಮ ಮನೆಯಲ್ಲಿರುವ ಬ್ರಾಡ್‌ಬ್ಯಾಂಡ್ ಸಂಪರ್ಕ ಮೋಡೆಮ್ ಮೂಲಕ ಕೇಬಲ್‌ಗೆ, ನಂತರ ಕೇಬಲ್ ಮೂಲಕ ಸಮೀಪದ ಅಂತರಜಾಲ ಸಂಪರ್ಕ ಸೇವೆ ನೀಡುವವರ ಸರ್ವರ್‌ಗೆ ಜೋಡಣೆ ಆಗುತ್ತದೆ. ನಿಮ್ಮ ಮೊಬೈಲ್ ಫೋನಿನಲ್ಲೂ ಒಂದು ರೀತಿಯ ಮೋಡೆಮ್ ಇರುತ್ತದೆ. ಅದರ ಮೂಲಕ ನಿಮ್ಮ ಫೋನ್ ಅಂತರಜಾಲ ಸಂಪರ್ಕ ಸೇವೆ ನೀಡುವವರ ಸರ್ವರ್‌ಗೆ ಸಂಪರ್ಕ ಹೊಂದುತ್ತದೆ. ಸರ್ವರ್‌ನಿಂದ ಇನ್ನೊಂದು ಸರ್ವರ್‌ಗೆ ಟವರ್ ಮತ್ತು ಕೇಬಲ್ ಮೂಲಕ ಸಂಪರ್ಕ ಹೊಂದುತ್ತದೆ. ಹೀಗೆ ಒಂದು ದೊಡ್ಡ ಜಾಲ ಆಗುತ್ತದೆ. ಈ ಜಾಲದಲ್ಲಿ ಅಂತರಜಾಲ ಸಂಪರ್ಕ ಸೇವೆ ನೀಡುವ ಎಲ್ಲ ಕಂಪೆನಿಗಳೂ ಸೇರಿಕೊಳ್ಳುತ್ತವೆ.&nbsp;&nbsp; ಭಾರತದಲ್ಲಿ ಜಿಯೊ, ಏರ್‌ಟೆಲ್, ಬಿಎಸ್‌ಎನ್‌ಎಲ್, ಆಕ್ಟ್, ಇತ್ಯಾದಿಯಾಗಿ ಈ ಅಂತರಜಾಲ ಸಂಪರ್ಕ ಸೇವೆ ನೀಡುವವರು ಇದ್ದಾರೆ. ನಿಮ್ಮಮನೆಯ ಪಕ್ಕದ ಟವರ್ ಕೆಟ್ಟಾಗ ನಿಮ್ಮ ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ಸಾಧ್ಯವಾಗುವುದಿಲ್ಲ. ಬ್ರಾಡ್‌ಬ್ಯಾಂಡ್ ಮೂಲಕ ಸಂಪರ್ಕ ಪಡೆಯುವವರಾದರೆ ನಿಮ್ಮ ಮನೆಯ ಮೋಡೆಮ್ ಸಂಪರ್ಕ ಹೊಂದುವ ಸರ್ವರ್ ಕೆಟ್ಟಾಗ ನಿಮಗೆ ಅಂತರಜಾಲ ಸಂಪರ್ಕ ಸಾಧ್ಯವಾಗುವುದಿಲ್ಲ.</p>



<figure class="wp-block-image size-large is-resized"><img decoding="async" src="https://gadgetloka.net/wp-content/uploads/2024/12/Ukraine-cable-Network-1024x557.jpg" alt="" class="wp-image-1074" style="aspect-ratio:1.8384201077199283;width:564px;height:auto"/><figcaption class="wp-element-caption"><strong>ರಷ್ಯಾ-ಉಕ್ರೇನಿನ ಕೇಬಲ್ ನೆಟ್&#x200d;ವರ್ಕ್</strong></figcaption></figure>



<p class="wp-block-paragraph">ಇದೇನೋ ದೇಶದೊಳಗಿನ ಸಂಗತಿಯಾಯಿತು. ದೇಶದಿಂದ ದೇಶಕ್ಕೆ ಹೇಗೆ? ಉಪಗ್ರಹದ ಮೂಲಕವೂ ಸಂಪರ್ಕ ಸಾಧಿಸಬಹುದು. ಆದರೆ ಅದರ ವೇಗ ಲಕ್ಷಗಟ್ಟಲೆ ಜನರ ಬಳಕೆಗೆ ಸಾಕಾಗುವಷ್ಟು ಇರುವುದಿಲ್ಲ. ಇದಕ್ಕಾಗಿ ದೇಶ ದೇಶಗಳನ್ನು ಬೆಸೆಯುವ ಖಂಡಾಂತರ ಕೇಬಲ್ ಜಾಲವಿದೆ. ಇದು ದೇಶ ದೇಶಗಳ ನಡುವೆ, ಖಂಡ ಖಂಡಗಳ ನಡುವೆ, ಸಮುದ್ರದ ಅಡಿಯಲ್ಲಿ ಸಾಗುತ್ತದೆ.&nbsp; ಇದು ಇಡಿಯ ಜಗತ್ತಿನ ಅಂತರಜಾಲದ ಬೆನ್ನೆಲುಬು ಎನ್ನಬಹುದು. ಈ ಕೇಬಲ್ ಸಮುದ್ರದ ಮೂಲಕ ಸಾಗಿ ಭೂಮಿಗೆ ತಲುಪಿ ಅಲ್ಲಿಯ ಅಂತರಜಾಲ ಹೆಬ್ಬಾಗಿಲಿಗೆ ಜೋಡಣೆಯಾಗುತ್ತದೆ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ ಗೇಟ್‌ವೇ ಎನ್ನುತ್ತಾರೆ. ಅಲ್ಲಿಂದ ಅದು ದೇಶದೊಳಗಣ ಇತರೆ ಅಂತರಜಾಲ ಸಂಪರ್ಕಗಳಿಗೆ ಜೋಡಣೆಯಾಗುತ್ತದೆ. ನಮ್ಮ ದೇಶದಲ್ಲಿ ಮುಂಬಯಿ ಮತ್ತು ಚೆನ್ನೈಗಳಲ್ಲಿ ಈ ಪ್ರಮುಖ ಗೇಟ್‌ವೇಗಳಿವೆ.</p>



<figure class="wp-block-image size-full"><img decoding="async" src="https://gadgetloka.net/wp-content/uploads/2024/12/Undersea-cable-Network.jpg" alt="" class="wp-image-1075" style="aspect-ratio:1.852994555353902"/><figcaption class="wp-element-caption"><strong>ಅಂಡರ್-ಸೀ ಕೇಬಲ್ ನೆಟ್&#x200d;ವರ್ಕ್</strong></figcaption></figure>



<p class="wp-block-paragraph">ಈ ಕೇಬಲ್ ಜಾಲವನ್ನು ಹಾಕುವುದು, ಅದನ್ನು ನಡೆಸುವುದು ತುಂಬ ದುಬಾರಿಯ ಕೆಲಸ. ಒಬ್ಬಿಬ್ಬರು ಅಥವಾ ಒಂದೆರಡು ದೇಶಗಳು ಸೇರಿ ಮಾಡುವ ಕೆಲಸವಲ್ಲ. ಇದನ್ನು ಹಲವು ದೊಡ್ಡ ಕಂಪೆನಿಗಳು ಒಟ್ಟು ಸೇರಿ ಮಾಡಿದ ಕೆಲವು ಕಂಪೆನಿಗಳು ಮಾಡುತ್ತವೆ. ಈ ಕಂಪೆನಿಗಳಲ್ಲಿ ಗೂಗ್ಲ್, ಮೈಕ್ರೋಸಾಫ್ಟ್, ಅಮೆಝಾನ್, ಫೇಸ್‌ಬುಕ್, ಇತ್ಯಾದಿ ದೈತ್ಯರುಗಳು ಹಣ ಹೂಡಿವೆ. ಇಂತಹ ಕೇಬಲ್‌ಹಾಕುವುದು ತಾಂತ್ರಿಕವಾಗಿ ತುಂಬ ಕ್ಲಿಷ್ಟದ ಕೆಲಸ. ಈ ಕೇಬಲ್ ಮತ್ತು ಅದಕ್ಕೆ ಸಂಬಂಧಿಸಿದ ಪೂರ್ತಿ ವಿವರಗಳಿಗೆ ಒಂದು ಪ್ರತ್ಯೇಕ ಲೇಖನವೇ ಬೇಕು.</p>



<p class="wp-block-paragraph">ಸಮುದ್ರದ ಬದಿಯಲ್ಲಿರುವ ದೇಶಗಳಿಗೆ ಅಥವಾ ಸಮುದ್ರ ಕಿನಾರೆ ಇರುವ ದೇಶಗಳಿಗೆ ಈ ಕೇಬಲ್ ಮೂಲಕ ಅಂತರಜಾಲ ಸಂಪರ್ಕ ನೀಡಬಹುದು. ಆದರೆ ಸಂಪೂರ್ಣವಾಗಿ ಎಲ್ಲ ಕಡೆಗಳಿಂದಲೂ ಭೂಮಿಯಿಂದ ಆವೃತ್ತವಾಗಿರುವ ಅಂದರೆ ಸಮುದ್ರ ಕಿನಾರೆ ಇಲ್ಲದಿರುವ ದೇಶಗಳಿಗೆ ಏನು ಗತಿ ಎಂಬ ಪ್ರಶ್ನೆ ಮೂಡಿರಬಹುದು. ಅವರಿಗೂ ಇದೇ ಕೇಬಲ್ ಮೂಲಕ ಸಂಪರ್ಕ ನೀಡಲಾಗುತ್ತದೆ. ಆದರೆ ಆಗ ಕೇಬಲ್ ಭೂಮಿಯ ಮೂಲಕ ದೇಶದಿಂದ ದೇಶಕ್ಕೆ ಹಾಯ್ದು ಹೋಗುತ್ತದೆ.</p>



<p class="wp-block-paragraph">ಈಗ ಉಕ್ರೇನ್‌ನ ವಿಷಯಕ್ಕೆ ಬರೋಣ. ಉಕ್ರೇನ್‌ನ ಪೂರ್ವದಲ್ಲಿ ರಷ್ಯಾ ದೇಶವಿದೆ. ರಷ್ಯಾವು ಪೂರ್ವದಿಂದ ದಾಳಿ ಪ್ರಾರಂಭಿಸಿದೆ. ಮೊದಲಿಗೆ ಅದು ಅಲ್ಲಿಯ ರಸ್ತೆ, ವಿದ್ಯುತ್ ಸಂಪರ್ಕಗಳನ್ನು ಕತ್ತರಿಸಿತು. ನಂತರ ಅಂತರಜಾಲ ಸಂಪರ್ಕ ನೀಡುವ ಕಂಪೆನಿಗಳ ಪ್ರಮುಖ ಹೆಬ್ಬಾಗಿಲುಗಳ ಮೇಲೆ ದಾಳಿ ಮಾಡಿತು. ಉಕ್ರೇನ್‌ನ ದಕ್ಷಿಣಕ್ಕೆ ಕಪ್ಪು ಸಮುದ್ರವಿದೆ. ಪಶ್ಚಿಮಕ್ಕೆ ಫೊಲೆಂಡ್, ರೊಮಾನಿಯ, ಹಂಗೇರಿಗಳೂ ಉತ್ತರಕ್ಕೆ ಬೆಲಾರುಸ್ ದೇಶವೂ ಇದೆ. ಉಕ್ರೇನ್‌ಗೆ ಅಂತರಜಾಲ ಸಂಪರ್ಕ ನೀಡುವ ಕೇಬಲ್‌ಗಳು ಕಪ್ಪು ಸಮುದ್ರದ ಮೂಲಕ ಮತ್ತು ಪಶ್ಚಿಮದ ಹಾಗೂ ಉತ್ತರದ ದೇಶಗಳ ಮೂಲಕ ಬರುತ್ತದೆ. ಒಂದು ಕೇಬಲ್ ಪೂರ್ವದ ರಷ್ಯಾದ ಮೂಲಕವೂ ಬರುತ್ತದೆ. ರಷ್ಯಾವು ಯಾವುದೇ ಖಂಡಾಂತರ ಕೇಬಲನ್ನು ತುಂಡರಿಸಿಲ್ಲ. ಯಾಕೆಂದರೆ ಅದು ಹಲವು ಅಂತಾರಾಷ್ಟ್ರೀಯ ಕಂಪೆನಿಗಳ ಮತ್ತು ದೇಶಗಳ ಒಡೆತನಕ್ಕೆ ಸೇರಿದೆ. ಆದರೆ ಅದು ಉಕ್ರೇನ್‌ನ ಪೂರ್ವ ಭಾಗದಲ್ಲಿರುವ ಹಲವು ಗೇಟ್‌ವೇ ಮತ್ತು ಸರ್ವರ್‌ಗಳ ಮೇಲೆ ದಾಳಿ ಮಾಡಿ ಆ ಸ್ಥಳಗಳಲ್ಲಿ ಅಂತರಜಾಲ ಸಂಪರ್ಕ ಹಾಳಾಗುವಂತೆ ಮಾಡಿದೆ.</p>



<p class="wp-block-paragraph">ಈ ರೀತಿ ಅಂತರಜಾಲ ಸಂಪರ್ಕ ಇಲ್ಲವಾದರೆ ಜನರು ನೇರವಾಗಿ ಉಪಗ್ರಹದ ಮೂಲಕವೇ ಅಂತರಜಾಲ ಸಂಪರ್ಕ ಪಡೆಯಬಹುದಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆಯೇ? ಹೌದು. ಇದು ಸಾಧ್ಯ. ಆದರೆ ಅದಕ್ಕೆ ಪ್ರತಿಯೊಬ್ಬರಲ್ಲೂ ದುಬಾರಿ ತಾಂತ್ರಿಕ ಸೌಲಭ್ಯವಿರಬೇಕು. ಸರಕಾರಗಳು, ಮಿಲಿಟರಿಗಳು, ಇಂತಹ ಸೌಲಭ್ಯ ಹೊಂದಿವೆ. ಜನಸಾಮಾನ್ಯರಿಗೂ ಇಂತಹ ಸೌಲಭ್ಯ ನೀಡಬೇಕು ಎಂದು ಎಲೋನ್ ಮಸ್ಕ್ ಅವರು ಸ್ಟಾರ್‌ಲಿಂಕ್ ಎಂಬ ಕಂಪೆನಿ ಸ್ಥಾಪಿಸಿ ಅದರ ಮೂಲಕ ಸೇವೆ ನೀಡುತ್ತಿದ್ದಾರೆ. ಸಾವಿರಾರು ಉಪಗ್ರಹಗಳನ್ನು ಅದಕ್ಕಾಗಿ ಹಾರಿಸಿದ್ದಾರೆ. ಇದರಿಂದ ಸಂಪರ್ಕ ಪಡೆಯಬೇಕಾದರೆ ಪ್ರತಿಯೊಬ್ಬರೂ ತಮ್ಮಲ್ಲಿ ಒಂದು ಚಿಕ್ಕ ಡಿಶ್ ಆಂಟೆನಾ ಇಟ್ಟುಕೊಂಡು ಸೂಕ್ತ ಉಪಕರಣಗಳ ಮೂಲಕ ಅಂತರಜಾಲ ಸಂಪರ್ಕ ಪಡೆಯಬಹುದು. ಉಕ್ರೇನ್‌ಗೆ ಸ್ಟಾರ್‌ಲಿಂಕ್ ಮೂಲಕ ಸಂಪರ್ಕ ನೀಡುತ್ತೇನೆ ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಆದರೆ ಯುದ್ಧ ಕಾಲದಲ್ಲಿ ಆ ಉಪಕರಣಗಳನ್ನು ಪ್ರತಿಯೊಬ್ಬರೂ ಪಡೆಯುವುದು, ತಮ್ಮ ಮನೆಗಳ ಮೇಲೆ ಇನ್‌ಸ್ಟಾಲ್ ಮಾಡುವುದು ಹೇಗೆ ಎಂಬ ಸಮಸ್ಯೆ ಇದೆ. &nbsp;</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/russia-ukrain-war-on-cyberspace/">ರಷ್ಯಾ – ಉಕ್ರೇನ್ ಯುದ್ಧ</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/russia-ukrain-war-on-cyberspace/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ</title>
		<link>https://vishvakannada.com/article/internationalized-domain-name-idn/</link>
					<comments>https://vishvakannada.com/article/internationalized-domain-name-idn/#respond</comments>
		
		<dc:creator><![CDATA[pavanaja]]></dc:creator>
		<pubDate>Fri, 20 Dec 2024 07:28:03 +0000</pubDate>
				<category><![CDATA[ಲೇಖನ]]></category>
		<category><![CDATA[domain name]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[internet]]></category>
		<category><![CDATA[technology]]></category>
		<category><![CDATA[ಅಂತರಜಾಲ]]></category>
		<category><![CDATA[ಅಡ್ರೆಸ್]]></category>
		<category><![CDATA[ಇಂಟರ್‍‍ನೆಟ್]]></category>
		<category><![CDATA[ಕನ್ನಡ]]></category>
		<category><![CDATA[ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ]]></category>
		<category><![CDATA[ಜಾಲತಾಣ ವಿಳಾಸ]]></category>
		<category><![CDATA[ಡೊಮೈನ್ ನೇಮ್]]></category>
		<category><![CDATA[ಮಾಹಿತಿ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ವೆಬ್‌ಸೈಟ್]]></category>
		<guid isPermaLink="false">https://gadgetloka.net/?p=1070</guid>

					<description><![CDATA[<p>ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ&#8230;</p>
<p>The post <a href="https://vishvakannada.com/article/internationalized-domain-name-idn/">ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<p class="wp-block-paragraph">ನೀವು ಯಾವುದೇ ಜಾಲತಾಣ ಅಂದರೆ ವೆಬ್‌ಸೈಟ್ ತೆರೆಯಬೇಕಾದರೆ ಏನು ಮಾಡುತ್ತೀರಿ? ಯಾವುದಾದರೊಂದು ಬ್ರೌಸರ್ (ಉದಾ -ಫಯರ್‌ಫಾಕ್ಸ್, ಕ್ರೋಮ್, ಎಡ್ಜ್) ತೆರೆದು ಅದರಲ್ಲಿ ಜಾಲತಾಣದ ವಿಳಾಸವನ್ನು ಟೈಪ್ ಮಾಡುತ್ತೀರಿ ತಾನೆ? ಒಂದೆರಡು ಜಾಲತಾಣಗಳ ವಿಳಾಸ ತಿಳಿಸಿ ನೋಡೋಣ. ನೀವು ಹೇಳಬಹುದಾದ ಉದಾಹರಣೆಗಳು &#8211;<a href="https://www.google.com/" data-type="link" data-id="https://www.google.com/" target="_blank" rel="noreferrer noopener">www.google.com</a>, <a href="https://www.facebook.com/" data-type="link" data-id="https://www.facebook.com/" target="_blank" rel="noreferrer noopener">www.facebook.com</a>, <a href="http://www.twitter.com" data-type="link" data-id="www.twitter.com" target="_blank" rel="noreferrer noopener">www.twitter.com</a>&#8230; ಕನ್ನಡದ ಜಾಲತಾಣಗಳ ಉದಾಹರಣೆ ನೀಡಿ ಎಂದರೆ &#8211; <a href="https://vishvakannada.com/" data-type="link" data-id="https://vishvakannada.com/" target="_blank" rel="noreferrer noopener">www.vishvakannada.com</a>, <a href="https://www.ejnana.com/" data-type="link" data-id="https://www.ejnana.com/" target="_blank" rel="noreferrer noopener">www.ejnana.com</a>, <a href="https://hosadigantha.com/" data-type="link" data-id="https://hosadigantha.com/" target="_blank" rel="noreferrer noopener">hosadigantha.com </a>ಇತ್ಯಾದಿ ನೀಡಬಹುದು. ಇಲ್ಲೊಂದು ವಿಷಯ ಗಮನಿಸಿದಿರಾ? ಕನ್ನಡ ಜಾಲತಾಣಗಳಿಗೂ ಅವುಗಳ ವಿಳಾಸ ಇಂಗ್ಲಿಶಿನಲ್ಲೇ ಇವೆ ಎಂದು. ಇದು ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡಿದ್ದೀರಾ? ಅಥವಾ ಅದು ಇರುವುದೇ ಹಾಗೆ, ಬೇರೆ ರೀತಿ ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೀರಾ? ಅದು ಈಗ ಇರುವುದು ಹಾಗೆ ಎಂದರೆ ಸರಿ. ಆದರೆ ಬೇರೆ ರೀತಿ ಸಾಧ್ಯವೇ ಇಲ್ಲ ಎಂದರೆ ಅದು ತಪ್ಪು. ಅಂದರೆ ಕನ್ನಡದ ಜಾಲತಾಣಗಳಿಗೆ ಕನ್ನಡದಲ್ಲೇ ವಿಳಾಸ ನಮೂದಿಸಬಹುದೇ ಎಂಬುದು ನಿಮ್ಮ ಪ್ರಶ್ನೆಯಾದರೆ ಅದರ ಉತ್ತರ ಈಗ ಅದು ಸಾಧ್ಯ ಎಂದು.</p>



