ಬೆಂಗಳೂರು, ಜನವರಿ ೨೪, ೨೦೦೬: ಕರ್ನಾಟಕದ ರಾಜಕೀಯದ ಇತ್ತೀಚೆಗಿನ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದವರಿಗೆ ದೇವೇಗೌಡರ ನಟಿಸುವ ಸಾಮರ್ಥ್ಯ ವೇದ್ಯವಾಗಿರಬೇಕು. ಮೂರು ದಿನಗಳ ಹಿಂದೆಯಂತೂ ಅವರು ಗೋಳೋ ಎಂದು ಅತ್ತಿದ್ದರು. ನನ್ನ ಮಗ ನನ್ನ ಮಾತನ್ನು ಮೀರಿದ್ದಾನೆ ಎಂದು ಅವರು ಅತ್ತ ರಭಸ ಎಷ್ಟಿತ್ತೆಂದರೆ ಟಿಪ್ಪಣಿ ಬರೆದುಕೊಳ್ಳುತ್ತಿದ್ದ ಪತ್ರಿಕಾ ವರದಿಗಾರರ ಪುಸ್ತಕಗಳೆಲ್ಲ ಒದ್ದೆಯಾಗಿದ್ದವು. ಆರು ದಿನಗಳಲ್ಲಿ ಆರು ವಿಧದ, ಒಂದಕ್ಕೊಂದು ಸಂಪೂರ್ಣ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ. ನಿನ್ನೆಯ ಹೇಳಿಕೆಯಂತೂ ಕರ್ನಾಟಕದಲ್ಲಿ ಅವರ ಮಗ ಕುಮಾರಸ್ವಾಮಿ ಮಾಡಿದ ಎಲ್ಲ ಕಿತಾಪತಿಗೂ ದೇವೇಗೌಡರೇ ಸೂತ್ರಧಾರ ಎಂಬುದನ್ನು ಖಾತರಿ ಮಾಡಿದೆ. ಇಷ್ಟು ಚೆನ್ನಾಗಿ ನಟಿಸಿದ್ದಕ್ಕೆ ದೇವೇಗೌಡರ ಹೆಸರನ್ನು ನಟನೆಗಾಗಿ ಇರುವ ಆಸ್ಕರ್ ಪ್ರಶಸ್ತಿಗೆ ಸೂಚಿಸಲಾಗಿದೆ ಎಂದು ನಂಬಲನರ್ಹ ಮೂಲಗಳಿಂದ ತಿಳಿದು ಬಂದಿದೆ.