<p class="wp-block-paragraph">ಅಂತರಜಾಲದ ಒಂದು ಪ್ರಮುಖ ಅಂಗ ವಿಶ್ವವ್ಯಾಪಿ ಜಾಲ ಅರ್ಥಾತ್ ವರ್ಲ್ಡ್ ವೈಡ್ ವೆಬ್. ಇದು ಕೋಟ್ಯಾನುಕೋಟಿ ಜಾಲತಾಣಗಳ (ವೆಬ್‌ಸೈಟ್) ಮತ್ತು ಜಾಲಪುಟಗಳ (ವೆಬ್‌ಪೇಜ್) ಸಂಗ್ರಹ. ಪ್ರತಿ ಜಾಲತಾಣಕ್ಕೂ ಒಂದು ವಿಳಾಸ ಇರುತ್ತದೆ. <a href="https://vishvakannada.com/" data-type="link" data-id="https://vishvakannada.com/" target="_blank" rel="noreferrer noopener">www.vishvakannada.com</a> ಎಂಬ ಈ ಜಾಲತಾಣ ವಿಳಾಸಕ್ಕೆ ಡೊಮೈನ್ ನೇಮ್ (domain name) ಎನ್ನುತ್ತಾರೆ. ದಶಕಗಳ ಕಾಲ ಈ ಡೊಮೈನ್ ನೇಮ್ ಇಂಗ್ಲಿಶಿನಲ್ಲೇ ಇತ್ತು. ಅಷ್ಟು ಮಾತ್ರವಲ್ಲ, ಅದು ಅಮೆರಿಕ ಸರಕಾರದ ಅಧೀನ ಸಂಸ್ಥೆಯ ಉಸ್ತುವಾರಿಯಲ್ಲಿತ್ತು. ನಿಧಾನವಾಗಿ ಅದನ್ನು ಜಾಗತಿಕ ಸಂಸ್ಥೆಯೊಂದಕ್ಕೆ ಅದು ವರ್ಗಾಯಿಸಿತು. ಇದುವೇ ಐಕಾನ್. ಇದರ ಪೂರ್ತಿ ಹೆಸರು&nbsp; ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (Internet Corporation for Assigned Names and Numbers, ICANN) ಎಂದು. ಇದೊಂದು ಸರಕಾರೇತರ, ಲಾಭ ನಷ್ಟಗಳಿಲ್ಲದ ಸಂಸ್ಥೆ. ಇದನ್ನು ಸಮುದಾಯದ ಜನರೇ ನಡೆಸುವುದು. ಇದಕ್ಕೆ ಯಾರು ಬೇಕಾದರೂ ಕೊಡುಗೆ ನೀಡಬಹುದು.</p>



<p class="wp-block-paragraph">ಪ್ರಪಂಚದಲ್ಲಿರುವ ಸುಮಾರು 6000ಕ್ಕೂ ಅಧಿಕ ಭಾಷೆಗಳಲ್ಲಿ ಇಂಗ್ಲಿಶ್ ಕೂಡ ಒಂದು. ಅಂದ ಮೇಲೆ ಅಂತರಜಾಲ ಮತ್ತು ಅದರಲ್ಲಿ ಅಡಕವಾಗಿರುವ ವಿಶ್ವವ್ಯಾಪಿ ಜಾಲದ ಎಲ್ಲ ವ್ಯವಹಾರಗಳು ಇಂಗ್ಲಿಶಿನಲ್ಲೇ ಯಾಕಿರಬೇಕು? ಇರಬೇಕಾಗಿಲ್ಲ ಎಂಬುದೇ ಉತ್ತರ. ಜಾಲತಾಣಗಳು ಇಂಗ್ಲಿಶ್ ಹೊರತಾಗಿ ಹಲವು ಭಾಷೆಗಳಲ್ಲಿ ಲಭ್ಯವಾಗತೊಡಗಿ ಹಲವು ದಶಕಗಳೇ ಕಳೆದಿವೆ. ಆದರೂ ಅವುಗಳ ವಿಳಾಸ ಮಾತ್ರ ಇನ್ನೂ ಬಹುತೇಕ ಇಂಗ್ಲಿಶಿನಲ್ಲೇ ಇವೆ. ಅವುಗಳೂ ಇಂಗ್ಲಿಶಿನ ಹೊರತಾಗಿ ಇತರೆ ಭಾಷೆಗಳಲ್ಲೂ ಲಭ್ಯವಾಗಬೇಕು ತಾನೆ? ಹೌದು. ಐಕಾನ್ ಈ ಬಗ್ಗೆ ಕೆಲಸ ಮಾಡುತ್ತಿದೆ. ಅದು ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸ (ಡೊಮೈನ್ ನೇಮ್) ತಯಾರಿಸಲು ಮತ್ತು ಅಳವಡಿಸಲು ಬೇಕಾದ ಶಿಷ್ಟತೆಯನ್ನು ರೂಪಿಸಿದೆ. ಈಗಾಲೆ ಹಲವು ಜಾಗತಿಕ ಭಾಷೆಗಳಲ್ಲಿ ಜಾಲತಾಣ ವಿಳಾಸಗಳನ್ನು ಬಳಸಬಹುದು. ಇನ್ನೂ ಹಲವಾರು ಭಾಷೆಗಳಲ್ಲಿ ಜಾಲತಾಣ ವಿಳಾಸ ಬಳಸಲು ಬೇಕಾದ ಶಿಷ್ಟತೆಯನ್ನು ರೂಪಿಸಲಾಗುತ್ತಿದೆ. ಈ ರೀತಿಯ ಜಾಲತಾಣ ವಿಳಾಸಗಳಿಗೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಹಾಗಿದ್ದರೆ ಅದರಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಇರಬೇಕು ತಾನೆ? ಉತ್ತರ ಹೌದು ಎಂದು.</p>



<p class="wp-block-paragraph">ಈ ಜಾಲತಾಣ ವಿಳಾಸಗಳಲ್ಲಿ ಮೂರು ಭಾಗವಿರುವುದನ್ನು ಗಮನಿಸರಬಹುದು. <a href="https://vishvakannada.com/" data-type="link" data-id="https://vishvakannada.com/" target="_blank" rel="noreferrer noopener">www.vishvakannada.com </a>ಎಂಬಲ್ಲಿ .com ಎಂಬುದು ಕಮರ್ಶಿಯಲ್ ಎಂಬುದರ ಹ್ರಸ್ವ ರೂಪ. ಈಗ&nbsp; <a href="https://techfocus.in/" data-type="link" data-id="https://techfocus.in/" target="_blank" rel="noreferrer noopener">www.techfocus.in</a>&nbsp; ಎಂಬುದನ್ನು ಗಮನಿಸಿ. ಇಲ್ಲಿ .in ಎಂಬುದು India ಅರ್ಥಾತ್ ಭಾರತ ಎಂಬುದು ಹ್ರಸ್ವ ರೂಪ. ಡೊಮೈನ್ ನೇಮ್‌ಗಳ ಈ ಭಾಗಕ್ಕೆ ಟಾಪ್ ಲೆವೆಲ್ ಡೊಮೈನ್ (Top Level Domain, TLD) ಎನ್ನುತ್ತಾರೆ. ಈ ಭಾಗದ .in ಗೆ ಪರ್ಯಾಯವಾದ .ಭಾರತ ಎಂಬುದು ಭಾರತೀಯ ಲಿಪಿಗಳಲ್ಲಿ ಲಭ್ಯ. ಅಂದರೆ ಕನ್ನಡವೂ ಈ ಪಟ್ಟಿಯಲ್ಲಿ ಇದೆ. ಉದಾಹರಣೆಗೆ ವಿಶ್ವಕನ್ನಡ.ಭಾರತ.</p>



<p class="wp-block-paragraph">ಇಷ್ಟೇ ಆದರೆ ಕನ್ನಡದಲ್ಲಿ ಜಾಲತಾಣ ವಿಳಾಸ ಆದಂತೆಯೇ? ಇಲ್ಲ. vishvakannada.com ಇರುವಂತೆ ವಿಶ್ವಕನ್ನಡ.ಸಂಸ್ಥೆ, ಉದಯವಾಣಿ.ಪತ್ರಿಕೆ, ವಿಶ್ವವಾಣಿ.ಸುದ್ದಿ, ಇತ್ಯಾದಿ ಪಡೆದಾಗ ಮಾತ್ರ ಅದು ಸಂಪೂರ್ಣ ಕನ್ನಡದಲ್ಲೇ ಜಾಲತಾಣ ವಿಳಾಸ ಎನ್ನಬಹುದು. ಅದು ಸಾಧ್ಯವಿಲ್ಲವೇ ಎಂದು ಕೇಳಿದರೆ ಸಾಧ್ಯವಿದೆ ಎಂಬುದೇ ಉತ್ತರ. ಯಾವಾಗ ಎಂದು ಕೇಳಿದರೆ ಬಹುಶಃ ಇನ್ನೂ ಎರಡು ವರ್ಷ ಕಾಯಬೇಕಾಗಬಹುದು. ಅದು ಯಾಕೆ ನಿಧಾನ? ಯಾಕೆಂದರೆ ಈ ರೀತಿ ಜಾಲತಾಣ ವಿಳಾಸ ತಯಾರಿಸಬೇಕಾದಾಗ ಯಾವ ಅಕ್ಷರಗಳನ್ನು ಬಳಸಬಹುದು, ಯಾವ ಅಕ್ಷರಗಳನ್ನು ಬಳಸಬಾರದು, ಯಾವ ಅಕ್ಷರದ ನಂತರ ಯಾವ ಅಕ್ಷರ ಬಳಸಬಹುದು ಮತ್ತು ಬಳಸಬಾರದು, ಇತ್ಯಾದಿ ನಿಯಮಗಳನ್ನು ಮೊದಲು ರೂಪಿಸುವ ಕೆಲಸ ಆಗಬೇಕು. ಸಂತಸದ ಸಂಗತಿಯೆಂದರೆ ಈ ನಿಯಮ ತಯಾರಾಗಿದೆ. ಐಕಾನ್‌ನಲ್ಲಿ ನಿಯೊಬ್ರಾಹ್ಮಿ ಜನರೇಶನ್ ಪ್ಯಾನೆಲ್ ಎಂಬ ತಂಡ ಬ್ರಾಹ್ಮಿ ಲಿಪಿಯಿಂದ ಉಗಮಿಸಿದ ಎಲ್ಲ ಲಿಪಿಗಳಲ್ಲಿ ಡೊಮೈನ್ ನೇಮ್‌ತಯಾರಿಸಲು ಬೇಕಾದ ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಕನ್ನಡವೂ ಸೇರಿದೆ. ಪ್ರಥಮ ಹಂತದ ಭಾಷೆ/ಲಿಪಿಗಳಲ್ಲಿ ಕನ್ನಡವೂ ಸೇರಿದೆ. ಈ ನಿಯಮ ಜಾರಿಗೆ ಬಂದಾಗ ಟಾಪ್ ಲೆವೆಲ್ ಡೊಮೈನ್ (ಟಿಎಲ್‌ಡಿ) ಕನ್ನಡ ಲಿಪಿಯಲ್ಲೇ ಪಡೆದುಕೊಳ್ಳಬಹುದು. ಆಗ .ಪತ್ರಿಕೆ, .ಸುದ್ದಿ, .ಸಂಸ್ಥೆ, .ದೂರದರ್ಶನ, .ಕನ್ನಡ, ಇತ್ಯಾದಿ ಟಿಎಲ್‌ಡಿಗಳನ್ನು&nbsp; ಪಡೆದುಕೊಳ್ಳಬಹುದು.&nbsp;</p>



<p class="wp-block-paragraph">ಆದರೆ ಈ ಟಾಪ್ ಲೆವೆಲ್ ಡೊಮೈನ್‌ನ ಬೆಲೆ ನಮ್ಮ ನಿಮ್ಮಂತಹವರ ಕೈಗೆಟುಕುವ ಸಾಧ್ಯತೆ ತುಂಬ ಕಡಿಮೆ. ಸದ್ಯಕ್ಕೆ ಅದು ಸುಮಾರು 1,85,000 ಅಮೆರಿಕನ್ ಡಾಲರ್ ಇದೆ. ಅಂದರೆ ಸುಮಾರು 1 ಕೋಟಿ 39 ಲಕ್ಷ ರೂ! ಯಾವ ಭಾರತೀಯ ಇಷ್ಟು ಹಣ ನೀಡಿ ಸ್ವಂತದ ಡೊಮೈನ್ ನೇಮ್ ತೆಗೆದುಕೊಳ್ಳುತ್ತಾನೆ? ಶ್ರೀಮಂತ ಸಂಸ್ಥೆಗಳೂ ಇಷ್ಟು ಹಣ ಖರ್ಚು ಮಾಡಲು ಹಿಂದೆ ಮುಂದೆ ಯೋಚನೆ ಮಾಡಬಹುದು. ಆದರೆ ಪರಿಸ್ಥಿತಿ ಅಷ್ಟು ಶೋಚನೀಯವಾಗಿಲ್ಲ. ಐಕಾನ್ ಒಂದು ಜನರೇ ನಡೆಸುವ ಸರಕಾರೇತರ ಸಂಸ್ಥೆ. ಇದರಲ್ಲಿ ಭಾರತೀಯರೂ ಸದಸ್ಯರಾಗಿದ್ದಾರೆ. ಅವರೆಲ್ಲ ಒತ್ತಡ ಹಾಕಿ ಈ ಹಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ. ಸಾಧ್ಯತೆಯೇನು ಬಂತು? ಹಾಗೆ ಮಾಡದಿದ್ದಲ್ಲಿ ಐಕಾನ್‌ನವರ ಶ್ರಮವೆಲ್ಲ ವ್ಯರ್ಥ. ಯಾರೂ ಭಾರತೀಯ ಭಾಷೆಗಳಲ್ಲಿ ಟಿಎಲ್‌ಡಿ ಕೊಂಡುಕೊಳ್ಳದಿದ್ದರೆ ಶ್ರಮಕ್ಕೇನು ಫಲ? ಹಾಗೆ ಆಗಲಾರದು ಎಂದುಕೊಂಡಿದ್ದೇನೆ.</p>



<p class="wp-block-paragraph">(ಲೇಖಕರು ಐಕಾನ್‌ನ ನಿಯೋಬ್ರಾಹ್ಮಿ ಪ್ಯಾನೆಲ್‌ನಲ್ಲಿ ಕನ್ನಡದ ಪರವಾಗಿ ಕೆಲಸ ಮಾಡುತ್ತಿದ್ದಾರೆ)</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/internationalized-domain-name-idn/">ಕನ್ನಡದ ಜಾಲತಾಣಕ್ಕೆ ಕನ್ನಡದಲ್ಲೇ ವಿಳಾಸ</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/internationalized-domain-name-idn/feed/</wfw:commentRss>
			<slash:comments>0</slash:comments>
		
		
			</item>
		<item>
		<title>ವಾಟ್ ಎಂದರೆ ಏನು?</title>
		<link>https://vishvakannada.com/article/what-is-watt/</link>
					<comments>https://vishvakannada.com/article/what-is-watt/#respond</comments>
		
		<dc:creator><![CDATA[pavanaja]]></dc:creator>
		<pubDate>Fri, 20 Dec 2024 06:22:09 +0000</pubDate>
				<category><![CDATA[ಲೇಖನ]]></category>
		<category><![CDATA[What is Watt]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[watt]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ವಾಟ್]]></category>
		<category><![CDATA[ವಾಟ್ ಎಂದರೆ ಏನು?]]></category>
		<guid isPermaLink="false">https://gadgetloka.net/?p=1065</guid>

					<description><![CDATA[<p>ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ &#8220;ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?&#8221;. ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ&#8230;</p>
<p>The post <a href="https://vishvakannada.com/article/what-is-watt/">ವಾಟ್ ಎಂದರೆ ಏನು?</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<p class="wp-block-paragraph">ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ &#8220;ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?&#8221;. ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ ಮಾತು ಅದು ಎಷ್ಟು ವಾಟ್‌ನದು ಎಂದು. &#8220;ಸಾರ್, ಇದು 1000 ವಾಟ್, ಇದು 2000 ವಾಟ್,&#8230;&#8221; ಹೀಗೆ ಗುಣಗಾನ ಸಾಗುತ್ತಿರುತ್ತದೆ. ಹೆಚ್ಚಿನ ಗ್ರಾಹಕರೂ ಸ್ಟೀರಿಯೋ ಕೊಳ್ಳುವಾಗ ಮುಖ್ಯವಾಗಿ ಗಮನಿಸುವುದು ಅದು ಎಷ್ಟು ವಾಟ್‌ನದು ಎಂದು. ಈ ವಾಟ್ ಎಂದರೆ ಏನು?</p>



<p class="wp-block-paragraph">ವಾಟ್ ಎನ್ನುವುದು ಸಾಮರ್ಥ್ಯವನ್ನು ಅಳೆಯುವ ಮಾಪನ. ಅಶ್ವಸಾಮರ್ಥ್ಯವನ್ನು (ಹಾರ್ಸ್ ಪವರ್ ಅಥವಾ ಎಚ್‌ಪಿ)  ಹೆಚ್ಚಿನವರು ಕೇಳಿರಬಹುದು. ನೀರೆತ್ತುವ ಪಂಪ್, ಕಾರು, ಸ್ಕೂಟರ್ ಇತ್ಯಾದಿಗಳ ಇಂಜಿನ್‌ಗಳ ಸಾಮರ್ಥ್ಯವನ್ನು ಎಚ್‌ಪಿಗಳಲ್ಲಿ ನಮೂದಿಸಿರುವುದನ್ನು ನೀವು ಗಮನಿಸಿಯೇ ಇರುತ್ತೀರಾ. ಒಂದು ಅಶ್ವಸಾಮರ್ಥ್ಯವು ಸುಮಾರು 746 ವಾಟ್‌ಗಳಿಗೆ ಸಮ. ಹಾಗಿದ್ದರೆ 1500 ವಾಟ್‌ನ ಸ್ಟೀರಿಯೋದ ಸಾಮರ್ಥ್ಯವು ಎರಡು ಕುದುರೆಗಳ ಸಾಮರ್ಥ್ಯಕ್ಕೆ ಸಮವೇ? ಅದನ್ನು ಈ ರೀತಿ ತರ್ಕಿಸೋಣ. 1500 ವಾಟ್‌ನ ಸ್ಟೀರಿಯೋವನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸಿದರೆ ಅದರಿಂದ ಹೊರಡುವ ಧ್ವನಿಯು ಯಾವದಾದರೊಂದು ವಸ್ತುವನ್ನು ಎರಡು ಕುದರೆಗಳು ಸೇರಿ ಎಳೆದಷ್ಟು ಬಲದಿಂದ ದೂಡಬಲ್ಲುದೇ? ಖಂಡಿತಾ ಇಲ್ಲ. ಹಾಗಿದ್ದರೆ 1500 ವಾಟ್ ಎಂಬುದರ ಅರ್ಥ ಏನು?</p>



<figure class="wp-block-image size-full is-resized"><img decoding="async" src="https://gadgetloka.net/wp-content/uploads/2024/12/Watt-meter_hg.jpg" alt="" class="wp-image-1067" style="aspect-ratio:1.0339256865912763;width:352px;height:auto"/><figcaption class="wp-element-caption"><strong>ವಾಟ್ ಮೀಟರ್</strong> (ಚಿತ್ರ:Hannes Grobe)</figcaption></figure>



<p class="wp-block-paragraph">ಸ್ಟೀರಿಯೋಗಳ ಸಾಮರ್ಥ್ಯವನ್ನು ತಿಳಿಸಲು ಅದನ್ನು ತಯಾರಿಸಿದ ಕಂಪೆನಿಯವರು ಮತ್ತು ಮಾರುವ ಅಂಗಡಿಯವರು ಹೇಳುವ ಈ ವಾಟ್ ಅದರ ಸರಾಸರಿ ಸಾಮರ್ಥ್ಯ ಅಲ್ಲ. ಅದು ಪೀಕ್ ಮ್ಯೂಸಿಕ್ ಪವರ್ ಔಟ್‌ಪುಟ್ (ಪಿ.ಎಂ.ಪಿ.ಓ.). ಅಂದರೆ ಅದು ಹೊರನೀಡಬಲ್ಲ ಧ್ವನಿಯ ಗರಿಷ್ಠ ಸಾಮರ್ಥ್ಯ. ಇದನ್ನು ಬೇರೆ ಬೇರೆ ಕಂಪೆನಿಗಳವರು ಬೇರೆ ಬೇರೆ ವಿಧಾನದಲ್ಲಿ ಅಳೆಯುತ್ತಾರೆ. ಇದಕ್ಕೆ ಇಂತಹುದೇ ಎಂಬ ಶಿಷ್ಟ ವಿಧಾನ ಇಲ್ಲ. ಒಂದು ಕಾರು 300 ಕಿಲೋಮೀಟರ್ ದೂರವನ್ನು 6 ಗಂಟೆಗಳಲ್ಲಿ ಕ್ರಮಿಸಿದರೆ ಅದರ ಸರಾಸರಿ ವೇಗ 50 ಕಿ.ಮೀ. ಆಗಿರುತ್ತದೆ. ಅದು ಹೋಗುವಾಗ ಕೆಲವೊಮ್ಮೆ 140 ಕಿ.ಮೀ. ವೇಗದಲ್ಲೂ ಹೋಗಿರಬಹುದು. ಇಲ್ಲಿ 140 ಮತ್ತು 50ರ ಮಧ್ಯೆ ಯಾವುದೇ ಸೂತ್ರ ಇಲ್ಲ. ಸ್ಟೀರಿಯೋಗಳ ಸಾಮರ್ಥ್ಯವನ್ನು ಅಳೆಯುವಾಗ ಇನ್ನೊಂದು ಮಾಪನ ಇದೆ. ಅದು ಸರಾಸರಿ ಸಾಮರ್ಥ್ಯ. ಇದನ್ನು ರೂಟ್ ಮೀನ್ ಸ್ಕ್ವೇರ್ (ಆರ್.ಎಂ.ಎಸ್.) ಪವರ್ ಎಂದು ಕರೆಯುತ್ತಾರೆ. ಸರಾಸರಿ ಮತ್ತು ಗರಿಷ್ಠ ಸಾಮರ್ಥ್ಯಗಳ ನಡುವೆ ಎಲ್ಲರೂ ಒಮ್ಮತಕ್ಕೆ ಬಂದಿರುವಂತಹ ಒಂದು ವೈಜ್ಞಾನಿಕವಾದ ಸೂತ್ರ ಇಲ್ಲ. ಕೆಲವು ಕಂಪೆನಿಗಳು ತಮ್ಮ ಸ್ಟೀರಿಯೋದ ಮಾಹಿತಿ ಪತ್ರದಲ್ಲಿ ನಮೂದಿಸಿರುವ ಸರಾಸರಿ ಮತ್ತು ಗರಿಷ್ಠ ಸಾಮರ್ಥ್ಯಗಳನ್ನು ಗಮನಿಸಿದಾಗ ಗರಿಷ್ಠ ಸಾಮರ್ಥ್ಯವು ಸರಾಸರಿ ಸಾಮರ್ಥ್ಯಕ್ಕಿಂತ ಸುಮಾರು ಹಲವು ಪಟ್ಟು ಹೆಚ್ಚಿರುವುದನ್ನು ಕಾಣಬಹುದು. ಕಂಪೆನಿಯನ್ನು ಹೊಂದಿಕೊಂಡು ಇದು 4 ರಿಂದ 8 ರ ತನಕ ಇರುತ್ತದೆ. ಇದಕ್ಕೆ ಕಾರಣ ಅವರು ಸ್ಟೀರಿಯೋದ ಎಲ್ಲ ಚಾನೆಲ್‌ಗಳ ಗರಿಷ್ಠ ಸಾಮರ್ಥ್ಯವನ್ನು ಒಟ್ಟು ಮಾಡಿರುವುದು. ಸರಾಸರಿ ಸಾಮರ್ಥ್ಯ ಯಾವಾಗಲೂ ಪ್ರತಿ ಚಾನೆಲ್ ಅನ್ನು ಪ್ರತಿಬಿಂಬಿಸುತ್ತದೆ.</p>



<p class="wp-block-paragraph">ಸಾಮಾನ್ಯ ಸ್ಟೀರಿಯೋವನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸಿ ಕೇಳಿ. ಸಂಗೀತದ ಜೊತೆ ಕಿರಿಕಿರಿ ಧ್ವನಿಗಳೂ ಕೇಳಿ ಬರುತ್ತಿರುತ್ತವೆ. ಇದಕ್ಕೆ ಕಾರಣ ಅಂಪ್ಲಿಫೈಯರ್‌ನ ಟೋಟಲ್ ಹಾರ್ಮೋನಿಕ್ ಡಿಸ್ಟೋರ್ಶನ್ (ಟಿ.ಎಚ್.ಡಿ.). ಸ್ಟೀರಿಯೋದಿಂದ ಸಂಗೀತದ ಜೊತೆಗೆ ಸ್ವಲ್ಪ ಇತರ ಅನವಶ್ಯಕ ಶಬ್ದಗಳೂ ಹೊರಡುತ್ತವೆ. ಇದು ಸಂಗೀತದ ವ್ಯತ್ಯಯ. ಈ ವ್ಯತ್ಯಯದ ಸರಾಸರಿಯನ್ನು ಟಿಎಚ್‌ಡಿ ಸೂಚಿಸುತ್ತದೆ. 1000 ವಾಟ್‌ನ ಮಾಮೂಲಿ ಸ್ಟೀರಿಯೋನ ಟಿಎಚ್‌ಡಿ 10% ಇದ್ದಲ್ಲಿ, ಆ ಸ್ಟೀರಿಯೋವನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸುವಾಗ 100 ವಾಟ್‌ಗಳಷ್ಟು ವ್ಯತ್ಯಯವೇ ಇರುತ್ತದೆ. ಇದೇ ಕಿವಿಗೆ ಕಿರಿಕಿರಿಯುಂಟುಮಾಡುವ ಧ್ವನಿ. ಹೈಫೈ ಎಂದು ಕರೆಸಿಕೊಳ್ಳುವ ಅಂಪ್ಲಿಫೈಯರ್‌ಗಳ ಟಿಎಚ್‌ಡಿ 0.5%ಗಿಂತ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ ಸ್ಟೀರಿಯೋಗಳು, ಅದರಲ್ಲೂ ಮುಖ್ಯವಾಗಿ ಟೂ-ಇನ್-ವನ್ ಅಥವಾ ತ್ರೀ-ಇನ್-ವನ್ ಅಂದರೆ ಕ್ಯಾಸೆಟ್ ಪ್ಲೇಯರ್, ಸಿ.ಡಿ. ಪ್ಲೇಯರ್ ಮತ್ತು ರೇಡಿಯೋ ಇವೆಲ್ಲವುಗಳನ್ನು ಒಳಗೊಂಡಿರುವ ಸಿಸ್ಟಮ್‌ಗಳ ಟಿಎಚ್‌ಡಿ ಶೇಕಡಾ 10 ರಿಂದ 20 ಇರುತ್ತದೆ. ಆದುದರಿಂದಲೇ ಇವುಗಳನ್ನು ಹೈಫೈ ಎಂದು ಪರಿಗಣಿಸುತ್ತಿಲ್ಲ. ಹೈಫೈ ಎನ್ನುವುದು ಹೈ ಫಿಡೆಲಿಟಿಯ (ಉನ್ನತ ಗುಣಪಟ್ಟ) ಸಂಕ್ಷಿಪ್ತ ರೂಪ.</p>



<p class="wp-block-paragraph">ಸ್ಟೀರಿಯೋ ಮತ್ತು ಆಂಪ್ಲಿಫೈಯರ್‌ಗಳ ಗುಣಮಟ್ಟವನ್ನು ಅಳೆಯಲು ಇನ್ನೂ ಒಂದು ಮಾಪನವಿದೆ. ಅದು ಸಂಗೀತ ಮತ್ತು ಶಬ್ದಗಳ ನಿಷ್ಪತ್ತಿ (ಸಿಗ್ನಲ್ ಟು ನೋಯ್ಸ್ ರೇಶಿಯೋ). ಒಂದು ಆಂಪ್ಲಿಫೈಯರ್‌ಗೆ ಯಾವುದೇ ಸಂಗೀತದ ಸಿಗ್ನಲ್ ನೀಡಿಲ್ಲ ಎಂದಿಟ್ಟುಕೊಳ್ಳಿ. ಆಗ ಅದರಿಂದ ಹೊರಬರುವ ಧ್ವನಿಯ ಮಟ್ಟವು ಶಬ್ದವನ್ನು ಸೂಚಿಸುತ್ತದೆ. ಈ ಶಬ್ದ ಕಡಿಮೆಯಿದ್ದಷ್ಟು ಒಳ್ಳೆಯದು. ಸರಾಸರಿ ಸಾಮರ್ಥ್ಯವನ್ನು ಶಬ್ದದ ಮೊತ್ತದಿಂದ ಭಾಗಿಸಿದರೆ ಸಂಗೀತ ಮತ್ತು ಶಬ್ದಗಳ ನಿಷ್ಪತ್ತಿ ದೊರೆಯುತ್ತದೆ. ಈ ನಿಷ್ಪತ್ತಿ ಹೆಚ್ಚಿದ್ದಷ್ಟು ಒಳ್ಳೆಯದು. ಈ ನಿಷ್ಪತ್ತಿಯನ್ನು ಡೆಸಿಬೆಲ್ ಮೂಲಕ ಅಳೆಯುತ್ತಾರೆ. ಉತ್ತಮ ಆಂಪ್ಲಿಫೈಯರ್‌ಗಳಲ್ಲಿ ಈ ನಿಷ್ಪತ್ತಿ 70 ಡೆಸಿಬೆಲ್ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ.</p>



<p class="wp-block-paragraph">ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಗುಣಮಟ್ಟವು ಸಂಖ್ಯಾಬಾಹುಳ್ಯಕ್ಕಿಂತ ಮುಖ್ಯವಾಗುತ್ತದೆ. ಇಲ್ಲೂ ಈ ಸೂತ್ರ ಅನ್ವಯವಾಗುತ್ತದೆ. ಇನ್ನೊಮ್ಮೆ ಸ್ಟೀರಿಯೋ ಅಥವಾ ಆಂಪ್ಲಿಫೈಯರ್ ಕೊಳ್ಳಲು ಅಂಗಡಿಗೆ ಹೋದಾಗ ದೊಡ್ಡ ಮೊತ್ತದ ವಾಟ್ ಕೇಳಿ ಮರುಳಾಗದಿರಿ. ಟಿಎಚ್‌ಡಿ ಮತ್ತು ಡೆಸಿಬೆಲ್ ಎಷ್ಟು ಎಂದು ಕೇಳಲು ಮರೆಯದಿರಿ.</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/what-is-watt/">ವಾಟ್ ಎಂದರೆ ಏನು?</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/what-is-watt/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಸ್ವಾಮಿ ವಿವೇಕಾನಂದ ಮತ್ತು ವಿಜ್ಞಾನ</title>
		<link>https://vishvakannada.com/article/swami-vivekananda-and-science/</link>
					<comments>https://vishvakannada.com/article/swami-vivekananda-and-science/#respond</comments>
		
		<dc:creator><![CDATA[pavanaja]]></dc:creator>
		<pubDate>Fri, 20 Dec 2024 05:51:36 +0000</pubDate>
				<category><![CDATA[ಲೇಖನ]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[science]]></category>
		<category><![CDATA[swami vivekananda]]></category>
		<category><![CDATA[ಪ್ರೇರಣಾಕಾರರು]]></category>
		<category><![CDATA[ವಿಜ್ಞಾನ]]></category>
		<category><![CDATA[ವ್ಯಕ್ತಿ]]></category>
		<category><![CDATA[ಸ್ವಾಮಿ ವಿವೇಕಾನಂದ ಮತ್ತು ವಿಜ್ಞಾನ]]></category>
		<guid isPermaLink="false">https://gadgetloka.net/?p=1059</guid>

					<description><![CDATA[<p>19ನೆಯ ಶತಮಾನದ ಕೊನೆಯ ಭಾಗ ಮತ್ತು 20ನೆಯ ಶತಮಾನದಲ್ಲಿ ವಿಜ್ಞಾನವು ಅತಿ ವೇಗವಾಗಿ ಬೆಳೆಯಿತು. ಐನ್‌ಸ್ಟೈನ್ ಅವರು ವಸ್ತು ಮತ್ತು ಶಕ್ತಿ ಇವುಗಳ ನಡುವಿನ ಸಂಬಂಧವನ್ನು 1905ರಲ್ಲಿ ಸಮೀಕರಣದ ಮೂಲಕ ತೋರಿಸಿಕೊಟ್ಟರು. ಆದರೆ ಇದಕ್ಕಿಂತ&#8230;</p>
<p>The post <a href="https://vishvakannada.com/article/swami-vivekananda-and-science/">ಸ್ವಾಮಿ ವಿವೇಕಾನಂದ ಮತ್ತು ವಿಜ್ಞಾನ</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<p class="wp-block-paragraph">19ನೆಯ ಶತಮಾನದ ಕೊನೆಯ ಭಾಗ ಮತ್ತು 20ನೆಯ ಶತಮಾನದಲ್ಲಿ ವಿಜ್ಞಾನವು ಅತಿ ವೇಗವಾಗಿ ಬೆಳೆಯಿತು. ಐನ್‌ಸ್ಟೈನ್ ಅವರು ವಸ್ತು ಮತ್ತು ಶಕ್ತಿ ಇವುಗಳ ನಡುವಿನ ಸಂಬಂಧವನ್ನು 1905ರಲ್ಲಿ ಸಮೀಕರಣದ ಮೂಲಕ ತೋರಿಸಿಕೊಟ್ಟರು. ಆದರೆ ಇದಕ್ಕಿಂತ ಸುಮಾರು 15 ವರ್ಷಗಳ ಹಿಂದೆಯೇ ಸ್ವಾಮಿ ವಿವೇಕಾನಂದರು ಈ ಬಗ್ಗೆ ಬರೆದಿದ್ದರು. ಅವರಿಗೆ ತಾವು ಹೇಳಬೇಕಾದುದನ್ನು ವಿಜ್ಞಾನ ಮತ್ತು ಗಣಿತದ ಸಮೀಕರಣಗಳ ಮೂಲಕ ಹೇಳಲು ತಿಳಿದಿರಲಿಲ್ಲ. 1893ರಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕಾದ ಶಿಕಾಗೋ ನಗರದಲ್ಲಿ ಪ್ರಪಂಚದ ಹಲವು ದೇಶಗಳ ಪ್ರತಿನಿಧಿಗಳು ಸೇರಿ ನಡೆಸಿದ ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ ಜಗತ್ತನ್ನೇ ಚಕಿತಗೊಳಿಸಿದರು. ಅವರು ಅಲ್ಲಿ ಮಾತನಾಡಿದ್ದು ಕೆಲವೇ ನಿಮಿಷಗಳಾಗಿತ್ತು. ಆ ನಂತರ ಅವರು ಅಲ್ಲಿ ಹಲವು ಸಭೆಗಳಲ್ಲಿ ಮಾತನಾಡಿದರು. ಅವರ ಚುಂಬಕ ವ್ಯಕ್ತಿತ್ವ ಮತ್ತು ಅವರು ಮಾತನಾಡುವಾಗ, ಅವರಿಗೆ ವಿಷಯದ ಬಗ್ಗೆ ಇದ್ದ ಪ್ರಭುತ್ವ, ವಿಷಯ ಮಂಡನೆಯಲ್ಲಿದ್ದ ತಾರ್ಕಿಕತೆ, ಮತ್ತು ಅವುಗಳು ಎಲ್ಲರಿಗೂ ಅರ್ಥವಾಗುವಂತೆ ಮಾತನಾಡಿದ ರೀತಿಯಿಂದಾಗಿ ಅವರ ಸಭೆಗಳು ತುಂಬ ಜನಪ್ರಿಯವಾಗಿದ್ದವು. ಈ ಸಭೆಗಳಲ್ಲಿ ಆ ಕಾಲದ ಹಲವು ಪ್ರಖ್ಯಾತ ವಿಜ್ಞಾನಿಗಳೂ ಭಾಗವಹಿಸುತ್ತಿದ್ದರು.</p>



<p class="wp-block-paragraph">ಸ್ವಾಮಿ ವಿವೇಕಾನಂದರು ಮಂಡಿಸುತ್ತಿದ್ದ ಸಾಂಖ್ಯಶಾಸ್ತ್ರದ ವಿವರಗಳು ಅವರನ್ನು ಆಕರ್ಶಿಸಿದ್ದವು (ಭಗವದ್ಗೀತೆಯ ಎರಡನೆ ಅಧ್ಯಾಯದ ಹೆಸರೇ ಸಾಂಖ್ಯಯೋಗ). ವಿವೇಕಾನಂದರು ವಿಶ್ವದ ವಿದ್ಯಮಾನಗಳನ್ನು ಭಾರತೀಯ ವೇದಾಂತದ ತಳಹದಿಯಲ್ಲಿ ವಿವರಿಸಿದ್ದರು. ಸೂಕ್ಷ್ಮ ಜಗತ್ತು ಮತ್ತು ಕಣ್ಣಿಗೆ ಕಾಣುವ ಜಗತ್ತು, ಇವುಗಳನ್ನು ಒಳಗೊಂಡ ಬ್ರಹ್ಮಾಂಡ ಎಲ್ಲವೂ ಒಂದೇ ನಮೂನೆಯ ಹಂದರವನ್ನು ಹೊಂದಿವೆ ಎಂಬದು ಅವರ ವಾದವಾಗಿತ್ತು. ಅಂದರೆ ಸೂಕ್ಷ್ಮಾತಿಸೂಕ್ಷ್ಮ ವಸ್ತುವೂ ಗ್ರಹ ತಾರೆಗಳೂ ಒಂದೇ ನಮೂನೆಯ ರಚನೆ ಮತ್ತು ವಿನ್ಯಾಸವನ್ನು ಹೊಂದಿವೆ. ವಸ್ತು ಮತ್ತು ಚೈತನ್ಯ ಎರಡೂ ಒಂದೇ. ಅವು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ ಹೊಂದಬಲ್ಲವು. ಅವು ಬೇರೆ ಬೇರೆ ಅಲ್ಲ ಎಂದು ವಿವೇಕಾನಂದರು ಹೇಳಿದರು. ಇದನ್ನು ಸಮೀಕರಣದ ರೂಪದಲ್ಲಿ ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಸಭೆಗೆ ಬಂದಿದ್ದ ಖ್ಯಾತ ವಿಜ್ಞಾನಿ ನಿಕೊಲಾ ಟೆಸ್ಲಾ ಅವರೊಡನೆ ವಿವೇಕಾನಂದರು ಈ ಬಗ್ಗೆ ವಿವರವಾಗಿ ಚರ್ಚಿಸಿದರು. ತಮ್ಮ ಆಲೋಚನೆಯನ್ನು ವಿಜ್ಞಾನದ ಚೌಕಟ್ಟಿನಲ್ಲಿ ಅಂದರೆ ಸಮೀಕರಣಗಳ ಮೂಲಕ ಸಾಧಿಸಲು ವಿವೇಕಾನಂದರು ಟೆಸ್ಲಾ ಅವರನ್ನು ಕೇಳಿಕೊಂಡರು. ಆದರೆ ಟೆಸ್ಲಾ ಅವರಿಗೆ ಅದನ್ನು ಮಾಡಿ ತೋರಿಸಲು ಆಗಿರಲಿಲ್ಲ. ವಿವೇಕಾನಂದರ ದೇಹತ್ಯಾಗದ ನಂತರ, 1905ರಲ್ಲಿ ಅದನ್ನು ಐನ್‌ಸ್ಟೈನ್ ಮಾಡಿ ತೋರಿಸಿದರು. ಅದುವೇ ವಿಶ್ವವಿಖ್ಯಾತ E=mc<sup>2</sup> ಎಂಬ ಸಮೀಕರಣ.</p>



<figure class="wp-block-image size-full is-resized"><img decoding="async" src="https://gadgetloka.net/wp-content/uploads/2024/12/swami-vivekananda-and-science-chatgpt.webp" alt="" class="wp-image-1061" style="aspect-ratio:1;width:478px;height:auto"/><figcaption class="wp-element-caption"><strong>ಕಾಲ್ಪನಿಕ ಚಿತ್ರ</strong></figcaption></figure>



<p class="wp-block-paragraph">ಸೂಕ್ಷ್ಮ ಜಗತ್ತು ಮತ್ತು ಕಣ್ಣಿಗೆ ಕಾಣುವ ಜಗತ್ತು ಎರಡೂ ಒಂದೇ ನಮೂನೆಯ ರಚನೆ ಮತ್ತು ವಿನ್ಯಾಸವನ್ನು ಹೊಂದಿವೆ ಎಂದು ವಿವೇಕಾನಂದರು ಹೇಳಿದ್ದರು. ಹಲವು ದಶಕಗಳ ನಂತರ ಇದನ್ನು ಪಾಶ್ಚಾತ್ಯ ವಿಜ್ಞಾನಿಗಳು ಸಾಧಿಸಿ ತೋರಿಸಿದರು. ಪ್ರತಿ ವಸ್ತುವೂ ಪರಮಾಣುವಿನಿಂದ ಮಾಡಲ್ಪಟ್ಟಿದೆ. ಅದರಲ್ಲಿ ಪ್ರೋಟೋನ್, ನ್ಯೂಟ್ರಾನ್, ಇಲೆಕ್ಟ್ರಾನ್‌ಗಳಿವೆ. ಪ್ರೋಟೋನ್ ಮತ್ತು ನ್ಯೂಟ್ರಾನ್‌ಗಳಿಂದ ಆದ ಕೇಂದ್ರವನ್ನು ಇಲೆಕ್ಟ್ರಾನ್‌ಗಳು ಸುತ್ತುತ್ತಿವೆ ಎಂದು ವೈಜ್ಞಾನಿಕವಾಗಿ ತೋರಿಸಲಾಯಿತು. ನಮ್ಮ ಸೌರವ್ಯೂಹದ ರಚನೆಯೂ ಹೀಗೆಯೇ ಇದೆ. ಅತಿ ಸೂಕ್ಷ್ಮ ಜಗತ್ತೂ, ಗ್ರಹ ತಾರೆಗಳಿಂದಾದ ಜಗತ್ತೂ ಒಂದೇ ವಿನ್ಯಾಸವನ್ನು ಹೊಂದಿವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಹಲವು ದಶಕಗಳ ನಂತರ ನಿಜ ಎಂದು ಸಾಧಿಸಲಾಯಿತು. ವಿವೇಕಾನಂದರು ವೃತ್ತಿನಿರತ ವಿಜ್ಞಾನಿಯಾಗಿರಲಿಲ್ಲ. ಆದರೆ ಓರ್ವ ವಿಜ್ಞಾನಿ ಆಲೋಚನೆ ಮಾಡುವ ರೀತಿಯಲ್ಲೇ ಅವರು ಆಲೋಚಿಸುತ್ತಿದ್ದರು. ಅವರು ಹಲವು ಭಾರತೀಯ ಋಷಿಮುನಿಗಳಂತೆಯೇ ಧ್ಯಾನದ ಮೂಲಕವೇ ಹಲವು ವಿಷಯಗಳನ್ನು, ಸತ್ಯವನ್ನು, ಮನಗಂಡಿದ್ದರು. ಅದನ್ನೇ ಅವರು ಹೇಳಿದ್ದರು. ಹಲವು ದಶಕಗಳ ನಂತರ ವಿಜ್ಞಾನವು ವಿವೇಕಾನಂದರ ಹೇಳಿಕೆಗಳನ್ನು ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿತು.</p>



<p class="wp-block-paragraph">ಸ್ವಾಮಿ ವಿವೇಕಾನಂದರು ಏನನ್ನೂ ಹೊಸದಾಗಿ ಹೇಳಿರಲಿಲ್ಲ. ಭಾರತೀಯ ವೇದಾಂತವನ್ನೇ ಅವರು ಮತ್ತೊಮ್ಮೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿದ್ದರು. ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತೀಯ ವೇದಾಂತ, ಉಪನಿಷತ್ತು, ಭಗವದ್ಗೀತೆ, ಇವುಗಳ ಸಾರವನ್ನು ಮತ್ತೊಮ್ಮೆ ಸರಳ ಭಾಷೆಯಲ್ಲಿ ಹಲವು ದೃಷ್ಟಾಂತಗಳ ಮೂಲಕ ವಿವೇಕಾನಂದರು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದರು. ಇವೆಲ್ಲ ಒಬ್ಬ ವಿಜ್ಞಾನಿ ಮಾಡುವ ಕೆಲಸಗಳು. ಯಾವುದನ್ನೂ ಪ್ರಾಯೋಗಿಕವಾಗಿ ಮಾಡಿ ಅನುಭವಿಸದ ಮೂಲಕ ನಂಬಬೇಡ ಎಂದು ವಿವೇಕಾನಂದರು ಹೇಳಿದ್ದರು. ವಿಜ್ಞಾನವೂ ಅದನ್ನೇ ಹೇಳುತ್ತದೆ.&nbsp;&nbsp;&nbsp;&nbsp;</p>



<p class="wp-block-paragraph">ಪಾಶ್ಚಾತ್ಯ ವಿಜ್ಞಾನವು ಈಥರ್ ಎಂಬ ವಸ್ತುವೊಂದರ ಬಗ್ಗೆ ಹೇಳುತ್ತದೆ. ಇದು ಗ್ರಹಗಳ ಮಧ್ಯೆ ಇದೆ. ಇದರ ಮೂಲಕ ಬೆಳಕು ಚಲಿಸುತ್ತದೆ ಎಂಬುದೊಂದು ನಂಬಿಕೆ ವಿಜ್ಞಾನಿಗಳಲ್ಲಿತ್ತು. ಇದನ್ನೇ ನಮ್ಮ ಪಂಚಭೂತಗಳಲ್ಲಿ ಒಂದಾದ ಆಕಾಶಕ್ಕೆ ಸರಿಸಮಾನ ಎಂದು ನಂಬಲಾಗಿತ್ತು. 1895ರಲ್ಲಿ ಸ್ವಾಮಿ ವಿವೇಕಾನಂದರು ಈಥರ್ ಬಗ್ಗೆ ಒಂದು ಲೇಖನವನ್ನು ಬರೆದರು. ಅದು ನ್ಯೂಯಾರ್ಕ್ ಮೆಡಿಕಲ್ ಟೈಂಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈಥರ್ ಎಂಬುದು ಹೇಗೆ ನಮ್ಮ ಆಕಾಶ ತತ್ತ್ವವನ್ನು ಹೋಲುವುದಿಲ್ಲ, ಈಥರ್ ಎಂಬದು ಅವರ ಆಗಿನ ವಿವರಗಳ ಪ್ರಕಾರ ಇರಲು ಸಾಧ್ಯವೇ ಇಲ್ಲ, ಎಂದು ವಿವೇಕಾನಂದರು ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದರು. 1920ರಲ್ಲಿ ಐನ್‌ಸ್ಟೈನ್ ಈ ಈಥರ್ ಎಂಬ ಸಿದ್ಧಾಂತವನ್ನು ಸುಳ್ಳು ಎಂದು ಹೇಳಿದರು. ಅಂದರೆ ವಿವೇಕಾನಂದರು ತಮ್ಮ ಕಾಲದ ಬಹುತೇಕ ಜನರು ಮಾತ್ರವಲ್ಲ ವಿಜ್ಞಾನಿಗಳಿಂದಲೂ ಸುಮಾರು ದಶಕಗಳಷ್ಟು ಮುಂದಿದ್ದರು.</p>



<p class="wp-block-paragraph">ಡಾರ್ವಿನನ ವಿಕಾಸವಾದ ಎಲ್ಲರಿಗೂ ಗೊತ್ತು ತಾನೆ? ಎಲ್ಲ ಪ್ರಾಣಿಗಳೂ ನಿಧಾನವಾಗಿ ವಿಕಾಸವಾದವು. ಶಕ್ತಿವಂತವಾದುದು ಉಳಿಯಿತು, ಉಳಿದವು ಅಳಿದವು, ಎಂಬುದು ಡಾರ್ವಿನನ ವಿಕಾಸವಾದದ ಸಾರಾಂಶ. ಆದರೆ ವಿವೇಕಾನಂದರು ಇದನ್ನು ಅಲ್ಲಗಳೆಯುತ್ತಾರೆ. “ಮನುಷ್ಯ ಸಂಪೂರ್ಣವಾಗಿ ವಿಕಾಸವಾದದ ಮೂಲಕ ಆದವನಲ್ಲ. ಪ್ರತಿ ಕ್ರಿಯೆಗೂ ವಿರುದ್ಧ ಕ್ರಿಯೆ ಇದೆ. ವಿಕಾಸವೂ ಅದರ ವಿರುದ್ಧ ಪ್ರಕ್ರಿಯೆಗಳೂ ಪ್ರಕೃತಿಯಲ್ಲಿ ನಡೆಯುತ್ತಲೇ ಇವೆ. ಆದುದರಿಂದ ಮಾನವನ ಉಗಮ ಕೇವಲ ವಿಕಾಸವಾದದ ಮೂಲಕ ಆಗಿದ್ದಲ್ಲ” ಎಂದು ವಿವೇಕಾನಂದರು ಹೇಳಿದ್ದರು. ಈಗ ಇದನ್ನು ವಿಜ್ಞಾನಿಗಳೂ ಒಪ್ಪುತ್ತಾರೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳಾದ ಕ್ರಿಶ್ಚಿಯನ್ ಡೆ ದುವೆ ಮತ್ತು ಬ್ರಿಯನ್ ಗುಡ್‌ವಿನ್ ಅವರ ಸಂಶೋಧನೆಗಳ ಪ್ರಕಾರ ಡಾರ್ವಿನನ ವಿಕಾಸವಾದ ಚಿಕ್ಕಚಿಕ್ಕ ವಿಕಾಸಗಳಿಗೆ ಅನ್ವಯವಾಗುತ್ತದಷ್ಟೆ ವಿನಾ ಸಂಪೂರ್ಣವಾಗಿ ಜಗತ್ತಿನಲ್ಲಿರುವ ಎಲ್ಲ ಪ್ರಾಣಿಸಂಕುಲಗಳಿಗೆ ಅನ್ವಯವಾಗುವುದಿಲ್ಲ.</p>



<p class="wp-block-paragraph">ಸ್ವಾಮಿ ವಿವೇಕಾನಂದರ ಚಿಂತನೆಗಳು, ಆಲೋಚನಾ ಧಾಟಿಗಳು ಇಂದಿಗೂ ಪ್ರಸ್ತುತವೇ. ಅದರಲ್ಲೂ ವಿಜ್ಞಾನ ಮತ್ತು ಶಿಕ್ಷಣದ ಬಗ್ಗೆ ಅವರು ಹೇಳಿದುದನ್ನು ಅಳವಡಿಸಿಕೊಂಡರೆ ದೇಶಕ್ಕೆ ಅತ್ಯುತ್ತಮ.</p>



<h2 class="wp-block-heading"><strong>ಭಾರತೀಯ ವಿಜ್ಞಾನ ಸಂಸ್ಥೆ ರೂಪುಗೊಂಡ ಕಥೆ</strong><strong></strong></h2>



<p class="wp-block-paragraph">1893ರ ಬೇಸಿಗೆ ಕಾಲ. ಇಬ್ಬರು ಭಾರತೀಯರು ಹಡಗೊಂದರಲ್ಲಿ ಕೆನಡಾಕ್ಕೆ ಸಹಪ್ರಯಾಣಿಕರಾಗಿದ್ದರು. ಅವರಲ್ಲೊಬ್ಬ 30ರ ಆಸುಪಾಸಿನ ಹರೆಯದ ಸಂನ್ಯಾಸಿ. ಇನ್ನೋರ್ವ ಶ್ರೀಮಂತ &nbsp;ಉದ್ಯೋಗಪತಿ. ಪ್ರಯಾಣ ಹಲವು ದಿವಸಗಳ ಕಾಲ ಇದ್ದ ಕಾರಣ ಅವರಿಗೆ ಹಲವು ಸಲ ಭೇಟಿಯಾಗಿ ಮಾತುಕತೆ ನಡೆಸುವ ಸಂದರ್ಭಗಳು ಒದಗಿ ಬಂದಿದ್ದವು. ಹಾಗೆ ಮಾತನಾಡುವಾಗ ಕೇವಲ ಕಚ್ಚಾವಸ್ತುಗಳನ್ನು ನಿರ್ಯಾತ ಮಾಡುವ ಬದಲು ಭಾರತದಲ್ಲೇ ಅಂತಿಮ ಉತ್ಪನ್ನಗಳನ್ನು ತಯಾರಿಸಿದರೆ ಉತ್ತಮವಲ್ಲವೇ ಎಂದು ಸಂನ್ಯಾಸಿಯು ಉದ್ಯೋಗಪತಿಗೆ ಪ್ರಶ್ನಿಸಿದ್ದರು. ಈ ರೀತಿ ಮಾಡುವುದರಿಂದ ಜನರಿಗೆ ಉದ್ಯೋಗ ದೊರೆಯುತ್ತದೆ, ದೇಶವು ಸ್ವಾವಲಂಬಿಯಾಗುತ್ತದೆ ಮತ್ತು ಸುಧಾರಣೆಯತ್ತ ಸಾಗುತ್ತದಲ್ಲವೇ ಎಂದು ಪ್ರಶ್ನಿಸಿದ್ದರು. ಆ ಸಂನ್ಯಾಸಿಯು ಕೇವಲ ವಿಜ್ಞಾನ ಮಾತ್ರವಲ್ಲ ತಂತ್ರಜ್ಞಾನದ ಬಗ್ಗೆಯೂ ಮಾತನಾಡಿದ್ದರು. ಭಾರತೀಯರನ್ನು ಈ ಕ್ಷೇತ್ರಗಳಲ್ಲಿ ಪರಿಣತರನ್ನಾಗಿಸಬೇಕು ಎಂದು ಚರ್ಚಿಸಿದ್ದರು. ಆಗ ಭಾರತದಲ್ಲಿದ್ದುದು ಬ್ರಿಟಿಷ್ ಸರಕಾರವಾಗಿತ್ತು. ಆದುದರಿಂದ ಇದನ್ನು ಕಾರ್ಯಗತ ಮಾಡುವುದು ಸುಲಭವಲ್ಲ ಎಂಬ ಅರಿವು ಇಬ್ಬರಿಗೂ ಇತ್ತು. ಆ ಉದ್ಯೋಗಪತಿ ಜೆ. ಎನ್. ಟಾಟಾ ಹಾಗೂ ಆ ಸಂನ್ಯಾಸಿ ಸ್ವಾಮಿ ವಿವೇಕಾನಂದ ಆಗಿದ್ದರು.</p>



<p class="wp-block-paragraph">ಐದು ವರ್ಷಗಳ ನಂತರ ಟಾಟಾ ಅವರು ಸ್ವಾಮಿ ವಿವೇಕಾನಂದರಿಗೆ ಒಂದು ಪತ್ರ ಬರೆದರು. ಅದರಲ್ಲಿ ಅವರು ಈ ಕನಸನ್ನು ನನಸಾಗಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಭಾರತದಲ್ಲಿ ಒಂದು ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಹುಟ್ಟುಹಾಕುವ ಬಗ್ಗೆ ಪ್ರಸ್ತಾಪಿಸಿದ್ದರು. ಅದರಲ್ಲಿ ವಿಜ್ಞಾನ ಮಾತ್ರವಲ್ಲದೆ ಮಾನವಿಕ ಶಾಸ್ತ್ರಗಳ ಬಗೆಗೂ ಅಧ್ಯಯನ ಮತ್ತು ಸಂಶೋಧನೆಗಳು ನಡೆಯಬೇಕು ಎಂದು ಅವರು ಆಶಿಸಿದ್ದರು. ಇದು ಕೇವಲ ವಿಜ್ಞಾನ ಮಾತ್ರವಲ್ಲ, ಭಾರತೀಯ ಪರಂಪರೆ ಮತ್ತು ಮೌಲ್ಯಗಳನ್ನೂ ಜೊತೆಜೊತೆಯಾಗಿ ಸಾಗಿಸಬೇಕು. ಇಂತಹ ಒಂದು ಕೆಲಸಕ್ಕೆ ಮುಂದಾಳತ್ವ ವಹಿಸಲು ನೀವೇ ತಕ್ಕ ವ್ಯಕ್ತಿ ಎಂದು ಅವರು ಸ್ವಾಮಿ ವಿವೇಕಾನಂದರಿಗೆ ಆಹ್ವಾನಿಸಿದ್ದರು.</p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<figure class="wp-block-image size-large"><img decoding="async" data-id="1062" src="https://gadgetloka.net/wp-content/uploads/2024/12/Sir_J._N._Tata_cropped.jpg" alt="" class="wp-image-1062"/><figcaption class="wp-element-caption">ಜೆ. ಎನ್ ಟಾಟ</figcaption></figure>



<figure class="wp-block-image size-large"><img decoding="async" data-id="1063" src="https://gadgetloka.net/wp-content/uploads/2024/12/640px-Sister_Nivedita_reading_a_book.png" alt="" class="wp-image-1063"/><figcaption class="wp-element-caption">ಸಹೋದರಿ ನಿವೇದಿತಾ</figcaption></figure>
</figure>



<p class="wp-block-paragraph">ಟಾಟಾ ಅವರು ಈ ಕೆಲಸಕ್ಕೆ ಆ ಕಾಲದ ಸುಮಾರು 30 ಲಕ್ಷ ರೂಪಾಯಿಯಷ್ಟು ಹಣವನ್ನು ತೆಗೆದಿಟ್ಟಿದ್ದರು. ಈ ಸಂಶೋಧನಾ ಸಂಸ್ಥೆಯು ಭಾರತದಲ್ಲಿ ಪ್ರಚಲಿತವಾಗಿದ್ದ ಹಲವು ಕಾಯಿಲೆಗಳಿಗೆ ಔಷಧ ಕಂಡುಹಿಡಿಯುವುದು, ಭಾರತೀಯ ಪರಿಸರಕ್ಕೆ ಅಗತ್ಯವಾದ ರಾಸಾಯನಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುವುದು, ಮರೆತು ಹೋದ ಭಾರತೀಯ ಇತಿಹಾಸದ ಬಗ್ಗೆ ಸರಿಯಾದ ಸಂಶೋಧನೆ ಮಾಡಿ ದಾಖಲೀಕರಣ ಮಾಡುವುದು &#8211; &nbsp;ಇವು ಅವರ ಉದ್ದೇಶ ಆಗಿತ್ತು. ಸ್ವಾಮಿ ವಿವೇಕಾನಂದರಿಗೆ ತಮ್ಮದೇ ಆದ ಹಲವು ಕೆಲಸಗಳ ಒತ್ತಡವಿದ್ದುದರಿಂದ ಈ ಕೆಲಸದ ಮುಂದಾಳತ್ವ ವಹಿಸಲು ಆಗಲಿಲ್ಲ.</p>



<p class="wp-block-paragraph">ಜೆ. ಎನ್. ಟಾಟಾರವರು ಆಗಿನ ವೈಸ್‌ರಾಯ್ ಆಗಿದ್ದ ಕರ್ಜನ್ ಅವರಿಗೆ ಈ ಬಗ್ಗೆ ಪತ್ರ ಬರೆದರು. ವೈಸ್‌ರಾಯ್ ಅವರು ಈ ಆಲೋಚನೆ ಪ್ರಯೋಜನಕ್ಕಿಲ್ಲದ್ದು ಎಂದು ಬದಿಗೆ ಸರಿಸಿದರು. ಸಂಶೋಧನೆ ಮಾಡುವಂತಹ ಬೌದ್ಧಿಕ ಮಟ್ಟ ಭಾರತೀಯರಿಗೆ ಇಲ್ಲ ಎಂಬುದು ಅವರ ತೀರ್ಮಾನವಾಗಿತ್ತು. ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತ ಅವರು ಈ ವಿಷಯವನ್ನು ಮುಂದಕ್ಕೆ ತೆಗದುಕೊಂಡು ಹೋಗಲು ನಿರ್ಧರಿಸಿದರು. ಅವರು ಸರಕಾರಕ್ಕೆ ಈ ಬಗ್ಗೆ ಪತ್ರ ಬರೆದರು. ಸರಕಾರವು 1900ರಲ್ಲಿ ಸರ್ ರಾಮ್ಸೇ ಎಂಬ ಖ್ಯಾತ ವಿಜ್ಞಾನಿಗೆ ಇದರ ಬಗ್ಗೆ ವರದಿ ಸಲ್ಲಿಸಲು ಕೇಳಿಕೊಂಡಿತು. ರಾಮ್ಸೇ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಕೆಲವು ವರ್ಷಗಳ ನಂತರ ಅವರಿಗೆ ಜಡ ಅನಿಲಗಳ ಸಂಶೋಧನೆಗೆ&nbsp; ನೋಬೆಲ್ ಪುರಸ್ಕಾರ ಬಂದಿತ್ತು. ಆದರೆ ಅವರೂ ತಮ್ಮ ವಸಾತುಶಾಹಿ ಧೋರಣೆಯಿಂದ ಹೊರಗೆ ಬಂದಿರಲಿಲ್ಲ. ಇಂತಹ ಒಂದು ಸಂಶೋಧನಾ ಸಂಸ್ಥೆಯನ್ನು ಭಾರತದಲ್ಲಿ ಹುಟ್ಟುಹಾಕುವುದರ ವಿರೋಧವಾಗಿ ಅವರ ವರದಿ ಇತ್ತು. ಬ್ರಿಟಿಷರು ಟಾಟಾ ಅವರಿಗೆ ನಿಮ್ಮ 30 ಲಕ್ಷ ಕೊಟ್ಟಿಡಿ. ಮುಂದಕ್ಕೆ ನೋಡೋಣ ಎಂದು ಹೇಳಿ ಕೈ ತೊಳೆದುಕೊಂಡರು. ಅಲ್ಲಿಗೆ ಸ್ವಾಮಿ ವಿವೇಕಾನಂದರ ಕನಸು ಭಗ್ನವಾದಂತಾಯಿತು.</p>



<p class="wp-block-paragraph">ಆದರೆ ಸೋದರಿ ನಿವೇದಿತಾ ಅವರು ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ಅವರು ಇಂಗ್ಲೆಂಡ್ ಮತ್ತು ಅಮೇರಿಕಾ ದೇಶಗಳಲ್ಲಿ ಹಲವರನ್ನು ಸಂಪರ್ಕಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅವರ ಸಹಾಯಕ್ಕಾಗಿ ಯಾಚಿಸಿದರು. ಅವರಲ್ಲೊಬ್ಬ ಪ್ರಮುಖರು ಅಮೇರಿಕಾ ದೇಶದ ವಿಲಿಯಂ ಜೇಮ್ಸ್. ಅವರು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ಅವರಿಂದ ಪ್ರಭಾವಿತರಾಗಿದ್ದರು. ಕೆಲವೇ ವರ್ಷಗಳಲ್ಲಿ ಸ್ವಾಮಿ ವಿವೇಕಾನಂದರೂ, ಟಾಟಾ ಅವರೂ ವಿಧಿವಶರಾದರು. ಆದರೆ ಸೋದರಿ ನಿವೇದಿತ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. 1909ರಲ್ಲಿ ವೈಸ್‌ರಾಯ್ ಆಗಿ ಬಂದ ಲಾರ್ಡ್ ಮಿಂಟೋ ಅವರು ಈ ಯೋಜನೆಗೆ ಸಮ್ಮತಿಸಿದರು. ಆದರೆ ಅಂತಿಮವಾಗಿ ಅದು ಸ್ವಾಮಿ ವಿವೇಕಾನಂದ ಮತ್ತು ಟಾಟಾ ಅವರು ಯೋಚಿಸಿದಂತೆ ಅದು ವಿಜ್ಞಾನ ಮತ್ತು ಭಾರತೀಯ ಪರಂಪರೆಯ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಮಾಡುವ ಬದಲು ಕೇವಲ ವಿಜ್ಞಾನಕ್ಕೆ ಸೀಮಿತವಾಗಿತ್ತು. ಟಾಟಾ ಅವರು ಈ ಸಂಶೋಧನಾ ಸಂಸ್ಥೆ ಮುಂಬಯಿಯಲ್ಲಿರಬೇಕು ಎಂದು ಆಶಿಸಿದ್ದರು. ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರು ಇದಕ್ಕೆ 370 ಎಕ್ರೆ ಸ್ಥಳವನ್ನು ಬೆಂಗಳೂರಿನಲ್ಲಿ ನೀಡಿದುದರಿಂದ ಇದು ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ ಇದರ ಹೆಸರು ಟಾಟಾ ವಿಜ್ಞಾನ ಸಂಸ್ಥೆ ಎಂದಿತ್ತು. ನಂತರ ಅದರ ಹೆಸರು ಭಾರತೀಯ ವಿಜ್ಞಾನ ಸಂಸ್ಥೆ ಎಂದಾಯಿತು. ಇಂದಿಗೂ ಬೆಂಗಳೂರಿನ ಮಲ್ಲೇಶ್ವರದ ಸುತ್ತಮುತ್ತಲಿನ ಹಳಬರು ಅದನ್ನು ಟಾಟಾ ಇನ್‌ಸ್ಟಿಟ್ಯೂಟ್ ಎಂದೇ ಕರೆಯುತ್ತಾರೆ. ಹೀಗೆ ಸ್ವಾಮಿ ವಿವೇಕಾನಂದರ ದೂರಗಾಮಿ ದೃಷ್ಟಿ ಮತ್ತು ವಿಜ್ಞಾನದ ಮೇಲೆ ಅವರಿಗೆ ಆಸಕ್ತಿಯಿಂದಾಗಿ ಭಾರತದ ಅತ್ಯುತ್ತಮ ವಿಜ್ಞಾನ ಸಂಸ್ಥೆ ಅಸ್ತಿತ್ವಕ್ಕೆ ಬಂತು. &nbsp;&nbsp;&nbsp;&nbsp;&nbsp;</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/swami-vivekananda-and-science/">ಸ್ವಾಮಿ ವಿವೇಕಾನಂದ ಮತ್ತು ವಿಜ್ಞಾನ</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/swami-vivekananda-and-science/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಸಹಜ ಭಾಷಾ ಸಂಸ್ಕರಣ</title>
		<link>https://vishvakannada.com/article/natural-language-processing/</link>
					<comments>https://vishvakannada.com/article/natural-language-processing/#respond</comments>
		
		<dc:creator><![CDATA[pavanaja]]></dc:creator>
		<pubDate>Thu, 19 Dec 2024 16:27:24 +0000</pubDate>
				<category><![CDATA[ಲೇಖನ]]></category>
		<category><![CDATA[NLP]]></category>
		<category><![CDATA[Natural Language Processing]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[technology]]></category>
		<category><![CDATA[ಭಾಷೆ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ಸಹಜ ಭಾಷಾ ಸಂಸ್ಕರಣ]]></category>
		<guid isPermaLink="false">https://gadgetloka.net/?p=1057</guid>

					<description><![CDATA[<p>ಡಿಜಿಟಲ್ ಲೋಕದಲ್ಲಿ ನಮ್ಮ ಭಾಷೆ “ನರೇಂದ್ರ ಮೋದಿಯವರು ವಾರಣಾಸಿಗೆ ಭೇಟಿ ನೀಡಿದರು” “ಇವತ್ತು ಮಳೆ ಬಂದಿದೆ” ದೈನಂದಿನ ಜನಜೀವನದಲ್ಲಿ ನಾವು ಪ್ರತಿನಿತ್ಯ ಇಂತಹ ಹಲವಾರು ವಾಕ್ಯಗಳನ್ನು ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. ಈ&#8230;</p>
<p>The post <a href="https://vishvakannada.com/article/natural-language-processing/">ಸಹಜ ಭಾಷಾ ಸಂಸ್ಕರಣ</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ಡಿಜಿಟಲ್ ಲೋಕದಲ್ಲಿ ನಮ್ಮ ಭಾಷೆ </strong><strong></strong></h2>



<p class="wp-block-paragraph">“ನರೇಂದ್ರ ಮೋದಿಯವರು ವಾರಣಾಸಿಗೆ ಭೇಟಿ ನೀಡಿದರು”</p>



<p class="wp-block-paragraph">“ಇವತ್ತು ಮಳೆ ಬಂದಿದೆ”</p>



<p class="wp-block-paragraph">ದೈನಂದಿನ ಜನಜೀವನದಲ್ಲಿ ನಾವು ಪ್ರತಿನಿತ್ಯ ಇಂತಹ ಹಲವಾರು ವಾಕ್ಯಗಳನ್ನು ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. ಈ ಮಾಹಿತಿಯ ಪ್ರಮುಖ ಅಂಗ ಪಠ್ಯರೂಪದಲ್ಲಿದೆ ಅಂದರೆ ವಾಕ್ಯಗಳು. ವಾಕ್ಯಗಳು ಪದಗಳಿಂದಾಗಿವೆ. ಈ ವಾಕ್ಯಗಳನ್ನು ನಮ್ಮ ಮೆದುಳು ಸಹಜವಾಗಿಯೇ ಪದಗಳಾಗಿ ವಿಂಗಡಿಸಿ ಅವುಗಳ ಅರ್ಥವನ್ನು ವಿಶ್ಲೀಷಿಸುತ್ತದೆ. ಎಲ್ಲ ವಾಕ್ಯಗಳನ್ನು ಓದಿ ಇಡಿಯ ಲೇಖನದ ಒಟ್ಟು ಸಾರಾಂಶವನ್ನು ಮೆದುಳು ಗ್ರಹಿಸುತ್ತದೆ. ಈ ಪ್ರಕ್ರಿಯೆ ಮಾನವರಲ್ಲಿ ಸಹಜವಾಗಿ ನಡೆಯುವ ಕ್ರಿಯೆ. ಇದನ್ನೇ ಗಣಕ ಬಳಸಿ ಮಾಡುವಂತಿದ್ದರೆ? ಮಾಹಿತಿ ತಂತ್ರಜ್ಞಾನದ ಈ ವಿಭಾಗಕ್ಕೆ ಸಹಜಭಾಷಾ ಸಂಸ್ಕರಣೆ (Natural Language Processing) ಎಂಬ ಹೆಸರಿದೆ.</p>



<p class="wp-block-paragraph">ಯಂತ್ರಗಳೇ ಭಾಷೆಯನ್ನು ಅರ್ಥಮಾಡಿಕೊಳ್ಳುವಂತಿದ್ದರೆ ಒಳ್ಳೆಯದಲ್ಲವೇ? ಉದಾಹರಣೆಗೆ ಬ್ಯಾಂಕಿನ ಎಟಿಎಂ ಯಂತ್ರದ ಮುಂದೆ ನಿಂತು ಅದು ತಾನಾಗಿಯೇ ನಿಮ್ಮನ್ನು ಗುರುತಿಸಿ ನಿಮ್ಮ ಮಾತುಗಳನ್ನು ಅರ್ಥಮಾಡಿಕೊಂಡು ಹಣ ನೀಡುವುದು. ಗಣಕಕ್ಕೆ ಮಾತುಗಳ ಮೂಲಕವೇ ಆದೇಶ ನೀಡಬಹುದು. ಲೈಟ್ ಆನ್ ಮಾಡು ಎಂದರೆ ಬಲ್ಬ್ ಹೊತ್ತಿಕೊಳ್ಳುತ್ತದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡಬಹುದು. ಹೀಗೆ ಈ ಸಹಜಭಾಷಾ ಸಂಸ್ಕರಣೆಯ ಕ್ಷೇತ್ರದ ಉಪಕಾರಗಳು ಬಹಳಷ್ಟಿವೆ.</p>



<p class="wp-block-paragraph">ತೀನಂಶ್ರೀಯವರ ವ್ಯಾಕರಣ ಪುಸ್ತಕ ತೆರೆದು ನೋಡಿ. ಎಲ್ಲ ವ್ಯಾಕರಣಗಳೂ ಪ್ರಾರಂಭವಾಗುವುದು ವಾಕ್ಯಗಳನ್ನು ಪದಗಳಾಗಿ ವಿಂಗಡಿಸುವಲ್ಲಿಂದ. “ಬಸವ ಬಂದನು” ಎಂಬ ವಾಕ್ಯದಲ್ಲಿ ಎರಡು ಪದಗಳಿವೆ. ಮೊದಲನೆಯ “ಬಸವ” ಎಂಬ ಪದ ನಾಮಪದ. ಎರಡನೆಯ “ಬಂದನು” ಎಂಬುದು ಕ್ರಿಯಾಪದ. ಇದನ್ನು ನಾವು ಶಾಲೆಯಲ್ಲಿ ಕಲಿತಿದ್ದೇವೆ. ಇದನ್ನೇ ಗಣಕ ಮೂಲಕ ಮಾಡುವುದು ಸಹಜಭಾಷಾ ಸಂಸ್ಕರಣೆಯ ಪ್ರಥಮ ಹಂತ. ಇದು ಹೇಳಿದಷ್ಟು ಸುಲಭವಲ್ಲ. ಮೊದಲನೆಯದಾಗಿ ಗಣಕದಲ್ಲಿ ಲಕ್ಷಗಟ್ಟಲೆ ಪದಗಳ ಕಣಜವಿರಬೇಕಾಗುತ್ತದೆ. ಈ ಪದಗಳು ಕೇವಲ ಒಂದು ದತ್ತಸಂಚಯದಲ್ಲಿ (database) ಇದ್ದರೆ ಸಾಲದು. ಪ್ರತಿ ಪದಕ್ಕೂ ಅದರ ವ್ಯಾಕರಣಸ್ವರೂಪದ ವಿಂಗಡಣೆ ಆಗಿರಬೇಕು. ಉದಾಹರಣೆಗೆ ಭೀಮ &lt;ನಾಮಪದ&gt;, ಓಡು &lt;ಕ್ರಿಯಾಪದ&gt;, ಮರ &lt;ನಾಮಪದ&gt;,.. ಇಂತಹ ಸಂಗ್ರಹಕ್ಕೆ corpus ಅರ್ಥಾತ್ ಪಠ್ಯಕಣಜ ಎನ್ನುತ್ತಾರೆ. ಪದಗಳ ವ್ಯಾಕರಣಸ್ವರೂಪದ ವಿಂಗಡಣೆ ಅಥವಾ ಸರಳವಾಗಿ ಹೇಳುವುದಾದರೆ ಪದವಿಂಗಡಣೆಗೆ part of speech tagging ಎನ್ನುತ್ತಾರೆ. ಈ ಮೊದಲ ಹಂತದ ಕ್ರಿಯೆಗೆ ಹಲವಾರು ತಂತ್ರಾಂಶಗಳು ಲಭ್ಯವಿವೆ.</p>



<p class="wp-block-paragraph">ಇಂಗ್ಲಿಶ್ ಭಾಷೆಯಲ್ಲಿ ಇದು ಅಷ್ಟು ಕಷ್ಟವಿಲ್ಲ. ಕನ್ನಡದ ಸಂದರ್ಭದಲ್ಲಿ ಇದು ತುಂಬ ಕ್ಲಿಷ್ಟ. ಇದಕ್ಕೆ ಕಾರಣ ಸಂಧಿವಿಂಗಡಣೆ. “ಬಹುಪಯೋಗಿಯಾಗಿದೆ” ಎಂಬ ಪದವನ್ನು ಬಹು + ಉಪಯೋಗಿ + ಆಗಿದೆ ಎಂಬುದಾಗಿ ವಿಂಗಡಿಸಬೇಕು. ಈ ಮೂಲಪದಗಳು ಸೇರಿ ಸಂಯುಕ್ತಪದವಾಗುವ ಸೂತ್ರವು ಗಣಕದಲ್ಲಿ ಇರಬೇಕು. ಇದರ ಜೊತೆ ವಿಭಕ್ತಿ ಪ್ರತ್ಯಯಗಳ ಸೂತ್ರ ಸಿದ್ಧವಿರಬೇಕು. ಯಾವ ಪದ ಎಲ್ಲಿ ಕೊನೆಗೊಳ್ಳುತ್ತದೆ ಯಾವ ಪದ ಎಲ್ಲಿ ಪ್ರಾರಂಭವಾಗುತ್ತದೆ, ಯಾವ ಸಂದರ್ಭದಲ್ಲಿ ಯಾವ ಸಂಧಿಯ ಸೂತ್ರ ಬಳಸಬೇಕು ಎಂಬಿತ್ಯಾದಿ ಅನುಮಾನಗಳನ್ನು ಪರಿಹರಿಸಬೇಕು. ಅನುಮಾನಾಸ್ಪದವಾದ ಹಲವಾರು ಸಂದರ್ಭಗಳನ್ನು ಮೊದಲೇ ಪಠ್ಯಕಣಜದಲ್ಲಿ ದಾಖಲಿಸಿಟ್ಟಿದ್ದರೆ ಒಳ್ಳೆಯದು. ಈ ರೀತಿ ಪದವಿಂಗಡಣೆಯನ್ನು ಒಂದು ಹಂತದಲ್ಲಿ ತಂತ್ರಾಂಶದ ಮೂಲಕ ಮಾಡಿಸಿ ಅನುಮಾನಾಸ್ಪದವಾದವುಗಳನ್ನು ನಂತರ ಮನುಷ್ಯರೇ ಮಾಡಬೇಕು. ಹೀಗೆ ಮಾಡುವಾಗ ತಂತ್ರಾಂಶವನ್ನು “ಕಲಿಯುವ” ಸ್ಥಿತಿಯಲ್ಲಿಟ್ಟುಕೊಂಡು ಮುಂದೆ ಇದೇ ರೀತಿಯ ಸಂದರ್ಭ ಬಂದಾಗ ಈ ಕಲಿಕೆಯ ಅನುಭವವನ್ನು ಬಳಸಬೇಕು.</p>



<p class="wp-block-paragraph">ಈ ರೀತಿ ವ್ಯಾಕರಣಸ್ವರೂಪ ನಿಗದಿಯನ್ನು ನಮ್ಮ ಭಾಷೆಗೆ ತಂತ್ರಾಂಶಗಳ ಮೂಲಕ ಮಾಡುವುದು ಕಷ್ಟ ಎಂದು ಅನ್ನಿಸಿದರೂ ಅದು ನಿಜವಾಗಿ ನೋಡಿದರೆ ಪರಿಸ್ಥಿತಿ ಹಾಗಿಲ್ಲ. ಯಾಕೆಂದರೆ ಭಾರತೀಯ ಬಾಷೆಗಳಲ್ಲಿ ಅನುಮಾನಾಸ್ಪದ ಸಂದರ್ಭಗಳು ಕಡಿಮೆ. ಒಂದು ಪದವನ್ನು ನಾವು ಯಾವ ರೀತಿ ಬರೆಯುತ್ತೇವೆಯೋ ಅದೇ ರೀತಿ ಓದುತ್ತೇವೆ. ಇಂಗ್ಲಿಶ್ ಭಾಷೆಯಂತೆ ಬರೆದುದನ್ನು ಯಾವ ರೀತಿ ಉಚ್ಛರಿಸಬೇಕು ಎಂದು ನಮಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಈ ಗುಣವೈಶಿಷ್ಟ್ಯವು ಪಠ್ಯದಿಂದ ಧ್ವನಿಯನ್ನು ಮೂಡಿಸುವಲ್ಲಿ ತುಂಬ ಉಪಯುಕ್ತ. ಎಲ್ಲ ಪದಗಳು, ಅವುಗಳ ಸಂಯುಕ್ತಗಳು, ಅವುಗಳನ್ನು ಬೇರೆಬೇರೆ ಧ್ವನಿಯಲ್ಲಿ ಬೇರೆಬೇರೆ ಭಾವನೆಗಳಲ್ಲಿ ಉಚ್ಛರಿಸುವ ವಿಧಾನಗಳನ್ನು ದತ್ತಸಂಚಯದಲ್ಲಿ ಇಟ್ಟುಕೊಂಡು ಪಠ್ಯದಿಂದ ಧ್ವನಿಗೆ ಬದಲಾವಣೆ ಮಾಡುವ ತಂತ್ರಾಂಶದ ತಯಾರಿ ಮಾಡಬಹುದು.</p>



<p class="wp-block-paragraph">ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ. ಆತ ಸಂಸ್ಕೃತ ಭಾಷೆಗೆ ವ್ಯಾಕರಣಸ್ವರೂಪ ನಿಗದಿಯ ಸೂತ್ರಗಳನ್ನು ನೀಡಿದ. ಆತನಿಗೆ ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ ಎಂಬ ಹೆಸರೂ ಇದೆ. ದುರದೃಷ್ಟಕ್ಕೆ ಆತನ ಕಾಲದಲ್ಲಿ ಗಣಕ ಮತ್ತು ತಂತ್ರಾಂಶಗಳು ಇರಲಿಲ್ಲ.</p>



<p class="wp-block-paragraph">ಈಗ ಈ ಸಹಜಭಾಷಾ ಸಂಸ್ಕರಣೆಯ ಇತರೆ ವಿಭಾಗಗಳನ್ನು ಮತ್ತು ಸೌಕರ್ಯಗಳನ್ನು ಸ್ವಲ್ಪ ಪರಿಶೀಲಿಸೋಣ.</p>



<p class="wp-block-paragraph">ಒಂದು ಪ್ಯಾರ ಅಥವಾ ಸಂಪೂರ್ಣ ಲೇಖನವನ್ನು ಓದಿ ನಾವು ಮನಸ್ಸಿನಲ್ಲಿಯೇ ಅದರ ಸಾರಾಂಶವನ್ನು ಗ್ರಹಿಸಿಕೊಳ್ಳುತ್ತೇವೆ. ಇದನ್ನೇ ತಂತ್ರಾಂಶಗಳ ಮೂಲಕವೂ ಮಾಡಬಹುದು. ದೀರ್ಘವಾದ ಲೇಖನ ಅಥವಾ ವರದಿಯನ್ನು ತಂತ್ರಾಂಶವು ಓದಿ ಕ್ಷಣಮಾತ್ರದಲ್ಲಿ ಅದರ ಸಾರಾಂಶವನ್ನು ನೀಡಬಹುದು. ಪಠ್ಯದಿಂದ ಧ್ವನಿಗೆ ಮತ್ತು ಧ್ವನಿಯಿಂದ ಪಠ್ಯಕ್ಕೆ ಬದಲಾವಣೆ ಮಾಡಬಹುದು. ಲೇಖಕರು ತಮ್ಮ ಲೇಖನವನ್ನು ಬೆರಳಚ್ಚು ಮಾಡುವ ಬದಲಿಗೆ ಬಾಯಿಯಲ್ಲಿ ಹೇಳುತ್ತಾ ಹೋಗಬಹುದು. ಅದು ಗಣಕದಲ್ಲಿ ಅಥವಾ ಮೊಬೈಲಿನಲ್ಲಿ ಪಠ್ಯವಾಗಿ ಪರಿವರ್ತನೆಯಾಗುತ್ತದೆ. &nbsp;</p>



<p class="wp-block-paragraph">ಈ ಕ್ಷೇತ್ರದ ಇನ್ನೊಂದು ಪ್ರಮುಖ ಕೊಡುಗೆಯೆಂದರೆ ತಂತ್ರಾಂಶಗಳ ಮೂಲಕ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ. ಈ ಬಗ್ಗೆ ಮೈಕ್ರೋಸಾಫ್ಟ್, ಗೂಗ್ಲ್, ಅಮೆಝಾನ್ ಮತ್ತು ಇನ್ನೂ ಹಲವು ಕಂಪೆನಿಗಳು ಸಂಶೋಧನಾ ನಿರತವಾಗಿವೆ. ಬಿಂಗ್ ಮತ್ತು ಗೂಗ್ಲ್ ಶೋಧಕಗಳು ಪ್ರಪಂಚದ ಹಲವು ಭಾಷೆಗಳ ನಡುವೆ ಭಾಷಾಂತರದ ಸೌಲಭ್ಯವನ್ನು ಈಗಾಗಲೇ ನೀಡಿವೆ. ಕನ್ನಡವೂ ಇದರಲ್ಲಿ ಸೇರಿದೆ. ಆದರೆ ಈ ಯಂತ್ರಾನುವಾದ ಆರಂಭದಲ್ಲಿ ಅಷ್ಟು ಚೆನ್ನಾಗಿರಲಿಲ್ಲ. ಜನರು ಅವನ್ನು ಬಳಸಿ, ತಪ್ಪುಗಳನ್ನು ತಿದ್ದಿ, ಈಗ ಅವು ತುಂಬ ಸುಧಾರಿಸಿವೆ.</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/natural-language-processing/">ಸಹಜ ಭಾಷಾ ಸಂಸ್ಕರಣ</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/natural-language-processing/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಕಲಿಕಾರಂಜನೆ</title>
		<link>https://vishvakannada.com/article/edutainment/</link>
					<comments>https://vishvakannada.com/article/edutainment/#respond</comments>
		
		<dc:creator><![CDATA[pavanaja]]></dc:creator>
		<pubDate>Thu, 19 Dec 2024 15:23:03 +0000</pubDate>
				<category><![CDATA[ಲೇಖನ]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[education]]></category>
		<category><![CDATA[edutainment]]></category>
		<category><![CDATA[entertainment]]></category>
		<category><![CDATA[technology]]></category>
		<category><![CDATA[ಕಲಿಕಾರಂಜನೆ]]></category>
		<category><![CDATA[ತಂತ್ರಜ್ಞಾನ]]></category>
		<category><![CDATA[ಮನರಂಜನೆ]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ಶಿಕ್ಷಣ]]></category>
		<guid isPermaLink="false">https://gadgetloka.net/?p=1049</guid>

					<description><![CDATA[<p>ಶಿಕ್ಷಣದ ಜೊತೆ ಮನರಂಜನೆ ಸೇರಿದಾಗ ಮಾಧ್ಯಮಿಕ ಶಾಲೆಯ ಎಂಟನೆಯ ತರಗತಿ. ಖಗೋಳಶಾಸ್ತ್ರದ ಪಾಠ ನಡೆಯುತ್ತಿದೆ. ಅಧ್ಯಾಪಕರು ಸೌರವ್ಯೂಹದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಪ್ಲೂಟೋ ಮತ್ತು ನೆಪ್ಚೂನ್‌ಗಳು ಸೂರ್ಯನ ಸುತ್ತುವ ಕಕ್ಷೆಗಳ ವೈಚಿತ್ರ್ಯವನ್ನು ವಿವರಿಸುತ್ತಿದ್ದಾರೆ. ೧೯೭೯ರಿಂದ&#8230;</p>
<p>The post <a href="https://vishvakannada.com/article/edutainment/">ಕಲಿಕಾರಂಜನೆ</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ಶಿಕ್ಷಣದ ಜೊತೆ ಮನರಂಜನೆ ಸೇರಿದಾಗ</strong><strong></strong></h2>



<p class="wp-block-paragraph">ಮಾಧ್ಯಮಿಕ ಶಾಲೆಯ ಎಂಟನೆಯ ತರಗತಿ. ಖಗೋಳಶಾಸ್ತ್ರದ ಪಾಠ ನಡೆಯುತ್ತಿದೆ. ಅಧ್ಯಾಪಕರು ಸೌರವ್ಯೂಹದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಪ್ಲೂಟೋ ಮತ್ತು ನೆಪ್ಚೂನ್‌ಗಳು ಸೂರ್ಯನ ಸುತ್ತುವ ಕಕ್ಷೆಗಳ ವೈಚಿತ್ರ್ಯವನ್ನು ವಿವರಿಸುತ್ತಿದ್ದಾರೆ. ೧೯೭೯ರಿಂದ ೧೯೯೯ರ ತನಕ ಪ್ಲೂಟೋವು ಭೂಮಿಗೆ ನೆಪ್ಚೂನ್‌ಗಿಂತ ಸಮೀಪವಾಗಿತ್ತು. ಈಗ ನೆಪ್ಚೂನ್ ಹತ್ತಿರ ಬಂದಿದೆ. ಇದಕ್ಕೆ ಕಾರಣವನ್ನು ವಿವರಿಸುತ್ತಿದ್ದಂತೆ ಚೂಟಿ ಹುಡುಗನೊಬ್ಬನಿಂದ ಪ್ರಶ್ನೆ ಬಂತು &#8220;ಹಾಗಾದರೆ ಅವುಗಳು ಒಂದಕ್ಕೊಂದು ಪರಸ್ಪರ ಢಿಕ್ಕಿ ಹೊಡೆಯುವುದಿಲ್ಲವೇ?&#8221;. ಅದು ಅಸಾಧ್ಯ ಎಂಬುದನ್ನು ವಿವರಿಸಲು ಅಧ್ಯಾಪಕರು ಶತಾಯಗತಾಯ ಪ್ರಯತ್ನಿಸಿದರು. ಆದರೆ ಯಾವ ವಿದ್ಯಾರ್ಥಿಗೂ ಅದು ಅರ್ಥವಾಗಲಿಲ್ಲ. ಮೂರು ಆಯಾಮಗಳ ಅಂತರಿಕ್ಷದಲ್ಲಿ ನೆಪ್ಚೂನ್ ಮತ್ತು ಪ್ಲೂಟೋಗಳ ಕಕ್ಷೆಗಳು ಬೇರೆ ಬೇರೆ ಸಮತಲದಲ್ಲಿವೆ. ಇದನ್ನು ಸರಿಯಾದ ಮಾದರಿಯಿಲ್ಲದೆ ವಿವರಿಸಲು ಅಸಾಧ್ಯ. ಕೇವಲ ನಿರ್ಜೀವ ಮಾದರಿಯಿಂದಲೂ ಇದನ್ನು ವಿವರಿಸುವುದು ಕಷ್ಟ. ಗಣಕದಲ್ಲಿ ಇದರ ಪ್ರತ್ಯನುಕರಣೆ (simulation) ಮೂಲಕ ಇದನ್ನು ತೋರಿಸಬಹುದು. ನೆಪ್ಚೂನ್ ಮತ್ತು ಪ್ಲೂಟೋಗಳ ಕಕ್ಷೆಗಳನ್ನು ಮತ್ತು ಪರಿಭ್ರಮಣವನ್ನು ಗಣಕದ ಪರದೆಯ ಮೇಲೆ ಮೂಡಿಸಿದಾಗ ಆ ಕಕ್ಷೆಗಳು ಹೇಗೆ ಬೇರೆ ಬೇರೆ ಸಮತಲದಲ್ಲಿವೆ ಮತ್ತು ಅವುಗಳು ಯಾಕೆ ಪರಸ್ಪರ ಢಿಕ್ಕಿ ಹೊಡೆಯಲು ಸಾಧ್ಯವಿಲ್ಲವೆಂಬ ಸತ್ಯ ವೇದ್ಯವಾಗುತ್ತದೆ.</p>



<p class="wp-block-paragraph">ಈಗ ನಮ್ಮ ಕನ್ನಡ ಭಾಷೆಯ ಕಲಿಕೆಗೆ ಬರೋಣ. ಪುಟ್ಟ ಹುಡುಗಿಯೊಬ್ಬಳು ಗಣಕದ ಪರದೆಯ ಮೇಲೆ ಮೂಡಿಬಂದ ಕನ್ನಡದ &#8220;ಆ&#8221; ಎಂಬ ಅಕ್ಷರದ ತುಂಡುಗಳನ್ನು ಸರಿಯಾಗಿ ಜೋಡಿಸುತ್ತಿದ್ದಾಳೆ. ಅಕ್ಷರವನ್ನು ಪೂರ್ತಿಯಾಗಿ ಜೋಡಿಸಿದಾಗ ಶಾಬ್ಬಾಸ್ ಎಂಬ ಧ್ವನಿ ಕೇಳಿಬರುತ್ತದೆ. ಈಗ &#8220;ಆ&#8221; ಅಕ್ಷರದ ಕೆಳಗೆ ಮೂಡಿಬಂದಿರುವ ಸ್ಪೀಕರಿನ ಚಿತ್ರದ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದಾಗ ಗಣಕದ ಸ್ಪೀಕರಿನಿಂದ &#8220;ಆ&#8221; ಎನ್ನುವ ಅಕ್ಷರದ ಉಚ್ಛಾರಣೆ ಕೇಳಿಬರುತ್ತದೆ. ಜೊತೆಗೆ &#8220;ಆ&#8221; ಅಕ್ಷರವನ್ನು ಬರೆಯುವ ರೀತಿಯನ್ನು ಚಿತ್ರಸಂಚಲನೆ (ಅನಿಮೇಶನ್) ವಿಧಾನದಲ್ಲಿ ಗಣಕದ ಪರದೆಯ ಮೇಲೆ ಮೂಡಿಸಲಾಗಿದೆ. ಪಕ್ಕದಲ್ಲೇ &#8220;ಆ&#8221; ಅಕ್ಷರದಿಂದ ಆರಂಭವಾಗುವ &#8220;ಆನೆ&#8221; ಎನ್ನುವ ಪದ ಮತ್ತು ಆನೆಯ ಚಿತ್ರ ಮೂಡಿ ಬಂದಿವೆ. &#8220;ಆನೆ&#8221; ಎನ್ನುವ ಪದದ ಮೇಲೆ ಮೌಸ್‌ನಿಂದ ಕ್ಲಿಕ್ ಮಾಡಿದಾಗ ಗಣಕದ ಸ್ಪೀಕರಿನಿಂದ &#8220;ಆನೆ&#8221; ಎನ್ನುವ ಪದದ ಉಚ್ಛಾರ ಕೇಳಿಸುತ್ತದೆ. ನೀವು ಈಗಾಗಲೇ ಗಮನಿಸಿರುವಂತೆ ಆ ಹುಡುಗಿ ಗಣಕದಲ್ಲಿ ಆಟವೊಂದನ್ನು ಆಡುವ ಮೂಲಕ ಕನ್ನಡ ಅಕ್ಷರಗಳನ್ನು ಕಲಿಯುತ್ತಿದ್ದಾಳೆ.</p>



<p class="wp-block-paragraph">ಗಣಕಾಧಾರಿತ ಅಥವಾ ಮಾಹಿತಿ ತಂತ್ರಜ್ಞಾನಾಧಾರಿತ ಶಿಕ್ಷಣದಲ್ಲಿ ಕೇಳಿ ಬರುತ್ತಿರುವ ಒಂದು ಪದ&nbsp; edutainment.&nbsp; ಇದು education ಮತ್ತು entertainment&nbsp; ಎಂಬ ಪದಗಳ ಭಾಗಗಳ ಜೋಡಣೆಯಿಂದ ಆಗಿದೆ. ಕಲಿಕೆ ಮತ್ತು ಮನರಂಜನೆಯನ್ನು ಜೊತೆ ಜೊತೆಗೆ ನೀಡುವುದೇ ಇದರ ವಿಶೇಷತೆ. ಶಿಕ್ಷಣವು ಮನರಂಜನಾತ್ಮಕವಾಗಿರಲು ಇದು ಸಹಾಯ ಮಾಡುತ್ತದೆ.</p>



<p class="wp-block-paragraph">ಗಣಕ, ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳಲ್ಲಿ ಆಟ ಆಡುವುದರ ಮೂಲಕ ಕಲಿಯುವುದನ್ನು ಕಲಿಕಾರಂಜನೆ ಎನ್ನಬಹುದು. ಶಿಕ್ಷಣದ ಬಗ್ಗೆ ಕೆಲವು ಪ್ರಖ್ಯಾತ ಚಿಂತಕರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.</p>



<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">  &#8220;ಮಗು ತಾನೇ ಕಲಿಯುವುದು. ಆದರೆ ಅದು ತನ್ನದೇ ರೀತಿಯಲ್ಲಿ ಮುಂದುವರಿಯಲು ನೀವು ಸಹಾಯ ಮಾಡಬಹುದು. ಮಕ್ಕಳೇ ತಮ್ಮ ಬುದ್ಧಿಯನ್ನು ಉಪಯೋಗಿಸಿ ಜ್ಞಾನದ ಗಳಿಕೆಯನ್ನು ಕಾರ್ಯಗತ ಮಾಡುವುದನ್ನು ಕಲಿಯಲಿ&#8221;. </p>
<cite>-ಸ್ವಾಮಿ ವಿವೇಕಾನಂದ</cite></blockquote>



<blockquote class="wp-block-quote is-layout-flow wp-block-quote-is-layout-flow">
<p class="wp-block-paragraph"> &#8220;ಬಲಾತ್ಕಾರ ಮತ್ತು ಒತ್ತಡದಿಂದಾಗಿ ಗಳಿಸಿದ ಜ್ಞಾನವು ಮನಸ್ಸಿಗೆ ನಾಟುವುದಿಲ್ಲ. ಶಿಕ್ಷಣವು ಮನರಂಜನಾತ್ಮಕವಾಗಿರಲಿ&#8221;. </p>
<cite>-ಪ್ಲೂಟೋ</cite></blockquote>



<p class="wp-block-paragraph">ಇದೇ ರೀತಿಯ ಅಭಿಪ್ರಾಯವನ್ನು ಇನ್ನೂ ಹಲವು ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. ಮನರಂಜನೆಯ ಜೊತೆ ಬೋಧನೆಯ ಕೆಲಸದಲ್ಲಿ ಮಾಹಿತಿ ತಂತ್ರಜ್ಞಾನವು ಒದಗಿಸುವ ಹಲವು ಸವಲತ್ತುಗಳು ಪ್ರಮುಖ ಕಾಣಿಕೆ ನೀಡಬಲ್ಲವು.</p>



<figure class="wp-block-image size-full is-resized"><img decoding="async" src="https://gadgetloka.net/wp-content/uploads/2024/12/edutainment-chatgpt.webp" alt="" class="wp-image-1051" style="aspect-ratio:1;width:557px;height:auto"/><figcaption class="wp-element-caption"><strong>ಕಾಲ್ಪನಿಕ ಚಿತ್ರ</strong></figcaption></figure>



<p class="wp-block-paragraph">ಗಣಕ, ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳಲ್ಲಿ ಪಠ್ಯ, ಚಿತ್ರ, ಧ್ವನಿ, ಚಲನಚಿತ್ರ, ಚಿತ್ರಸಂಚಲನೆ (ಅನಿಮೇಶನ್) ಇತ್ಯಾದಿಗಳನ್ನು ಬಳಸಬಹುದು. ಇವುಗಳನ್ನೆಲ್ಲ ಒಟ್ಟು ಸೇರಿಸಿ ಬಹುಮಾಧ್ಯಮ (multimedia) ಎನ್ನುತ್ತಾರೆ. ಇವುಗಳು ಮಾತ್ರವಲ್ಲ, ಯಾವುದೇ ಪುಸ್ತಕ ನೀಡಲಾರದ ಇನ್ನೊಂದು ವೈಶಿಷ್ಟ್ಯ ಈ ಸಾಧನಗಳಿಗಿವೆ. ಅದು ಪ್ರತಿಸ್ಪಂದನಾತ್ಮಕ ಗುಣ (interactivity). ನಾವು ಉತ್ತರಿಸಿದ್ದು ಸರಿಯೇ ತಪ್ಪೋ ಎಂಬುದನ್ನ ಗಣಕವು ಕೂಡಲೇ ಹೇಳುತ್ತದೆ. ನಾವು ನೀಡಿದ ಒಳಪಡಿಕೆಗನುಗುಣವಾಗಿ ಗಣಕದ ಪರದೆಯ ಮೇಲೆ ಕ್ರಿಯೆ ನಡೆಯುತ್ತದೆ.</p>



<p class="wp-block-paragraph">ಭೌತಶಾಸ್ತ್ರದ ಪಾಠದಲ್ಲಿ ಸನ್ನೆಯ ಬಗ್ಗೆ ತಿಳಿಸಬೇಕಾಗಿದೆ ಎಂದಿಟ್ಟುಕೊಳ್ಳೋಣ. ಸನ್ನೆಯ ಒಂದು ಬದಿಯಲ್ಲಿ ಸ್ವಲ್ಪ ತೂಕ ಇಡಲಾಗಿದೆ. ಮಧ್ಯದಲ್ಲಿರುವ ಆಧಾರದಿಂದ ಎರಡು ತುದಿಗಳಿಗಿರುವ ದೂರವನ್ನೂ ನೀಡಲಾಗಿದೆ. ಇನ್ನೊಂದು ತುದಿಯಲ್ಲಿ ಎಷ್ಟು ತೂಕ ಇಡಬೇಕು ಎಂಬುದು ಪ್ರಶ್ನೆ. ಸರಿಯಾದ ತೂಕವನ್ನು ಇಟ್ಟಾಗ ಇನ್ನೊಂದು ಬದಿಯಲ್ಲಿಟ್ಟ ತೂಕ ಮೇಲೆ ಬರುತ್ತದೆ. ಈ ತೂಕ ಇಡುವ ಕೆಲಸ ಗಣಕದಲ್ಲಿ ನಡೆಯುತ್ತದೆ. ಅಂದರೆ ವಿದ್ಯಾರ್ಥಿಯು ಕೀಲಿಮಣೆ ಅಥವಾ ಮೌಸ್ ಬಳಸಿ ತೂಕದ ಬಟ್ಟುಗಳನ್ನು ಇಡುತ್ತಾ ಹೋಗುತ್ತಾನೆ. ತಪ್ಪು ಅಥವಾ ಸರಿಯಾದ ತೂಕ ಇಟ್ಟಿರುವುದನ್ನು ಗಣಕ ತಿಳಿಸುತ್ತದೆ. ಇಲ್ಲಿ ಚಿತ್ರಸಂಚಲನೆ ಮತ್ತು ಪ್ರತಿಸ್ಪಂದನಾತ್ಮಕ ಗುಣಗಳನ್ನು ಬಳಸಬಹುದು.</p>



<p class="wp-block-paragraph">ಒಂದು ಚಿತ್ರ ಸಾವಿರ ಪದಗಳಿಗೆ ಸಮಾನ. ಚಿತ್ರಗಳಿಲ್ಲದ ವಿವರಣೆ ಶುಷ್ಕ. ಗಣಕದಲ್ಲೇ ತಯಾರಿಸಿದ ಚಿತ್ರ ಅಥವಾ ಫೋಟೋಗಳನ್ನು ಬಳಸಿಕೊಳ್ಳಬಹುದು. ಪ್ರವಾಸೋದ್ಯಮ, ಪ್ರಾಣಿ, ಪಕ್ಷಿ, ಇತ್ಯಾದಿಗಳ ಬಗ್ಗೆ ಹೇಳುವಾಗ ನಿಜವಾದ ಭಾವಚಿತ್ರಗಳನ್ನು ಬಳಸಬೇಕು. ಧ್ವನಿ ಬಹುಮಾಧ್ಯಮದ ಇನ್ನೊಂದು ಪ್ರಮುಖ ಅಂಗ. ಧ್ವನಿಯನ್ನು ಹಲವು ರೀತಿಯಲ್ಲಿ ದುಡಿಸಿಕೊಳ್ಳಬಹುದು. ದೃಶ್ಯದಿಂದ ದೃಶ್ಯಕ್ಕೆ ಸರಾಗವಾಗಿ ಬದಲಾಯಿಸಲು, ತಪ್ಪು ಸರಿ ಎನ್ನುವುದನ್ನು ತಿಳಿಸಲು, ಪ್ರಾಣಿ ಪಕ್ಷಿಗಳ ನೈಜ ಧ್ವನಿ ಹೇಗಿರುತ್ತದೆಂದು ತಿಳಿಸಲು, ಅಕ್ಷರಗಳ ಉಚ್ಛಾರಣೆ ಹೇಗೆಂದು ತಿಳಿಸಲು, ಸಂಗೀತ ಕಲಿಸಲು, ಹೀಗೆ ಹಲವು ರೀತಿಯಲ್ಲಿ ಧ್ವನಿಯ ಉಪಯೋಗ ಮಾಡಬಹುದು.</p>



<p class="wp-block-paragraph">ಅನಿಮೇಶನ್ ಅರ್ಥಾತ್ ಚಿತ್ರ ಸಂಚಲನೆ ಗಣಕದಲ್ಲಿ ಮಾತ್ರ ಸಾಧ್ಯ. ಬಹುಮಾಧ್ಯಮದ ಅಂಗಗಳಲ್ಲೇ ಇದು ಅತ್ಯಂತ ಪರಿಣಾಮಕಾರಿ. ಹೃದಯದ ನಾಲ್ಕು ಕವಾಟಗಳ ಕೆಲಸ, ಅಂತರ್ದಹನ ಯಂತ್ರ ಕಾರ್ಯನಿರ್ವಹಿಸುವ ರೀತಿ, ನ್ಯೂಟನನ ಮೂರನೆಯ ನಿಯಮದ ವಿವರಣೆ, ಹೀಗೆ ಹಲವಾರು ಉದಾಹರಣೆಗಳಿವೆ. ನೃತ್ಯ, ಯೋಗ ಇತ್ಯಾದಿಗಳ ಕಲಿಕೆಯಲ್ಲೂ ಚಲನಚಿತ್ರದ ತುಣುಕುಗಳನ್ನು ಬಳಸಬಹುದು.</p>



<p class="wp-block-paragraph">ಮೂರು ಆಯಾಮದಲ್ಲಿ ವೀಕ್ಷಿಸಬಹುದಾದ <a href="https://vishvakannada.com/article/metaverse/" target="_blank" rel="noopener" title="">ಮಿಥ್ಯಾವಾಸ್ತವ ವೀಕ್ಷಕಗಳನ್ನೂ</a> (virtual reality viewer) ಬಳಸಿ ಮೂರು ಆಯಾಮದ ಭ್ರಮಾಲೋಕದ ವೀಕ್ಷಣೆ ಮಾಡಬಹುದು. ಈ ತಂತ್ರಜ್ಞಾನವನ್ನೂ ಸಮರ್ಥವಾಗಿ ಶಿಕ್ಷಣದಲ್ಲಿ ಬಳಸಿಕೊಳ್ಳಬಹುದು. ಉದಾಹರಣೆಗೆ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಕೈಗೆ ಗಣಕಕ್ಕೆ ಜೋಡಿಸಲ್ಪಟ್ಟ ಗ್ಲೋವ್ಸ್, ಕಣ್ಣಿಗೆ ಮೂರು ಆಯಾಮಗಳ ಮಿಥ್ಯಾವಾಸ್ತವ ವೀಕ್ಷಕ ಜೋಡಿಸಿಕೊಂಡು ಮೂರು ಆಯಾಮಗಳ ಮಿಥ್ಯಾಪ್ರಪಂಚದಲ್ಲಿ ಶಸ್ತ್ರಚಿಕಿತ್ಸೆ ಕಲಿಯುತ್ತಾರೆ. ಅವರ ಕಣ್ಣ ಮುಂದೆ ಯಾವುದೇ ರೋಗಿ ಇರುವುದಿಲ್ಲ. ಅವರು ನಿಜವಾದ ಶಸ್ತ್ರಚಿಕಿತ್ಸೆ ಮಾಡುತ್ತಿರುವುದಿಲ್ಲ. ಎಲ್ಲವೂ ಮೂರು ಆಯಾಮಗಳ ಮಿಥ್ಯಾಪ್ರಪಂಚದಲ್ಲಿ ನಡೆಯುತ್ತದೆ. ಯಾರಿಗೂ ಯಾವ ರೀತಿಯ ತೊಂದರೆಯೂ ಆಗದೆ ವಿದ್ಯಾರ್ಥಿಗಳು ಶಸ್ತ್ರಚಿಕಿತ್ಸೆ ಕಲಿಯುತ್ತಾರೆ.</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/edutainment/">ಕಲಿಕಾರಂಜನೆ</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/edutainment/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಕೆಡಲೆಂದೇ ವಿನ್ಯಾಸ ಮಾಡುವುದು</title>
		<link>https://vishvakannada.com/article/designed-to-fail/</link>
					<comments>https://vishvakannada.com/article/designed-to-fail/#respond</comments>
		
		<dc:creator><![CDATA[pavanaja]]></dc:creator>
		<pubDate>Thu, 19 Dec 2024 14:55:13 +0000</pubDate>
				<category><![CDATA[ಲೇಖನ]]></category>
		<category><![CDATA[Designed to fail]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[ಕೆಡಲೆಂದೇ ವಿನ್ಯಾಸ ಮಾಡುವುದು]]></category>
		<category><![CDATA[ಗ್ಯಾಜೆಟ್]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ಮೋಸ]]></category>
		<category><![CDATA[ಯೋಜಿತ ಹಾಳಾಗುವಿಕೆ]]></category>
		<category><![CDATA[ವಂಚನೆ]]></category>
		<guid isPermaLink="false">https://gadgetloka.net/?p=1047</guid>

					<description><![CDATA[<p>ಯೋಜಿತ ಹಾಳಾಗುವಿಕೆ ಸುಮಾರು ದಶಕಗಳ ಕಾಲ ಹಿಂದೆ ಹೋಗೋಣ. ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಎಂಬ ಸ್ಕೂಟರ್ ಇತ್ತು. ಅದಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಅದನ್ನು ಕೊಳ್ಳಲು ವರ್ಷಗಳ ಕಾಲ ಕಾಯಬೇಕಿತ್ತು. ಅದನ್ನು&#8230;</p>
<p>The post <a href="https://vishvakannada.com/article/designed-to-fail/">ಕೆಡಲೆಂದೇ ವಿನ್ಯಾಸ ಮಾಡುವುದು</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ಯೋಜಿತ ಹಾಳಾಗುವಿಕೆ</strong><strong></strong></h2>



<p class="wp-block-paragraph">ಸುಮಾರು ದಶಕಗಳ ಕಾಲ ಹಿಂದೆ ಹೋಗೋಣ. ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಎಂಬ ಸ್ಕೂಟರ್ ಇತ್ತು. ಅದಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಅದನ್ನು ಕೊಳ್ಳಲು ವರ್ಷಗಳ ಕಾಲ ಕಾಯಬೇಕಿತ್ತು. ಅದನ್ನು ಕೊಂಡವರು ಹತ್ತು ಹದಿನೈದು ವರ್ಷ ಬಳಸಿ ನಂತರ ಬಹುತೇಕ ಕೊಂಡ ಬೆಲೆಗೇ ಮಾರುತ್ತಿದ್ದರು. ಆ ಸ್ಕೂಟರ್ ನಂತರವೂ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತು. ಆಗಾಗ ಸರ್ವಿಸ್ ಮಾಡಿಸಿಕೊಂಡಿದ್ದರೆ ಸಾಕಿತ್ತು. ನನ್ನಲ್ಲಿದ್ದ ಬಜಾಜ್ ಸ್ಕೂಟರನ್ನು ನಾನೇ ತಕ್ಕ ಮಟ್ಟಿಗೆ ರಿಪೇರಿ ಮಾಡುತ್ತಿದ್ದೆ. ನಮ್ಮ ಮನೆಯಲ್ಲಿದ್ದ ಹಳೆಯ ಫಿಲಿಪ್ಸ್ ರೇಡಿಯೋ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿತ್ತು. ಆಗಾಗ ಬ್ಯಾಟರಿ ಬದಲಿಸಿಕೊಂಡಿದ್ದರೆ ಸಾಕಿತ್ತು.</p>



<p class="wp-block-paragraph">ಈಗಿನ ಕಾಲಕ್ಕೆ ಬರೋಣ. ನಮ್ಮ ಮನೆಯಲ್ಲಿದ್ದ ಮೈಕ್ರೋವೇವ್ ಅವನ್ ಹಾಳಾಯಿತು. ಕಂಪೆನಿಯ ಗ್ರಾಹಕ ಸೇವೆಗೆ ಫೋನಾಯಿಸಿದೆ. ಅವರ ಕಂಪೆನಿಯ ಪ್ರತಿನಿಧಿ ಬಂದು ಪರಿಶೀಲಿಸಿದ. ಮ್ಯಾಗ್ನೆಟ್ರಾನ್ ಸರಿಯಿದೆ. ಆದರೆ ಅದರ ಪ್ಯಾನಲ್ ಹೋಗಿದೆ ಎಂದ. ಅದನ್ನು ತೆಗೆದುಕೊಂಡು ಹೋಗಿ ನಂತರ ಹೊಸದನ್ನು ತಂದು ಹಾಕುತ್ತೇನೆ ಎಂದ. 2-3 ದಿವಸಗಳ ನಂತರ ಕಂಪೆನಿಯಿಂದ ಫೋನ್ ಬಂತು. ನಮ್ಮ ಉಪಕರಣ ಹಳೆಯದಾಗಿದೆ. ಆದುದರಿಂದ ಈಗ ಅದರ ಪ್ಯಾನೆಲ್ ಲಭ್ಯವಿಲ್ಲ. ಹೊಸ ಮೈಕ್ರೋವೇವ್ ಅವನ್ ಕೊಳ್ಳುವುದಿದ್ದಲ್ಲಿ 10% ರಿಯಾಯಿತಿ ಕೊಡಿಸುತ್ತೇವೆ ಎಂದರು. ನಮ್ಮ ಸಾಧನವನ್ನು ಕೊಂಡುಕೊಂಡು 6 ವರ್ಷ ಆಗಿತ್ತಷ್ಟೆ. ಅಷ್ಟು ಬೇಗ ಅದು ಹಳತಾಗಿ ಅದಕ್ಕೆ ಬೇಕಾದ ಬಿಡಿಭಾಗಗಳು ಲಭ್ಯವಿಲ್ಲ ಎಂದಾಗಿತ್ತು. ಅದೇ ರೀತಿ ನಮ್ಮ ಮನೆಯ ವಾಟರ್ ಫಿಲ್ಟರ್‌ಗೂ ಆಗಿತ್ತು. ಮೂರೇ ವರ್ಷದಲ್ಲಿ ಅದಕ್ಕೆ ಬೇಕಾದ ಕೆಲವು ಬಿಡಿಭಾಗಗಳು ದೊರೆಯದೆ ಹೊಸ ಫಿಲ್ಟರ್ ಖರೀದಿಸಬೇಕಾಗಿ ಬಂದಿತ್ತು.</p>



<p class="wp-block-paragraph">ನನ್ನಲ್ಲಿ ಒಂದು ಬೋಸ್ ನೋಯಿಸ್ ಕ್ಯಾನ್ಸಲಿಂಗ್ ಹೆಡ್‌ಫೋನ್ ಇದೆ. ಸುಮಾರು ವರ್ಷಗಳ ನಂತರ ಅದರ ಬ್ಯಾಟರಿಯ ಆಯುಸ್ಸು ಮುಗಿಯಿತು. ನೀವು ಗಮನಿಸಿರಬಹುದು. ಇತ್ತೀಚೆಗೆ ದೊರೆಯುವ ಬಹುತೇಕ ಇಂತಹ ಸಾಧನಗಳಲ್ಲಿ ಬ್ಯಾಟರಿ ಸೀಲ್ ಆಗಿರುತ್ತದೆ. ಅದನ್ನು ನಾವು ಬದಲಿಸುವಂತಿಲ್ಲ. ಕಂಪೆನಿಗೆ ಫೋನ್ ಮಾಡಿದರೆ ಆ ಮಾದರಿ ಹಳೆಯದಾಯಿತು. ಅದರ ಬ್ಯಾಟರಿ ಈಗ ಲಭ್ಯವಿಲ್ಲ. ಹೊಸ ಹೆಡ್‌ಫೋನ್ ಕೊಳ್ಳಲು 25% ರಿಯಾಯಿತಿ ಕೊಡುತ್ತೇವೆ ಎಂಬ ಉತ್ತರ ಬಂತು.</p>



<p class="wp-block-paragraph">ಇದೇಕೆ ಹೀಗೆ?</p>



<p class="wp-block-paragraph">ಇಂತಹ ಉದಾಹರಣೆಗಳು ನಿಮ್ಮಲ್ಲೂ ಇರಬಹುದು. ಈಗ ಹಿಂದಿನ ಕಾಲದಂತಲ್ಲ. ಕೊಂಡುಕೊಂಡ ವಿದ್ಯುತ್ ಅಥವಾ ಇಲೆಕ್ಟ್ರಾನಿಕ್ ಸಾಧನವು 5 ಅಥವಾ 6 ವರ್ಷ ಮಾತ್ರ ಬಾಳಿಕೆ ಬರುತ್ತದೆ. ನಂತರ ಅದಕ್ಕೆ ಬೇಕಾದ ಬಿಡಿಭಾಗಗಳು ಅಥವಾ ಬ್ಯಾಟರಿ ದೊರೆಯುವುದಿಲ್ಲ. ಒಂದು ನಿರ್ದಿಷ್ಟ ಸಮಯದ ನಂತರ ಉಪಕರಣಗಳು ಕೆಲಸ ಮಾಡದಂತೆ ಆ ಸಾಧನವನ್ನು ಕಂಪೆನಿಯವರೇ ವಿನ್ಯಾಸ ಮಾಡಿರುತ್ತಾರೆ. ಇದಕ್ಕೆ ಕೆಡಲೆಂದೇ ವಿನ್ಯಾಸ ಮಾಡುವುದು ಅಥವಾ ಯೋಜಿತ ಹಾಳಾಗುವಿಕೆ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ designed to fail ಅಥವಾ planned obsolescence ಎನ್ನುತ್ತಾರೆ. ಹಲವಾರು ಕಂಪೆನಿಗಳು ಇದನ್ನು ಪಾಲಿಸಿಕೊಂಡು ಬರುತ್ತಿವೆ.</p>



<p class="wp-block-paragraph">ಯಾಕೆ ಕಂಪೆನಿಗಳು ಈ ರೀತಿ ಮಾಡುತ್ತಿವೆ? ಸ್ವಲ್ಪ ಆಲೋಚಿಸಿ. ನೀವು ಒಂದು ಉಪಕರಣ ತೆಗೆದುಕೊಂಡು ಹದಿನೈದು ಇಪ್ಪತ್ತು ವರ್ಷಗಳ ಕಾಲ ಬಳಸಿದರೆ ಅವರಿಗೆ ಪ್ರತಿ ವರ್ಷ ತಯಾರಿಸುವ ಉಪಕರಣಗಳ ವ್ಯಾಪಾರ ಆಗುವುದು ಹೇಗೆ? ಕೊಂಡುಕೊಂಡ ಸಾಧನವನ್ನೂ ನೀವು ಮತ್ತೆ ಮತ್ತೆ ರಿಪೇರಿ ಮಾಡಿ ಬಳಸಿದರೆ ಹೊಸ ವಸ್ತುಗಳನ್ನು ಕೊಳ್ಳುವವರು ಯಾರು? ಅದಕ್ಕೋಸ್ಕರ ಈ ರೀತಿ ಮಾಡುತ್ತಾರೆ ಎಂದುಕೊಳ್ಳಬಹುದು. ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಇನ್ನೂ ಒಂದು ವಿಷಯವಿದೆ. ಪ್ರತಿ ವರ್ಷ ಹೊಸ ತಂತ್ರಜ್ಞಾನ, ವಿಧಾನಗಳು ಬರುತ್ತಿವೆ. ಹಲವು ಸುಧಾರಣೆಗಳು ಆಗುತ್ತಿವೆ. ನೀವು ನೀಡುವ ಹಣಕ್ಕೂ ನಿಮಗೆ ದೊರೆಯುವ ಸವಲತ್ತುಗಳಿಗೂ ತಾಳೆ ಹಾಕಿದಾಗ ಪ್ರತಿ ವರ್ಷ ಮಾರುಕಟ್ಟೆಯಲ್ಲಿ ದೊರೆಯುವ ಉಪಕರಣದಲ್ಲಿ ಹೆಚ್ಚು ಸವಲತ್ತುಗಳು ದೊರೆಯುತ್ತವೆ ಎನ್ನಬಹುದು. ಇದರಿಂದಾಗಿ ಹಲವು ಜನರು ತಾವಾಗಿಯೇ ಹೊಸದನ್ನು ಕೊಳ್ಳುತ್ತಾರೆ. ಕೆಲವೊಮ್ಮೆ ಹಳೆಯದನ್ನು ಬದಲಾಯಿಸಿ ಹೊಸದನ್ನು ಕೊಳ್ಳುತ್ತಾರೆ. ಕಂಪೆನಿಗಳು ಇದಕ್ಕಾಗಿಯೇ ಏನೇನೋ ಸ್ಕೀಮುಗಳನ್ನು ಘೋಷಿಸಿರುತ್ತಾರೆ. ಒಟ್ಟಾರೆಯಾಗಿ ನೀವು ಹೊಸ ಹೊಸ ಉತ್ಪನ್ನಗಳನ್ನು ಕೊಳ್ಳುತ್ತಿರಬೇಕು. ಹಾಗಿದ್ದರೆ ಮಾತ್ರ ಕಂಪೆನಿಗಳಿಗೆ ಹೆಚ್ಚಿನ ಲಾಭ.</p>



<p class="wp-block-paragraph">ಈಗೀಗ ದೊರೆಯುತ್ತಿರುವ ಉಪಕರಣಗಳಲ್ಲಿ ರಿಪೇರಿ ಮಾಡುವಂತಹ ಅಂಗಗಳು ಬಹಳ ಕಡಿಮೆ ಇರುತ್ತವೆ. ವಾಶಿಂಗ್ ಮೆಶಿನ್‌ನಲ್ಲಿರುವ ಪ್ಯಾನೆಲ್‌ನಲ್ಲಿ ಒಂದು ಚಿಕ್ಕ ಭಾಗ ಹಾಳಾಗಿದ್ದರೂ ಇಡಿಯ ಪ್ಯಾನೆಲ್ ಬದಲಿಸಬೇಕು. ಇದೇ ನಿಯಮ ಫ್ರಿಜ್, ಮೈಕ್ರೋವೇವ್ ಅವನ್, ವಾಟರ್ ಫಿಲ್ಟರ್ ಇತ್ಯಾದಿಗಳಿಗೆ ಅನ್ವಯಿಸುತ್ತದೆ. ಇಲೆಕ್ಟ್ರಾನಿಕ್ ಸರ್ಕ್ಯುಟ್ ಬೋರ್ಡ್‌ಗಳನ್ನು ಇಡಿಯದಾಗಿ ಬದಲಿಸುತ್ತಾರೆ. ಹಿಂದಿನ ಕಾಲದಲ್ಲಿಯಂತೆ ಅದರಲ್ಲಿರುವ ಚಿಪ್, ಕೆಪಾಸಿಟರ್, ರೆಸಿಸ್ಟರ್, ಇತ್ಯಾದಿ ಬಿಡಿಭಾಗಗಳನ್ನು ಒಂದೊಂದಾಗಿ ಪರೀಕ್ಷಿಸಿ ಹಾಳಾದುದನ್ನು ಬದಲಿಸುವ ಪದ್ಧತಿ ಈಗಿಲ್ಲ. ಆ ಪ್ಯಾನೆಲ್ ದೊರೆಯದಿದ್ದರೆ ಇಡಿಯ ಉಪಕರಣವನ್ನೇ ಬದಲಿಸಬೇಕು.</p>



<p class="wp-block-paragraph">ಉಪಕರಣಗಳನ್ನು ತಯಾರಿಸುವಾಗ ಇದಕ್ಕೆ ಇಷ್ಟೇ ವರ್ಷ ಆಯುಸ್ಸು. ಇಷ್ಟು ವರ್ಷಗಳಲ್ಲಿ ಇದು ಹಾಳಾಗತಕ್ಕದ್ದು ಎಂಬ ನಿಯಮ ಪ್ರಕಾರವೇ ವಿನ್ಯಾಸ ಮಾಡಿರುತ್ತಾರೆ. ಉದಾಹರಣೆಗೆ ಯಂತ್ರಗಳಲ್ಲಿ ಹೆಚ್ಚು ಕಾಲ ಬಾಳಿಕೆ ಬರುವ ಉಕ್ಕಿನ ಭಾಗಗಳ ಬದಲಿಗೆ ಪಾಲಿಮರ್ ಬಳಸುತ್ತಾರೆ. ತೆಗೆದು ಬದಲಿಸಬಹುದಾದ ಬ್ಯಾಟರಿ ಬದಲಿಗೆ ಸೀಲ್ ಆದ ಬ್ಯಾಟರಿ ಇರುತ್ತದೆ. ಇದನ್ನು ಈಗ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಗಮನಿಸಿರಬಹುದು.</p>



<p class="wp-block-paragraph">ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ಗಳಿಗೆ ಆಗಾಗ ತಂತ್ರಾಂಶದ ಸುಧಾರಿತ ಹೊಸ ಆವೃತ್ತಿ ಬಿಡುಗಡೆ ಮಾಡುತ್ತಿರುತ್ತಾರೆ. ಇದು ಹೊಸ ಸವಲತ್ತುಗಳನ್ನು ನೀಡಲು, ಸುರಕ್ಷೆಯನ್ನು ಸುಧಾರಿಸಲು, ಹೊಸ ವೈರಸ್ ಬಂದರೆ ಅದನ್ನು ತಡೆಯಲು ಇತ್ಯಾದಿ ಕೆಲಸಗಳಿಗಾಗಿ ಆಗಿರುತ್ತದೆ. ಆದರೆ ಕೆಲವು ವರ್ಷಗಳ ನಂತರ ಹಳೆಯ ಫೋನ್‌ಅಥವಾ ಲ್ಯಾಪ್‌ಟಾಪ್‌ಗಳಿಗೆ ಈ ರೀತಿ ತಂತ್ರಾಂಶ ನವೀಕರಣ ನೀಡುವುದನ್ನು ನಿಲ್ಲಿಸುತ್ತಾರೆ. ಕಂಪೆನಿಗೆ ಇದಕ್ಕೆ ವಿವರಣೆ ಕೇಳಿದರೆ ಆ ಉಪಕರಣದ ಆಯುಸ್ಸು ಅಷ್ಟೇ ಎಂಬ ಉತ್ತರ ಬರುತ್ತದೆ.</p>



<p class="wp-block-paragraph">ಆಪಲ್ ಕಂಪೆನಿಯರು ತಮ್ಮ ಹಳೆಯ ಐಫೋನ್‌ಗಳಿಗೆ ತಂತ್ರಾಂಶದ ನವೀಕರಣದ ಹೆಸರಿನಲ್ಲಿ ಬಳಕೆದಾರರಿಗೆ ಮೋಸ ಮಾಡಿದ ವಿಷಯ ಹೊರಬಂದಿದೆ. ಅವರು ಏನು ಮಾಡುತ್ತಿದ್ದರೆಂದರೆ ಹಳೆಯ ಫೋನ್‌ಗಳಿಗೆ ತಂತ್ರಾಂಶ ನವೀಕರಿಸಿದ ನಂತರ ಅವುಗಳು ನಿಧಾನವಾಗಿ ಕೆಲಸ ಮಾಡುವಂತೆ ಮಾಡಿದ್ದರು. ಇದರಿಂದಾಗಿ ಜನರು ಹೊಸ ಐಫೋನ್ ಕೊಳ್ಳುವಂತೆ ಒತ್ತಡ ಹಾಕುವುದು ಅವರ ಉದ್ದೇಶವಾಗಿತ್ತು.</p>



<p class="wp-block-paragraph">ಕಂಪೆನಿಗಳ ಇಂತಹ ಕೆಟ್ಟ ವ್ಯಾಪಾರಿ ಬುದ್ಧಿಯ ವಿರುದ್ಧ ವ್ಯವಸ್ಥಿತ ಹೋರಾಟದ ಅಗತ್ಯವಿದೆ. ಸರಕಾರವು ಕೆಲವು ನಿಯಮಗಳನ್ನು ಮಾಡುವ ಅಗತ್ಯವೂ ಇದೆ.</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/designed-to-fail/">ಕೆಡಲೆಂದೇ ವಿನ್ಯಾಸ ಮಾಡುವುದು</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/designed-to-fail/feed/</wfw:commentRss>
			<slash:comments>0</slash:comments>
		
		
			</item>
		<item>
		<title>ಗೂಢನಾಣ್ಯಗಳ ನಿಗೂಢ ಜಗತ್ತು</title>
		<link>https://vishvakannada.com/article/cyptocurrency/</link>
					<comments>https://vishvakannada.com/article/cyptocurrency/#respond</comments>
		
		<dc:creator><![CDATA[pavanaja]]></dc:creator>
		<pubDate>Thu, 19 Dec 2024 14:16:52 +0000</pubDate>
				<category><![CDATA[ಲೇಖನ]]></category>
		<category><![CDATA[Bitcoin]]></category>
		<category><![CDATA[Cryptocurrency]]></category>
		<category><![CDATA[currency]]></category>
		<category><![CDATA[digital currency]]></category>
		<category><![CDATA[e-vishva]]></category>
		<category><![CDATA[e-ವಿಶ್ವ]]></category>
		<category><![CDATA[technology]]></category>
		<category><![CDATA[ಕ್ರಿಪ್ಟೊಕರೆನ್ಸಿ]]></category>
		<category><![CDATA[ಗೂಢನಾಣ್ಯ]]></category>
		<category><![CDATA[ಗೂಢನಾಣ್ಯಗಳ ನಿಗೂಢ ಜಗತ್ತು]]></category>
		<category><![CDATA[ಡಿಜಿಟಲ್ ಹಣ]]></category>
		<category><![CDATA[ಬಿಟ್ ಕಾಯಿನ್]]></category>
		<category><![CDATA[ಬ್ಲಾಕ್‌ಚೈನ್]]></category>
		<category><![CDATA[ಮಾಹಿತಿ ತಂತ್ರಜ್ಞಾನ]]></category>
		<category><![CDATA[ಹಣಕಾಸು]]></category>
		<guid isPermaLink="false">https://gadgetloka.net/?p=1041</guid>

					<description><![CDATA[<p>ಕ್ರಿಪ್ಟೊಕರೆನ್ಸಿಗಳ ಕಿರು ಪರಿಚಯ “ಬಿಟ್ ಕಾಯಿನ್ ಹಗರಣದ ಆರೋಪಿ 5000 ಬಿಟ್ ಕಾಯಿನ್ ದೋಚಿದ್ದನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ&#160; ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ&#160; ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಕದ್ದ ಆ ಬಿಟ್ ಕಾಯಿನ್&#8230;</p>
<p>The post <a href="https://vishvakannada.com/article/cyptocurrency/">ಗೂಢನಾಣ್ಯಗಳ ನಿಗೂಢ ಜಗತ್ತು</a> first appeared on <a href="https://vishvakannada.com">Vishva Kannada</a>.</p>]]></description>
										<content:encoded><![CDATA[<h2 class="wp-block-heading"><strong>ಕ್ರಿಪ್ಟೊಕರೆನ್ಸಿಗಳ ಕಿರು ಪರಿಚಯ </strong><strong></strong></h2>



<blockquote class="wp-block-quote is-layout-flow wp-block-quote-is-layout-flow">
<p class="wp-block-paragraph">“ಬಿಟ್ ಕಾಯಿನ್ ಹಗರಣದ ಆರೋಪಿ 5000 ಬಿಟ್ ಕಾಯಿನ್ ದೋಚಿದ್ದನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ&nbsp; ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ&nbsp; ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.</p>



<p class="wp-block-paragraph">ಕದ್ದ ಆ ಬಿಟ್ ಕಾಯಿನ್ ಎಲ್ಲಿದೆ?</p>



<p class="wp-block-paragraph">ಅದನ್ನು ಜಪ್ತಿ ಮಾಡಲಾಗಿದೆಯೇ?</p>



<p class="wp-block-paragraph">ಇಲ್ಲವೇ ಅವು ಇನ್ನೂ ಪತ್ತೆಯಾಗಿಲ್ಲವೇ?”</p>
</blockquote>



<p class="wp-block-paragraph">         -ಇವು ಕರ್ನಾಟಕದ ಖ್ಯಾತ ರಾಜಕಾರಣಿಯೊಬ್ಬರ ಹೇಳಿಕೆ. ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವಿದೆ. ಈ ಹೇಳಿಕೆಯನ್ನು ಓದಿದರೆ ಈ ಬಿಟ್‌ಕಾಯಿನ್ ಎಂಬುದು ಯಾವುದೋ ಒಂದು ಹೊಸ ನಮೂನೆಯ ನಾಣ್ಯ, ಅದನ್ನು ಯಾರೋ ಕದ್ದಿದ್ದಾರೆ, ಕದ್ದ ನಾಣ್ಯಗಳನ್ನು ಹುಡುಕಬೇಕಾಗಿದೆ ಎಂಬ ಅರ್ಥಗಳು ಹೊಳೆಯುತ್ತವೆ. ಆದರೆ ಈ <a href="https://vishvakannada.com/article/bitcoin/" target="_blank" rel="noopener" title="">ಬಿಟ್‌ಕಾಯಿನ್</a> ಎಂಬುದು ಕದ್ದು ಅಡಗಿಸಿಡಬಹುದಾದ ಭೌತಿಕ ನಾಣ್ಯಗಳಲ್ಲ. ಅವು ಡಿಜಿಟಲ್ ಜಗತ್ತಿನಲ್ಲಿ ವ್ಯವಹರಿಸುವ ಕಣ್ಣಿಗೆ ಕಾಣಿಸದ ಹಣ ಎನ್ನಬಹುದು. ಹಾಗೆಂದರೇನು ಎಂದು ತಿಳಿಯೋಣ.</p>



<p class="wp-block-paragraph">ಕಾಯಿನ್ ಎಂದರೆ ನಾಣ್ಯ. ಅದು ಹಣಕಾಸಿನ ಒಂದು ಭಾಗ. ಇದನ್ನು ಇಂಗ್ಲಿಷಿನಲ್ಲಿ ಕರೆನ್ಸಿ ಎನ್ನುತ್ತಾರೆ. ಈ ಹಣಕಾಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮೊದಲು ಗಮನಿಸೋಣ. ಹಣವನ್ನು ನೀಡಿ ನೀವು ವಸ್ತು ಅಥವಾ ಸೇವೆಗಳನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ದುಡಿಮೆಗೆ ಪ್ರತಿಫಲವಾಗಿ ನೀವು ನಾಣ್ಯ ಅಥವಾ ನೋಟುಗಳನ್ನು ಪಡೆಯುತ್ತೀರಿ. ಈ ನಾಣ್ಯಗಳನ್ನು ಠಂಕಿಸುವುದು ಮತ್ತು ನೋಟುಗಳನ್ನು ಮುದ್ರಿಸುವವರು ಯಾರು? ಆಯಾ ದೇಶದ ಸರಕಾರ ಅಥವಾ ಸರಕಾರದ ಮುಖ್ಯ ಬ್ಯಾಂಕ್ ಇದನ್ನು ಮಾಡುತ್ತದೆ. ಭಾರತದ ಮಟ್ಟಿಗೆ ಇದು ರಿಸರ್ವ್ ಬ್ಯಾಂಕ್. ದೇಶದಲ್ಲಿ ಹಣದ ಮುಗ್ಗಟ್ಟು ಬಂದಾಗ ಅವರು ಎಷ್ಟು ಬೇಕಾದರೂ ನೋಟು ಮುದ್ರಿಸಬಹುದೇ? ಇಲ್ಲ. ಸಾಮಾನ್ಯವಾಗಿ ಇಲ್ಲಿ ದೇಶದಲ್ಲಿರುವ ಒಟ್ಟು ಐಶ್ವರ್ಯಕ್ಕೆ ಸಮಾನವಾದ ಮೊತ್ತದ ನೋಟುಗಳನ್ನು ಮಾತ್ರವೇ ಮುದ್ರಿಸಲಾಗುತ್ತದೆ. ಈ ನೋಟು ವ್ಯವಹಾರವನ್ನು ಯಾರು ನಿಯಂತ್ರಿಸುತ್ತಾರೆ? ಉತ್ತರವನ್ನು ಈಗಾಗಲೇ ನೀಡಿ ಆಗಿದೆ -ಅದು ರಿಸರ್ವ್ ಬ್ಯಾಂಕ್. ಅಂದರೆ ಇಡಿಯ ವ್ಯವಹಾರ ಒಂದು ಕೇಂದ್ರೀಕೃತ ವ್ಯವಸ್ಥೆಯ ನಿಯಂತ್ರಣದಲ್ಲಿದೆ.</p>



<p class="wp-block-paragraph">ಈಗ ಬಹುತೇಕ ಹಣಕಾಸು ವ್ಯವಹಾರ ಕಾಗದದ ನೋಟುಗಳಿಂದ ಡಿಜಿಟಲ್‌ಗೆ ಬದಲಾಗಿವೆ. ನಮ್ಮ ಸರಕಾರವು ಸಾಧ್ಯವಿದ್ದಷ್ಟು ಡಿಜಿಟಲ್ ಹಣ ಪಾವತಿಗೆ ಉತ್ತೇಜನ ನೀಡುತ್ತಿದೆ. ನಮ್ಮಲ್ಲಿ ಸದ್ಯ ಬಳಕೆಯಲ್ಲಿರುವ ಡಿಜಿಟಲ್ ಹಣ ಎಂದರೆ ಯು.ಪಿ.ಐ., ಬ್ಯಾಂಕ್ ಖಾತೆ, ಇತ್ಯಾದಿ. ಇವೆಲ್ಲವುಗಳಲ್ಲೂ ಸಾಮಾನ್ಯ ಅಂಶವೆಂದರೆ ಯಾರಲ್ಲಿ ಎಷ್ಟು ಹಣ ಇದೆ ಎಂಬುದನ್ನು ಒಂದು ಡಿಜಿಟಲ್ ಲೆಡ್ಜರ್‌ನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಈ ಲೆಡ್ಜರ್ ಬ್ಯಾಂಕಿನ ನಿಯಂತ್ರಣದಲ್ಲಿರುತ್ತದೆ. ಅಂದರೆ ಇದು ಕೇಂದ್ರೀಕೃತ ವ್ಯವಸ್ಥೆ. ಕೇಂದ್ರೀಕೃತ ಲೆಡ್ಜರ್ ವ್ಯವಸ್ಥೆಯಿಂದಾಗಿ ಹಣವನ್ನು ಎರಡು ಕಡೆ ಬಳಕೆ ಮಾಡದಂತೆ ತಡೆಯಲಾಗುತ್ತದೆ.&nbsp;</p>



<p class="wp-block-paragraph">ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಈ ವ್ಯವಹಾರ ನಡೆದರೆ ಹೇಗೆ? ಅಂದರೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ವ್ಯವಸ್ಥೆಯೇ ಬ್ಲಾಕ್‌ಚೈನ್ ಮತ್ತು ಆ ವ್ಯವಸ್ಥೆಯನ್ನು ಬಳಸುವ ಹಣಕಾಸು ವ್ಯವಸ್ಥೆಯೇ ಬಿಟ್‌ಕಾಯಿನ್. ಇಲ್ಲಿಯ ಪ್ರಮುಖ ತತ್ತ್ವ ಎಂದರೆ ಮಾಹಿತಿಯ ವಿಕೇಂದ್ರೀಕರಣ.</p>



<figure class="wp-block-image size-full is-resized"><img decoding="async" src="https://gadgetloka.net/wp-content/uploads/2024/12/Bitcoin_Crypto_Sustainability.jpg" alt="" class="wp-image-1045" style="aspect-ratio:1.4988290398126465;width:429px;height:auto"/></figure>



<p class="wp-block-paragraph">ಈ ಬಿಟ್‌ಕಾಯಿನ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಸೂಚಿಸಿದ್ದು ಸತೋಷಿ ನಾಕಮೊಟೊ. ಇದು ಒಂದು ವ್ಯಕ್ತಿಯೋ ಅಥವಾ ಕೆಲವು ವ್ಯಕ್ತಿಗಳ ಗುಂಪೋ ಎಂದು ಯಾರಿಗೂ ಇದು ತನಕ ತಿಳಿದುಬಂದಿಲ್ಲ. ಇದು ನಡೆದುದು 2008ರಲ್ಲಿ. ಅವರು ಒಂದು ಶ್ವೇತಪತ್ರ ಅಥವಾ ಸಂಶೋಧನಾ ಪ್ರಬಂಧ ಮಂಡಿಸಿ ಅದರಲ್ಲಿ ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಅದಕ್ಕೆ ಅವರು ಸೂಚಿಸಿದ ಹೆಸರು ಬಿಟ್‌ಕಾಯಿನ್ ಎಂದು. ಈ ವ್ಯವಸ್ಥೆಯ ಪ್ರಮುಖ ಗುಣವೈಶಿಷ್ಟ್ಯವೆಂದರೆ ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿ ಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲ ಗಣಕದಲ್ಲೂ ಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದು ಗಣಕ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್ ಜಾಲದ ಹೆಸರೇ <a href="https://vishvakannada.com/article/blockchain/" target="_blank" rel="noopener" title="">ಬ್ಲಾಕ್‌ಚೈನ್</a>. ಬಿಟ್‌ಕಾಯಿನ್ ಬಳಸಿ ಜಗತ್ತಿನ ಮೊತ್ತಮೊದಲ ವ್ಯಾಪಾರ 2010ರಲ್ಲಿ ಆಯಿತು.</p>



<p class="wp-block-paragraph">ಬಿಟ್‌ಕಾಯಿನ್ ಸಂಪೂರ್ಣ ಡಿಜಿಟಲ್ ಹಣ. ಇದು ಯಾವುದೇ ಮುದ್ರಿತ ನೋಟು ಅಲ್ಲ. ಇದನ್ನು ಯಾವುದೇ ಒಂದು ದೇಶ ಅಥವಾ ಬ್ಯಾಂಕ್ ನಿಯಂತ್ರಿಸುತ್ತಿಲ್ಲ. ಇದರ ಮೂಲಕ ಮಾಡುವ ವ್ಯವಹಾರಗಳು ಸರಕಾರಗಳ ಸುಪರ್ದಿಗೆ ಬರುವುದಿಲ್ಲ. ಆದುದರಿಂದಲೇ ಹಲವು ಅವ್ಯವಹಾರಗಳಿಗೆ ಬಿಟ್‌ಕಾಯಿನ್ ಬಳಕೆಯಾಗುತ್ತಿದೆ. ಭಾರತ ಸರಕಾರವು ಬಿಟ್‌ಕಾಯಿನ್‌ಬಳಕೆಯನ್ನು 2018ರಲ್ಲಿ ನಿಷೇಧಿಸಿತ್ತು. 2019ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಈ ನಿಷೇಧವನ್ನು ತೆರವುಗೊಳಿಸಿ ಬಿಟ್‌ಕಾಯಿನ್ ಬಳಕೆ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಆದರೆ ಸರಕಾರವು ಇದು ತನಕ ಯಾವುದೇ ನಿಯಮಾವಳಿಗಳನ್ನು ರೂಪಿಸಿಲ್ಲ. ಈಗ ಒಂದು ಬಿಟ್‌ಕಾಯಿನ್ ಬೆಲೆ ಸುಮಾರು ರೂ.49 ಲಕ್ಷ ಇದೆ. ಬಿಟ್‌ಕಾಯಿನ್ ಬೆಲೆ ಷೇರು ಮಾರುಕಟ್ಟೆಯಲ್ಲಿ ಕಂಪೆನಿಗಳ ಷೇರು ಬೆಲೆಯಂತೆ ಮೇಲೆ ಕೆಳಗೆ ಹೋಗುತ್ತಿರುತ್ತದೆ.&nbsp;</p>



<p class="wp-block-paragraph">ಬಿಟ್‌ಕಾಯಿನ್ ಒಂದು ಗೂಢನಾಣ್ಯ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ cryptocurrency ಎನ್ನುತ್ತಾರೆ. ಈ ಡಿಜಿಟಲ್ ಹಣವನ್ನು ಇಟ್ಟುಕೊಳ್ಳಲು ನಿಮ್ಮಲ್ಲಿ ಒಂದು ಡಿಜಿಟಲ್ ಪರ್ಸ್ ಅಥವಾ ವ್ಯಾಲೆಟ್ ಇರಬೇಕು. ಇದೊಂದು ಅಕ್ಷರ ಮತ್ತು ಸಂಖ್ಯೆಗಳ ಸಮೂಹ. ಉದಾ- 932xxMFyFLfuDCs84Bf1DTU3Ua6nUMfEn7. ಇದು ಗೂಢಲಿಪೀಕರಿಸಲ್ಪಟ್ಟ (encrypted) ವಿಳಾಸ. ಈ ವಿಳಾಸಕ್ಕೆ ಬಿಟ್‌ಕಾಯಿನ್ ಕಳುಹಿಸಿದರೆ ಅದರ ಯಜಮಾನರಿಗೆ ಅದು ತಲುಪುತ್ತದೆ. ಈ ನಮೂನೆಯ ಗೂಢನಾಣ್ಯ ಬಿಟ್‌ಕಾಯಿನ್ ಮಾತ್ರವಲ್ಲ. ಹಲವಾರು ಗೂಢನಾಣ್ಯಗಳು (cryptocurrency) ಈಗ ಚಾಲನೆಯಲ್ಲಿವೆ. ಬಿಟ್‌ಕಾಯಿನ್ ಇವುಗಳಲ್ಲಿ ಮೊದಲನೆಯದು ಮತ್ತು ಸದ್ಯಕ್ಕೆ ಅತಿ ಜನಪ್ರಿಯವಾಗಿರುವುದು. ಈ ವ್ಯವಸ್ಥೆ ಹೇಗಿದೆ ಎಂದರೆ ಬಿಟ್‌ಕಾಯಿನ್ ಎಲ್ಲಿಂದ ಎಲ್ಲಿಗೆ ಹೋಗಿದೆ ಎಂದು ಕಂಡುಹಿಡಿಯುವುದು ಸುಲಭವಲ್ಲ. ಇದರಿಂದಾಗಿಯೇ ಹಲವು ನಮೂನೆಯ ಅವ್ಯವಹಾರಗಳಿಗೂ ಇವು ಬಳಕೆಯಾಗುತ್ತಿವೆ.</p>



<p class="has-text-align-right wp-block-paragraph"><strong>&#8211;</strong>ಡಾ<strong>| </strong>ಯು<strong>.</strong>ಬಿ<strong>. </strong>ಪವನಜ<strong></strong></p>



<p class="has-text-align-right wp-block-paragraph">gadgetloka @ gmail . com</p><p>The post <a href="https://vishvakannada.com/article/cyptocurrency/">ಗೂಢನಾಣ್ಯಗಳ ನಿಗೂಢ ಜಗತ್ತು</a> first appeared on <a href="https://vishvakannada.com">Vishva Kannada</a>.</p>]]></content:encoded>
					
					<wfw:commentRss>https://vishvakannada.com/article/cyptocurrency/feed/</wfw:commentRss>
			<slash:comments>0</slash:comments>
		
		
			</item>
	</channel>
</rss>

<!--
Performance optimized by W3 Total Cache. Learn more: https://www.boldgrid.com/w3-total-cache/?utm_source=w3tc&utm_medium=footer_comment&utm_campaign=free_plugin

Page Caching using Disk: Enhanced 

Served from: vishvakannada.com @ 2026-08-22 00:31:01 by W3 Total Cache
-->